ಕಡೇ ಆಷಾಢ ಶುಕ್ರವಾರ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತಸಾಗರ
ಮೈಸೂರು, ಜುಲೈ, 22: 4ನೇ ಹಾಗೂ ಕಡೆ ಆಷಾಢ ಶುಕ್ರವಾರದ ಪ್ರಯುಕ್ತ ಧಾರ್ಮಿಕ ಕೇಂದ್ರ ಚಾಮುಂಡಿ ಬೆಟ್ಟದಲ್ಲಿ ಭಕ್ತಸಾಗರವೇ ನೆರೆದಿತ್ತು. ಈ ಆಷಾಢ ಶುಕ್ರವಾರ ತಮಿಳುನಾಡಿನ ಭಕ್ತರಿಗೆ ಆದಿ ಶುಕ್ರವಾರವಾಗಿದೆ.
ಈ ದಿನದಂದು ಚಾಮುಂಡೇಶ್ವರಿ ದೇವಿ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂಬ ಕಲ್ಪನೆಯಿಂದ ರೋಡ್, ಸೇಲಂ, ಸತ್ಯಮಂಗಲ, ಚೆನ್ನೈನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಮೈಸೂರು ಅಂದರೆ ಮೊದಲು ನೆನಪಾಗುವುದೇ ತಾಯಿ ಚಾಮುಂಡೇಶ್ವರಿ. ಬೇರೆ ಊರುಗಳಿಂದ ಇಲ್ಲಿಗೆ ಬಂದವರು ತಾಯಿಯ ದರ್ಶನ ಪಡೆಯದೇ ಹಿಂತಿರುಗುವುದಿಲ್ಲ. ಇನ್ನು ಆಷಾಡ ಶುಕ್ರವಾರವಂತೂ ಭಕ್ತರ ಗಣವೇ ನೆರೆದಿರುತ್ತದೆ. ತಾಯಿಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತಸಮೂಹವೆ ಬರುತ್ತದೆ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತಾಧಿಗಳಲ್ಲಿ ಹೆಚ್ಚಿನವರು ಲಲಿತಮಹಲ್ ಹೆಲಿಪ್ಯಾಡ್ ಬಳಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ಕೆಎಸ್ಆರ್ಟಿಸಿ ಬಸ್ನಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಿದರು. ಕೆಲವರು ಚಾಮುಂಡಿ ಬೆಟ್ಟದ ಮೆಟ್ಟಿಲು ಮಾರ್ಗದಿಂದ ಸಾಗಿ ಬಂದು ದೇವರ ದರ್ಶನ ಪಡೆದರು. ಮುಂಜಾನೆಯಿಂದಲೇ ಚಳಿ, ಗಾಳಿ, ಹನಿ.. ಹನಿ.. ಮಳೆಯಲ್ಲೇ ಕೊಡೆ ಹಿಡಿದು ಮೆಟ್ಟಿಲು ಹತ್ತಿದರು. ದಾರಿಯುದ್ದಕ್ಕೂ ಚಾಮುಂಡೇಶ್ವರಿ ತಾಯಿಗೆ ಜಯಘೋಷವನ್ನು ಮೊಳಗಿಸಿದರು. ಅಷ್ಟೇ ಅಲ್ಲ ಭಕ್ತರು 1,101 ಮೆಟ್ಟಿಲುಗಳಿಗೆ ಅರಿಶಿಣ -ಕುಂಕುಮವನ್ನು ಹಚ್ಚಿ ಹರಕೆ ತೀರಿಸಿದರು. ಕಳೆದ ಮೂರು ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿನದಾಗಿ ನೆರೆದಿತ್ತು.
