ದಸರಾ ಉದ್ಘಾಟನೆಯಲ್ಲಿ ಎಸ್.ಎಲ್. ಭೈರಪ್ಪರಿಗೆ ಅಗೌರವ?
ಮೈಸೂರು, ಸೆಪ್ಟೆಂಬರ್ 29: ವಿಶ್ವವಿಖ್ಯಾತ ದಸರಾ ಉದ್ಘಾಟನೆ ವೇಳೆಗೆ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ ತೋರಲಾಗಿದೆ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಪ್ರತೀ ವರ್ಷ ನಾಡಹಬ್ಬ ದಸರಾದ ಉದ್ಘಾಟಕರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆದುಕೊಂಡು ಬರುವುದು ರೂಢಿ. ಇದು ಶಿಷ್ಠಾಚಾರ ಮತ್ತು ಸಂಪ್ರದಾಯ ಕೂಡ. ಆದರೆ ಉದ್ಘಾಟನಾಕಾರ ಎಸ್.ಎಲ್ ಭೈರಪ್ಪ ಅವರನ್ನೇ ಸರ್ಕಾರ ಹಾಗೂ ಮಂತ್ರಿಗಳು ಮರೆತುಬಿಟ್ಟಿದ್ದರು.
ದಸರಾ ಉದ್ಘಾಟನೆ; ಭಾಷಣದಲ್ಲೇ ರಾಜಕಾರಣಿಗಳ ಬೆವರಿಳಿಸಿದ ಎಸ್.ಎಲ್. ಭೈರಪ್ಪ
ಸಿಎಂ ಯಡಿಯೂರಪ್ಪ, ಮಂತ್ರಿಗಳು ಹಾಗೂ ಅಧಿಕಾರಿಗಳು ಭೈರಪ್ಪ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಮಹಿಷ ಪ್ರತಿಮೆಯಿಂದ ವೇದಿಕೆಗೆ ಕರೆದೊಯ್ಯುವ ನಿರೀಕ್ಷೆಯಿಂದ ಭೈರಪ್ಪ ಅವರು ಸುಮಾರು 30 ನಿಮಿಷಗಳ ಕಾಲ ಪ್ರತಿಮೆ ಬಳಿ ಕಾರಿನಲ್ಲೇ ಕುಳಿತಿದ್ದರು. ಆದರೆ ಅರ್ಧ ಗಂಟೆಯಾದರೂ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಬರಲೇ ಇಲ್ಲ. ಯಡಿಯೂರಪ್ಪ ಹಾಗೂ ಸಚಿವರೆಲ್ಲಾ ವೇದಿಕೆಯತ್ತ ಸಾಗಿದ ಮೇಲೆ ಭೈರಪ್ಪ ಅವರು ಬೇಸರದಿಂದ ಒಬ್ಬರೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದರು.