ಮೈಸೂರು ಉಸ್ತುವಾರಿ ಸಿಗದಿದ್ದಕ್ಕೆ ಮುನಿಸಿಕೊಂಡರಾ ರಾಮದಾಸ್?
ಮೈಸೂರು, ಆಗಸ್ಟ್ 26: ಮೈಸೂರು ಉಸ್ತುವಾರಿ ಸಿಗದಿದ್ದಕ್ಕೆ ಶಾಸಕ ರಾಮ್ ದಾಸ್ ಮುನಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಇಣುಕಿದೆ. ಇದಕ್ಕೆ ಮೂಲ, ಇಂದು ದಸರೆಗೆ ಆಗಮಿಸುವ ಗಜಪಡೆಯನ್ನು ಬರಮಾಡಿಕೊಳ್ಳಲು ರಾಮ್ ದಾಸ್ ಗೈರಾಗಿದ್ದು. ಸಚಿವ ಸೋಮಣ್ಣ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ದಸರೆಯ ಸಭೆಗೂ ಕಳೆದ ವಾರ ಗೈರಾಗಿದ್ದು ಮುನಿಸಿನ ವಿಚಾರಕ್ಕೆ ಪುಷ್ಟಿ ನೀಡಿದಂತಿದೆ.
ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಗೆ ಅಸಮಾಧಾನ ಇರುವುದನ್ನು ಇಂದು ಖುದ್ದು ಉಸ್ತುವಾರಿ ಸಚಿವ ಸೋಮಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಅವರಿಗೆ ಕರೆ ಮಾಡುತ್ತಿದ್ದೇನೆ. ಆದರೆ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಆ.28ರಂದು ಮತ್ತೆ ಮೈಸೂರಿಗೆ ಬರುತ್ತೇನೆ. ಅಂದು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸುತ್ತೇನೆ. ಇದು ವರ್ಷಕ್ಕೊಮ್ಮೆ ಬರುವ ನಾಡಹಬ್ಬ. ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಬೇಕು ಎಂಬುದು ನಮ್ಮ ಆಸೆ. ಮುನಿಸು ಬಿಟ್ಟು ಮುಂದಿನ ಕಾರ್ಯಕ್ರಮಗಳಿಗೆ ಬರುವ ವಿಶ್ವಾಸ ಇದೆ" ಎಂದರು.
ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಅಳಿಯ ಹಾಗೂ ಬಿಜೆಪಿ ಶಾಸಕ ಹರ್ಷವರ್ಧನ್ ಗೈರಾಗಿದ್ದಾರೆ. ಇತ್ತ ಕೆ.ಮಹದೇವ್ ಹೊರತುಪಡಿಸಿ ಜೆಡಿಎಸ್ ಕಾಂಗ್ರೆಸ್ ಶಾಸಕರೂ ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಗೈರಾಗಿದ್ದು, ಇವರೆಲ್ಲರ ಅನುಪಸ್ಥಿತಿಯಲ್ಲಿ ಇಂದು ಗಜಪಡೆ ಸ್ವಾಗತ ಕಾರ್ಯಕ್ರಮ ನಡೆಯಿತು.
ಗಜಪಯಣದ ಕಾರ್ಯಕ್ರಮದಲ್ಲಿ ಸಚಿವರು ಬರುವ ಮುನ್ನವೇ ಪೂಜೆ ನೆರವೇರಿಸಿ ರಾಮದಾಸ್ ಮುಜುಗರಕ್ಕೊಳಗಾಗಿದ್ದರು. ಇದೀಗ ಜಿಲ್ಲಾಡಳಿತದ ಅಧಿಕೃತ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.