ವಿವಿಧ ಬಗೆಯ ಅಭಿಷೇಕಗಳ ಸಲ್ಲಿಕೆ
ಸೂರ್ಯ ಉದಯಿಸುವ ಮೊದಲು ಅಂದರೆ ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಕಾರ್ಯಕ್ರಮಗಳು ಆರಂಭವಾದವು. ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಗ್ಗೆ 5.30ಕ್ಕೆ ದೇವಿಗೆ ಸಿಂಹವಾಹಿನಿ ಅಲಂಕಾರ ಪೂರ್ಣಗೊಳಿಸಲಾಯಿತು. ನಂತರ ಬೆಳಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಕ್ತರು ಸರದಿಯಲ್ಲಿ ನಿಂತು ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಹೂವುಗಳ ಅಲಂಕಾರದಿಂದ ಕಂಗೊಳಿಸಿದ ದೇವಿ
ಚಾಮುಂಡೇಶ್ವರಿ ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಬಗೆ ಬಗೆಯ ಹೂವುಗಳಾದ ಸೇವಂತಿಗೆ, ಚೆಂಡು ಹೂವು, ಬೆಬಗೆಯ ಕಲರ್ಗಳಿಂದ ಕೂಡಿದ್ದ ಸೇವಂತಿಗೆ ಹೂವು ಸೇರಿದಂತೆ ಮುಂತಾದ ಹೂವುಗಳಿಂದಲೂ ಅಲಂಕಾರ ಮಾಡಲಾಗಿತ್ತು. ಹೆಣ್ಣು ಮಕ್ಕಳು ಹೂಗಳನ್ನು ಮೂಡಿದರೆ ಸಾಕು ಅದೇ ಒಡವೆಯಂತೆ ಕಾಣುತ್ತದೆ. ಹಾಗೆಯೇ ತಾಯಿ ಚಾಮುಂಡೇಶ್ವರಿಯು ಕೂಡ ನಾನಾ ಬಗೆಯ ಹೂವುಗಳಿಂದ ಕಂಗೊಳಿಸುತ್ತಿದ್ದಳು. ದೇವಿಯ ಸಿಂಗಾರದ ನಂತರ ಪ್ರಸಾದ ವಿನಿಯೋಗವು ನಡೆದಿದ್ದು, ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿ ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗಿತ್ತು..
ಭಕ್ತರೊಂದಿಗೆ ದೇವಿಗೆ ಪೂಜೆ ಸಲ್ಲಿಸಿದ ನಟ ದರ್ಶನ್
ಕಡೇ ಆಷಾಡ ಶುಕ್ರವಾರವಾದ್ದರಿಂದ ಚಲನಚಿತ್ರ ನಟ ದರ್ಶನ್ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬೆಟ್ಟಕ್ಕೆ ದರ್ಶನ್ ಆಗಮಿಸಿದ ಕಾರಣ ಅಭಿಮಾನಿಗಳು, ಭಕ್ತರು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು. ನಂತರ ದರ್ಶನ್ ಭಕ್ತರತ್ತ ಕೈಬೀಸಿ ಪೊಲೀಸರ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರೊಂದಿಗೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಕಾಂಗ್ರೆಸ್ ಮುಖಂಡ ಸೇರಿದಂತೆ ಹಲವರು ದೇವಿಯ ದರ್ಶನ ಪಡೆದರು.
ಕುಟುಂಬ ಸಮೇತ ಬಂದ ಕೆ.ಎಸ್ ಈಶ್ವರಪ್ಪ
ಇನ್ನು ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಳಿಕ ಮಾತನಾಡಿ, "ಪ್ರತೀ ವರ್ಷವೂ ಆಷಾಢ ಶುಕ್ರವಾರದಂದು ನಾಡದೇವಿ ಚಾಮುಂಡೇಶ್ವರಿಯ ದರ್ಶನ ಮಾಡಿ ಆಶೀರ್ವಾದ ಪಡೆಯುವುದು ವಾಡಿಕೆಯಾಗಿದೆ. ಹಾಗಾಗಿ ಈ ಬಾರಿಯೂ ಕುಟುಂಬ ಸಮೇತ ಬಂದಿದ್ದೇವೆ. ಸರ್ವರಿಗೂ ಒಳಿತು ನೀಡಲೆಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ," ಎಂದರು.