ಮೇ 4ರವರೆಗೆ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
ಮೈಸೂರು, ಏಪ್ರಿಲ್ 21; ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಮೈಸೂರಿನಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಜನರು ಗುಂಪಾಗಿ ಸೇರುವುದನ್ನು ತಪ್ಪಿಸಲಾಗುತ್ತಿದೆ.
ಭಕ್ತರ ಆರೋಗ್ಯದ ದೃಷ್ಟಿಯಿಂದ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವು ಸಮಯಗಳ ಹಿಂದೆ ವಿಶೇಷ ದಿನಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತಾದರೂ ಸಾಮಾನ್ಯ ದಿನಗಳಲ್ಲಿ ಪ್ರವೇಶ ನೀಡಲಾಗಿತ್ತು. ಹೀಗಾಗಿ ಸ್ಥಳೀಯರು ಮಾತ್ರವಲ್ಲದೆ, ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿದ್ದರು.
ರಾಮನವಮಿ; ಮಾಸ್ಕ್ ವಿತರಿಸಿದ ರಾಮವೇಷಧಾರಿ!
ಇದೀಗ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಏ. 21ರ ರಾತ್ರಿ 9ಗಂಟೆಯಿಂದ ಮೇ 4ರ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮೈಸೂರು ಡಿಎಚ್ಒ ಡಾ.ಟಿ ಅಮರನಾಥ್ಗೆ ಕೊರೊನಾ ದೃಢ
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಒಂದೆಡೆಯಾದರೆ ವಾರಾಂತ್ಯದಲ್ಲಿ ಪ್ರವಾಹೋಪಾದಿಯಲ್ಲಿ ಜನ ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರುತ್ತಿದ್ದರು. ಸಾಮಾನ್ಯವಾಗಿ ಪಾದದಿಂದ ಸುಮಾರು ಒಂದು ಸಾವಿರ ಮೆಟ್ಟಿಲುಗಳನ್ನೇರುವ ಮೂಲಕ ಮುಂಜಾನೆಯ ವ್ಯಾಯಾಮ ಮಾಡುವ ಜನರಿದ್ದಾರೆ.
ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?
ಇವರು ಖಾಯಂ ಆಗಿ ಬರುತ್ತಾರೆ. ಮುಂಜಾನೆ ಐದು ಗಂಟೆಯಿಂದಲೇ ಬೆಟ್ಟವೇರಲು ಜನ ಬರುತ್ತಾರೆ. ಒಂದು ಸಾವಿರ ಮೆಟ್ಟಿಲೇರಿ ಚಾಮುಂಡೇಶ್ವರಿ ದೇಗುಲಕ್ಕೊಂದು ಸುತ್ತು ಹೊಡೆದು ಮರಳುವ ಅಭ್ಯಾಸವನ್ನು ಹಲವರು ಮಾಡಿಕೊಂಡಿದ್ದಾರೆ. ಆದರೆ ವಾರದಲ್ಲಿ ಮಂಗಳವಾರ, ಶುಕ್ರವಾರ ಮತ್ತು ವಾರಾಂತ್ಯದ ದಿನವಾದ ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೆಟ್ಟಿಲು ಹತ್ತುತ್ತಾರೆ.
ವಾರವಿಡೀ ಕೆಲಸ ಕಾರ್ಯಗಳಲ್ಲಿ ನಿರತರಾದವರು ವಾರದ ಅಂತ್ಯದಲ್ಲಿ ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿ ಖುಷಿಪಡುತ್ತಾರೆ. ಇದು ಇವತ್ತು ನಿನ್ನೆಯದಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬೆಟ್ಟವನ್ನೇರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಕೊರೋನಾ ಕಾರಣ ಮೆಟ್ಟಿಲು ಹತ್ತಲು ಅವಕಾಶ ನೀಡಿರಲಿಲ್ಲ.
ತದನಂತರ ಅವಕಾಶ ಮಾಡಿಕೊಡಲಾಯಿತು. ಅದರಲ್ಲೂ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜನ ಕೊರೊನಾ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರಲ್ಲದೆ, ಮಾಸ್ಕ್, ಸಾಮಾಜಿಕ ಅಂತರವನ್ನು ಮರೆತಿದ್ದರು. ಇದೀಗ ಸರ್ಕಾರ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಮುಂದೆ ಆಗಬಹುದಾದ ಅನಾಹುತ ತಡೆಯಲು ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.