ತವರು ಜಿಲ್ಲೆಯಲ್ಲಿ ನಡೆಯದ ಸಿದ್ದರಾಮಯ್ಯರ ಆಟ..!
ಮೈಸೂರು, ಫೆಬ್ರವರಿ 27: ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತನ್ನು ಗಾಳಿಗೆ ತೂರಿ ಸ್ವಪಕ್ಷದವರೇ ಜೆಡಿಎಸ್ಗೆ ಮೈಸೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ದಕ್ಕುವಂತೆ ಮಾಡಿರುವುದು ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ನಾಯಕರಲ್ಲಿನ ಭಿನ್ನಾಭಿಪ್ರಾಯ, ಜೆಡಿಎಸ್ನ ಅವಕಾಶವಾದಿತನ, ಬಿಜೆಪಿಯ ಅಧಿಕಾರದಾಹ ಎಲ್ಲವೂ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಬಳಿಕ ಬಯಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಮೈಸೂರು ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದ್ದ ವರ್ಚಸ್ಸು ಕಡಿಮೆಯಾಯಿತಾ ಎಂಬ ಪ್ರಶ್ನೆಯೂ ಮೂಡುತ್ತಿದೆ.
"ಗಂಡುಮಗು ಆದ್ರೆ ಓಕೆ, ಹೆಣ್ಣುಮಗು ಬೇಡ ಎಂದ್ರೆ ಹೇಗೆ?: ಅಮಾನತು ಮಾಡಿದ್ರೂ ನಾನು ಹೆದರಲ್ಲ"
ಹಾವು ಮುಂಗುಸಿಯಂತೆ ಕಿತ್ತಾಡಿದ್ದರು
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬಿದ್ದ ಬಳಿಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ದೊಡ್ಡ ಮಟ್ಟದಲ್ಲಿಯೇ ವಾಗ್ಯುದ್ಧ ನಡೆದಿತ್ತು. ಸಿದ್ಧಾಂತಗಳಿಲ್ಲದ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂಬುದಾಗಿ ಸಿದ್ದರಾಮಯ್ಯ ಜರೆದಿದ್ದರು. ಮೇಲಿಂದ ಮೇಲೆ ಈ ಇಬ್ಬರು ನಾಯಕರು ಒಬ್ಬರ ಮೇಲೆ ಒಬ್ಬರಾಗಿ ಆರೋಪಗಳ ಮಳೆ ಸುರಿಸುತ್ತಲೇ ಬಂದಿದ್ದರು.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಅಧಿಕಾರವಧಿ ಮುಗಿಯುತ್ತಾ ಬರುತ್ತಿದ್ದಂತೆಯೇ ರಾಜಕೀಯ ತಂತ್ರಗಾರಿಕೆ ಆರಂಭವಾಗಿದ್ದವು. ಯಾವುದೇ ಒಂದು ಪಕ್ಷವೂ ಬಹುಮತ ಪಡೆಯದ ಕಾರಣದಿಂದಾಗಿ ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಾಗಿತ್ತು. ಜೆಡಿಎಸ್ಗೆ ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟು ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿತ್ತು.
ಜೆಡಿಎಸ್ ಮೈತ್ರಿಗೆ ಸಿದ್ದರಾಮಯ್ಯ ವಿರೋಧ
ಆದರೆ ಈಗ ಮೇಯರ್ ಅಧಿಕಾರವಧಿ ಮುಗಿಯುತ್ತಿದ್ದಂತೆಯೇ ಜೆಡಿಎಸ್ಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿತ್ತು. ಜೆಡಿಎಸ್ನ ಮೈತ್ರಿಯೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಬಿಜೆಪಿ ತುದಿಗಾಲಿನಲ್ಲಿ ನಿಂತಿತ್ತು. ಆದರೆ ಜೆಡಿಎಸ್ ಜತೆ ಸೇರಿ ಕಾಂಗ್ರೆಸ್ ಅಧಿಕಾರ ಹಿಡಿಯವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಅವರು ಈ ವಿಚಾರದಲ್ಲಿ ಆಸಕ್ತಿ ತೋರಲಿಲ್ಲ. ಆದರೆ ಮೈಸೂರಿನ ಕಾಂಗ್ರೆಸ್ ನ ಶಾಸಕ ತನ್ವೀರ್ ಸೇಠ್ ಸೇರಿದಂತೆ ಕೆಲವು ನಾಯಕರು ಜೆಡಿಎಸ್ಗೆ ಬೆಂಬಲ ನೀಡಲು ತೆರೆ ಮರೆಯ ಪ್ರಯತ್ನ ನಡೆಸಿದ್ದರು.
