ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆ ಕೈಬಿಟ್ಟ ಸರಕಾರ, ಪರಿಸರ ಪ್ರೇಮಿಗಳ ಹೋರಾಟಕ್ಕೆ ಜಯ
ಮೈಸೂರು, ಜುಲೈ 6: ಚಾಮುಂಡಿಬೆಟ್ಟಕ್ಕೆ 'ರೋಪ್ ವೇ' ಅಳವಡಿಸುವ ಯೋಜನೆ ವಿರುದ್ಧ ಮೈಸೂರು ಜನತೆ ಹಾಗೂ ಪರಿಸರ ಪ್ರೇಮಿಗಳ ಹೋರಾಟ ಮಾಡಿದ್ದಕ್ಕೆ ಕೊನೆಗೆ ಜಯ ಸಿಕ್ಕಿದೆ. ರೋಪ್ ವೇ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಮೈಸೂರು ಜಿಲ್ಲಾಡಳಿತ ಕೈವಿಟ್ಟಿದೆ.
ಬುಧವಾರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ S.T.ಸೋಮಶೇಖರ್, ''ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳಕ್ಕಿಂತ, ಒಂದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಧಾರ್ಮಿಕ ಭಾವನೆಯಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು-ಪ್ರವಾಸಿಗರು ಬರುತ್ತಾರೆ. ಇದನ್ನ ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ. ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಅಳವಡಿಕೆ ಕೈ ಬಿಟ್ಟಿದ್ದೇವೆ'' ಎಂದು ತಿಳಿಸಿದರು.
ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡಿದೆ. ಬೆಟ್ಟಕ್ಕೆ ಹೋಗಲು ಸಾಕಷ್ಟು ರಸ್ತೆ ಮಾರ್ಗವಿದೆ, ಮೆಟ್ಟಿಲುಗಳಿವೆ. ಹೀಗಾಗಿ ಉದ್ದೇಶಿತ ರೋಪ್ ವೇ ಯೋಜನೆಯನ್ನು ಕೈ ಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಎಂಬ ಅಭಿಪ್ರಾಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದಲೂ ವ್ಯಕ್ತವಾಗಿದೆ ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ರಸ್ತೆ ಇರುವುದರಿಂದ ರೋಪ್ ವೇ ಬೇಡ
ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಕಾಲುಡಿಗೆಯಲ್ಲಿ, ವಾಹನಗಳ ಮೂಲಕ ಬೆಟ್ಟಕ್ಕೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಉತ್ತಮ ರಸ್ತೆ ಕೂಡ ಇರುವುದರಿಂದ ರೋಪ್ ವೇ ಬೇಡ ಎಂದು ಸಭೆಯಲ್ಲಿದ್ದವರು ಹೇಳಿದರು. ಪ್ರವಾಸೋದ್ಯಮ ಅಸೋಸಿಯೇಷನ್ನಿಂದ ಆಗಮಿಸಿದವರು ಮಾತ್ರ ರೋಪ್ ವೇ ಪರವಾಗಿ ಇದ್ದರು ಎಂದು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ
ಇದೊಂದು ಧಾರ್ಮಿಕ ಕೇಂದ್ರ. ಸಾಹಸ ಪ್ರವೃತ್ತಿ ಇಲ್ಲ. ಮೈಸೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಬೆಟ್ಟ ಪ್ರವಾಸೋದ್ಯಮ ಸ್ಥಳ ಅಲ್ಲ. ಬೆಟ್ಟದಲ್ಲಿ ಸ್ವಚ್ಛತೆ, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಬಗ್ಗೆ ಕೂಡ ಸಭೆಯಲ್ಲಿ ಪ್ರಸ್ತಾಪವಾಯಿತು. ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಕುಸಿದ ರಸ್ತೆ ಅಭಿವೃದ್ಧಿಗೆ ಇಂದು ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
3.74 ಕೋಟಿ ರೂ. ವೆಚ್ಚದಲ್ಲಿ ಸೋಮನಾಥಪುರ ದೇವಾಲಯ ಅಭಿವೃದ್ಧಿ
ಸೋಮನಾಥಪುರ ದೇವಾಲಯ ಯುನೆಸ್ಕೋ ಪಟ್ಟಿ ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ. 3.74 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಚರ್ಚೆಯಾಯಿತು. ನಗರೋತ್ಥಾನದಡಿ 2.15 ಕೋಟಿ ರೂ. ವೆಚ್ಚದಲ್ಲಿ ಪಿರಿಯಾಪಟ್ಟಣ ನಗರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಯಿತು ಎಂದರು.
ಪರಿಸರ ಪ್ರೇಮಿಗಳ ಹೋರಾಟಕ್ಕೆ ಜಯ
ಇನ್ನು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಯೋಜನೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿರುವುದದು ಪರಿಸರ ಪ್ರೇಮಿಗಳ ಹೋರಾಟಕ್ಕೆ ಸಂದ ಜಯ ಎಂದೇ ಬಣ್ಣಿಸಲಾಗುತ್ತಿದೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಸ ಬಾರದು ಎಂದು ಸಾಕಷ್ಟು ಪರಿಸರ ಪ್ರೇಮಿಗಳು ಈ ಯೋಜನೆಯನ್ನು ವಿರೋಧಿಸಿಕೊಂಡು ಬಂದಿದ್ದರು. ಇದೀಗ ರೋಪ್ ವೇ ಅಳವಡಿಕೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿದ್ದು ಪರಿಸರ ಪ್ರಿಯರ ಸಂತೋಷಕ್ಕೆ ಕಾರಣವಾಗಿದೆ.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಅಶ್ವಿನ್ ಕುಮಾರ್, ಮೇಯರ್ ಸುನಂದಾ ಪಾಲನೇತ್ರಾ, ಮೂಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.