ಬೇಸಿಗೆ ಆರಂಭದಲ್ಲಿಯೇ ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ
ಮೈಸೂರು, ಮಾರ್ಚ್ 18; ಕಳೆದ ಮೂರು ವರ್ಷಗಳಿಂದ ಕೇರಳದ ವೈನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗಿರಲಿಲ್ಲ.
ಆದರೆ ಇದೀಗ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದನ್ನು ಗಮನಿಸಿದರೆ ಈ ಬಾರಿ ನೀರಿನ ಸಮಸ್ಯೆ ಎದುರಾಗುತ್ತಾ? ಎಂಬ ಭಯ ಕಾಡತೊಡಗಿದೆ. ಇಂತಹದೊಂದು ಭಯ ಎದುರಾಗಲು ಕಾರಣವೂ ಇದೆ.
ಕಬಿನಿ ಹಿನ್ನೀರಿನಲ್ಲಿ ವಿದೇಶಿ ಅತಿಥಿಗಳ ಕಲರವ...
ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿದ್ದ ನೀರಿನ ಮಟ್ಟಕ್ಕೂ ಈ ಬಾರಿಯ ನೀರಿನ ಮಟ್ಟಕ್ಕೂ ಸುಮಾರು 8 ಅಡಿಯಷ್ಟು ವ್ಯತ್ಯಾಸ ಕಂಡು ಬಂದಿದೆ. ಬೇಸಿಗೆಯ ಆರಂಭದಲ್ಲಿಯೇ ಇಷ್ಟೊಂದು ಅಂತರ ಕಂಡು ಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಂಡಿದ್ದೇ ಆದರೆ ನೀರಿಗೆ ಹಾಹಾಕಾರ ಎದುರಾಗಬಹುದಾ? ಎಂಬ ಪ್ರಶ್ನೆ ಹುಟ್ಟಿದೆ.
ಕಬಿನಿ ಜಲಾಶಯದಲ್ಲಿ ಮುಳುಗಿದ ಊರು ಯಾವುದು?
ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಕಬಿನಿ ಜಲಾಶಯವಿದೆ. ಕೇರಳ ರಾಜ್ಯದ ವೈನಾಡು ಜಿಲ್ಲೆಯಲ್ಲಿ ಪನಮರಮ್ ಮತ್ತು ಮಾನಂದವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುವ ನದಿ ಟಿ. ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.
ಕಬಿನಿ, ಕೆಆರ್ ಎಸ್ ನಿಂದ ನೀರು; ಕೊಳ್ಳೇಗಾಲದ ಗ್ರಾಮಗಳಿಗೆ ಆತಂಕ
ಕಳೆದ ವರ್ಷಕ್ಕಿಂತ 8 ಅಡಿ ಕುಸಿತ
ಹಾಗೆ ನೋಡಿದರೆ ಈ ಬಾರಿ ಜಲಾಶಯ ಭರ್ತಿಯಾದ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಇದ್ದ ಕಾರಣ ಹೊರ ಹರಿವಿನ ಪ್ರಮಾಣ ಹೆಚ್ಚು ಮಾಡಿದ್ದರೂ ಕೂಡ ಬಹಳಷ್ಟು ಸಮಯದವರೆಗೂ ಜಲಾಶಯದ ನೀರಿನ ಮಟ್ಟ ಹಾಗೆಯೇ ಇತ್ತು. ಆದರೆ ನಂತರದ ದಿನಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಕುಸಿಯಲಾರಂಭಿಸಿತು. ಸದ್ಯ 2,284 ಅಡಿಗಳಷ್ಟು ಸಾಮರ್ಥ್ಯದ ಜಲಾಶಯದಲ್ಲಿ 2,266.80 ಅಡಿಯಷ್ಟು ನೀರಿದೆ. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ 2,274.47 ಅಡಿಗಳಷ್ಟು ನೀರಿತ್ತು. ಇದನ್ನು ಗಮನಿಸಿದರೆ ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 8 ಅಡಿಯಷ್ಟು ಕಡಿಮೆ ನೀರು ಇರುವುದು ಒಂದಷ್ಟು ಆತಂಕಕಾರಿಯಾಗಿದೆ.