ಮೇಯರ್ ಚುನಾವಣೆಗೆ ಗೈರು: ಜಿಟಿಡಿ, ಸಂದೇಶ್ ನಾಗರಾಜ್ ಅಮಾನತ್ತಿಗೆ ಆಗ್ರಹ
ಸಿದ್ದುಗೆ ಶಾಕ್ ನೀಡಿದ ಎಚ್ಡಿಕೆ ತಂತ್ರ
ಬಿಜೆಪಿ ನಾಯಕರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ, ಮೇಯರ್ ಸ್ಥಾನವನ್ನು ಬಿಟ್ಟುಕೊಡಲು ಕುಮಾರಸ್ವಾಮಿ ಸುತರಾಂ ಒಪ್ಪಿರಲಿಲ್ಲ. ಆದರೆ ಸಿದ್ದರಾಮಯ್ಯ ಅವರನ್ನು ಬದಿಗೆ ಸರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಕೆಲವು ನಾಯಕರ ಸಹಕಾರ ಪಡೆದು ಜೆಡಿಎಸ್ಗೆ ಬೆಂಬಲ ನೀಡಲು ಶಾಸಕ ತನ್ವೀರ್ ಸೇಠ್ ಬಣ ನಿರ್ಧರಿಸಿತ್ತು. ಮೇಲ್ನೋಟಕ್ಕೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಹೀಗಾಗಿ ಪ್ರತ್ಯೇಕವಾಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ನಿಂದ ಸ್ಪರ್ಧಿಸುವ ಕುರಿತಂತೆ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು.
ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ..!
ಇದರಿಂದಾಗಿ ಮೇಯರ್ ಸ್ಥಾನಕ್ಕೆ ಮೂರು ಪಕ್ಷದಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೆ ಚುನಾವಣೆ ವೇಳೆ ತನ್ವೀರ್ ಸೇಠ್ ಬಣ ಜೆಡಿಎಸ್ನ್ನು ಬೆಂಬಲಿಸಿದ್ದರಿಂದ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾದರು. ಈ ಬೆಳವಣಿಗೆ ಖುದ್ದು ಸಿದ್ದರಾಮಯ್ಯ ಅವರಿಗೆ ಶಾಕ್ ನೀಡಿದ್ದಂತು ಸತ್ಯ. ಈ ಅಚ್ಚರಿಯ ಬೆಳವಣಿಗೆಯಿಂದ ರಾಜ್ಯ ಮತ್ತು ಮೈಸೂರು ಭಾಗದ ಕಾಂಗ್ರೆಸ್ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಜತೆಗೆ ಸಿದ್ದರಾಮಯ್ಯ ಮತ್ತು ತನ್ವೀರ್ ಸೇಠ್ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿದೆ. ಇದರ ತೀವ್ರತೆ ರಾಜ್ಯ ಮಟ್ಟದಲ್ಲಿಯೂ ಪರಿಣಾಮವನ್ನು ಬೀರಲಿದೆ ಎಂಬುದು ಈಗ ನಡೆಯುತ್ತಿರುವ ಬೆಳವಣಿಗೆಯಿಂದ ಗೊತ್ತಾಗುತ್ತಿದೆ.
ತವರಲ್ಲಿ ನಡೆಯದ ಸಿದ್ದರಾಮಯ್ಯರ ಆಟ
ಸಿದ್ದರಾಮಯ್ಯ ಅವರ ಬೆಂಬಲಿಗರು ತನ್ವೀರ್ ಸೇಠ್ ವಿರುದ್ಧ ಸಿಟ್ಟಾಗಿದ್ದರೆ, ತನ್ವೀರ್ ಸೇಠ್ ಬೆಂಬಲಿಗರು ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದ್ದಾರೆ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿದ್ದರೂ ಅದು ಸ್ಪೋಟವಾಗಿರಲಿಲ್ಲ. ಆದರೆ ಮೇಯರ್ ಚುನಾವಣೆ ಕಾಂಗ್ರೆಸ್ ನಾಯಕರ ಅಸಮಾಧಾನವನ್ನು ಹೊರ ಹಾಕಲು ವೇದಿಕೆಯಾಗಿದೆ. ತವರು ಜಿಲ್ಲೆಯಲ್ಲಿಯೇ ತನ್ನ ಮಾತಿಗೆ ಬೆಲೆ ಸಿಕ್ಕಿಲ್ಲ ಎಂಬುದು ಸಿದ್ದರಾಮಯ್ಯ ಅವರನ್ನು ಆತಂಕಕ್ಕೆ ತಳ್ಳಿದೆ.
ಸದ್ಯ ರಾಜಕೀಯ ಜಂಜಾಟದಿಂದ ದೂರವಿರುವ ಸಲುವಾಗಿ ರೆಸಾರ್ಟ್ ಸೇರಿರುವ ಸಿದ್ದರಾಮಯ್ಯ ಅವರು ಅಲ್ಲಿ ಕುಳಿತು ಇನ್ಯಾವ ತಂತ್ರ ಮಾಡುತ್ತಾರೋ ಎಂಬುದು ಗೊತ್ತಿಲ್ಲ. ಆದರೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಹೊಗೆ ಹೇಗೆ ಶಮನವಾಗುತ್ತದೆ ಎಂಬುದು ಮಾತ್ರ ಎಲ್ಲರನ್ನು ಕಾಡುತ್ತಿರುವ ಕುತೂಹಲವಾಗಿದೆ.