10.17 ಟಿಎಂಸಿಯಷ್ಟು ನೀರಿನ ಸಂಗ್ರಹ
ಈಗಷ್ಟೆ ಬೇಸಿಗೆ ಆರಂಭವಾಗಿದ್ದು ಮುಂದಿನ ದಿನಗಳು ಇನ್ನಷ್ಟು ಭೀಕರವಾಗಿ ಇರಲಿದ್ದು, ಬಿಸಿಲಿನ ಶಾಖಕ್ಕೆ ನೀರು ಆವಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಜತೆಗೆ ಅರಣ್ಯ ಪ್ರದೇಶದಲ್ಲಿ ಇತರೆ ನೀರಿನ ಮೂಲಗಳು ಬತ್ತುವುದರಿಂದ ವನ್ಯಪ್ರಾಣಿಗಳು ಕುಡಿಯಲು ಜಲಾಶಯದ ನೀರನ್ನು ಅವಲಂಭಿಸಲಿವೆ. ಹೀಗಾಗಿ ಜಲಾಶಯದ ನೀರಿನ ಬಳಕೆ ಹೆಚ್ಚಾಗುವುದರಿಂದ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿತ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ. ಜಲಾಶಯದಲ್ಲಿರುವ ನೀರಿನ ಸಂಗ್ರಹದ ಪ್ರಮಾಣ ಮತ್ತು ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣದ ವಿವರಗಳನ್ನು ನೋಡುವುದಾದರೆ ಸದ್ಯ ಜಲಾಶಯವು 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಇದೀಗ 10.17 ಟಿಎಂಸಿಯಷ್ಟು ನೀರಿದೆ.
ಹೊರಕ್ಕೆ 700 ಕ್ಯೂಸೆಕ್ ನೀರು
ಜಲಾಶಯಕ್ಕೆ ಹೊರಗಿನಿಂದ ಸುಮಾರು 75 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಕುಡಿಯುವ ನೀರು ಬಳಕೆಗೆ ಹಾಗೂ ಗ್ರಾಮೀಣ ಪ್ರದೇಶದ ಜನ, ಜಾನುವಾರುಗಳ ಅವಶ್ಯಕತೆಗೆ ಅನುಗುಣವಾಗಿ ಸುಮಾರು 700 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಹೀಗಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣಕ್ಕಿಂತ ಹತ್ತುಪಟ್ಟು ನೀರು ಜಲಾಶಯದಿಂದ ಹೊರಗೆ ಹೋಗುತ್ತಿದೆ. ಜಲಾಶಯದ ನೀರಿನ ಸಂಗ್ರಹಣೆಯನ್ನು ಗಮನಿಸಿದರೆ ಇನ್ನು ಸುಮಾರು 3.85 ಟಿಎಂಸಿ ನೀರನ್ನು ಮಾತ್ರ ಬಳಸಿಕೊಳ್ಳಬಹುದಾಗಿದೆ. ಉಳಿದಂತೆ ನೀರಿನ ಸಂಗ್ರಹಣೆಯನ್ನು ಡೆಡ್ ಸ್ಟೋರೆಜ್ ಎಂದು ಕರೆಯಲಾಗುತ್ತದೆ. ಅದು ಬಳಕೆಗೆ ಯೋಗ್ಯವಲ್ಲ.
ನೀರಿನ ಸಮಸ್ಯೆ ಎದುರಾಗದೆಂಬ ನಂಬಿಕೆ
ಕೇರಳಕ್ಕೆ ಮಾನ್ಸೂನ್ ಬಹುಬೇಗ ಕಾಲಿಟ್ಟರೆ ಜಲಾಶಯಕ್ಕೆ ನೀರು ಹರಿದು ಬರಲಿದೆ. ಬೇಸಿಗೆಯಲ್ಲಿಯೂ ಆಗೊಮ್ಮೆ ಈಗೊಮ್ಮೆ ಮಳೆ ಬರುವುದರಿಂದ ನೀರಿನ ತೊಂದರೆಯಾಗಲಾರದು ಎಂಬುದು ಜನರ ಅಭಿಪ್ರಾಯವಾಗಿದೆ. ಜಲಾಶಯ ನೀರನ್ನು ಸುಮಾರು 1.80 ಲಕ್ಷಕ್ಕೂ ಹೆಚ್ಚು ಅಚ್ಚುಕಟ್ಟು ಪ್ರದೇಶದ ರೈತರು ಬಳಸಿ ಕೃಷಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕೃಷಿಯನ್ನು ಹೊರತು ಪಡಿಸಿ ಕೇವಲ ಕುಡಿಯಲು ಮಾತ್ರ ನೀರನ್ನು ಸರಬರಾಜು ಮಾಡುವುದರಿಂದ ನೀರಿನ ಸಮಸ್ಯೆ ಎದುರಾಗದು ಎಂಬುದು ಜನರ ನಿರೀಕ್ಷೆಯಾಗಿದೆ. ಯುಗಾದಿ ವೇಳೆಗೆ ಮಳೆ ಬರುವುದರಿಂದ ಈ ಬಾರಿ ಯಾವುದೇ ಸಮಸ್ಯೆಯಾಗದು ಎಂಬ ನಂಬಿಕೆಯಲ್ಲಿ ಜನರಿದ್ದಾರೆ.