ದೇವಸ್ಥಾನದ ಪ್ರಸಾದವೇ ಬೇಡ, ನಾಸ್ತಿಕರ ಜೊತೆಗೆ ಅರ್ಚಕರಿಂದಲೂ ಸಹಮತ
ಮೈಸೂರು, ಜನವರಿ 30: ಸುಳ್ವಾಡಿ ಮಾರಮ್ಮ ಮತ್ತು ಚಿಂತಾಮಣಿಯ ಗಂಗಮ್ಮ ದೇವಿ ಪ್ರಸಾದ ಜನರನ್ನು ಬಲಿ ಪಡೆದ ಬೆನ್ನಲ್ಲೇ ಆಸ್ತಿಕ ವಲಯದಲ್ಲಿ ಭೀತಿ ಆವರಿಸಿಕೊಳ್ಳುವ ಜೊತೆಗೆ ದೇವಾಲಯಗಳಲ್ಲಿ ನೀಡುವ ಬೇಯಿಸಿದ ಸಿದ್ಧಪಡಿಸಿದ ಪ್ರಸಾದ ಸೇವಿಸಲು ಭಕ್ತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಶ್ರದ್ಧಾಭಕ್ತಿಯಿಂದ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆದು, ಅಲ್ಲಿ ನೀಡುತ್ತಿದ್ದ ಪ್ರಸಾದವನ್ನು ದೇವರ ಅನುಗ್ರಹ ಎಂತಲೇ ಭಾವಿಸಿಕೊಂಡು ಕಣ್ಣಿಗೆ ಒತ್ತಿಕೊಂಡು ಸೇವಿಸುತ್ತಿದ್ದವರೆಲ್ಲ ಇದೀಗ ಜೀವಭಯದಿಂದ ತಿನ್ನಲು ಅಂಜುತ್ತಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ದೇವಾಲಯಗಳಲ್ಲಿ ಪಾಯಸ, ಕೇಸರಿ ಬಾತ್, ಪುಳಿಯೊಗರೆ, ಪೊಂಗಲು, ಮೊಸರನ್ನ, ಕಲ್ಲು ಸಕ್ಕರೆ, ಲಾಡು ಸೇರಿದಂತೆ ವಿವಿಧ ಬಗೆಯ ಪ್ರಸಾದಗಳನ್ನು ವಿತರಿಸಲಾಗುತ್ತದೆ. ಈ ಪೈಕಿ ಇದೀಗ ದೇವಾಲಯಗಳಲ್ಲಿ ಭಕ್ತರು ಬೇಯಿಸಿದ ಪ್ರಸಾದ ಸೇವನೆಗೆ ಹಿಂಜರಿಯುತ್ತಿದ್ದಾರೆ ಎಂದು ಅರ್ಚಕರು ಹೇಳುತ್ತಿದ್ದಾರೆ.
ವಿಷ ಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಅರ್ಜಿ ಸಲ್ಲಿಸಿದ ವಕೀಲರು
ರಾಜ್ಯದಲ್ಲಿ ಪದೇ ಪದೆ ವಿಷವಾಗಿ ಪರಿಣಮಿಸಿದ ಪ್ರಸಾದದಿಂದ ನೂರಾರು ಜನರು ಜೀವನ್ಮರಣದ ಹೋರಾಟ ನಡೆಸಿ, ಅನೇಕರು ನಿತ್ರಾಣಗೊಂಡು ಸತ್ತು ಹೋದದ್ದನ್ನು ಕಂಡು ಇದೀಗ ಯಾವ ನಂಬುಗೆ ಮೇಲೆ ಪ್ರಸಾದ ತಿನ್ನಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
"ಪ್ರಸಾದ ತಿನ್ನಲು ಭಕ್ತರು ಭಯ ಬೀಳುತ್ತಿದ್ದಾರೆ. ಅರ್ಚಕರು ಇಡೀ ದೇವಾಲಯದ ಆವರಣದ ತುಂಬಾ ಕಣ್ಣಿಟ್ಟು ಎಲ್ಲರನ್ನೂ ಕಾಯಲು ಆಗುವುದಿಲ್ಲ. ಅದರಲ್ಲೂ ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯ ಮಾಡುವವರನ್ನು ಪತ್ತೆ ಹಚ್ಚುವುದು ಬಲು ಕಷ್ಟ. ಆದ್ದರಿಂದ ಪ್ರಸಾದವನ್ನು ದೇವರಿಗೆ ನೈವೇದ್ಯಕ್ಕಾಗಿ ಬೇಕಾಗುವಷ್ಟು ಮಾತ್ರ ಸಿದ್ಧಪಡಿಸುವಂತಾಗಬೇಕು. ಭಕ್ತರಿಗೆ ನೀಡಬಾರದು" ಎನ್ನುತ್ತಾರೆ ಅರ್ಚಕರು.
ಗುಣಮಟ್ಟ ಖಾತರಿಪಡಿಸಿಕೊಳ್ಳಿ
ಪ್ರಸಾದ ಎನ್ನುವುದು ತುಂಬಾ ಪವಿತ್ರವಾದದ್ದು. ಅದನ್ನು ಸಿದ್ಧಪಡಿಸಲು ಅದರದೇ ಆದ ವಿಧಿವಿಧಾನಗಳಿವೆ. ಸ್ವಚ್ಛವಾದ ಪಾತ್ರೆಗಳಲ್ಲಿ ಜಾಗ್ರತೆಯಿಂದ ಪ್ರಸಾದದ ಆಹಾರ ಬೇಯಿಸಬೇಕು. ಅದನ್ನು ಮೊದಲು ಅರ್ಚಕರೇ ತಿಂದು ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಭಕ್ತರೇ ಸಿದ್ಧಪಡಿಸಿಕೊಂಡು ಬಂದು ದೇವಾಲಯದ ಹೊರಗಡೆ ಪ್ರಸಾದ ಹಂಚುವುದನ್ನು ಮೊದಲು ನಿರ್ಬಂಧಿಸಬೇಕು ಎಂದು ಅರ್ಚಕರು ಒತ್ತಾಯಿಸಿದ್ದಾರೆ.
ಪ್ರಸಾದ ಸ್ವೀಕರಿಸದೆ ಬಚಾವಾದ ಸಾಲೂರು ಮಠದ ಶ್ರೀಗಳು
ಪ್ರಸಾದ ತಿನ್ನಲು ಅನುಮಾನ
"ಭಕ್ತರು ಮತ್ತು ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟ ಆಡುವುದು ರಾಕ್ಷಸಿ ಪ್ರವೃತ್ತಿ. ದೇವಾಲಯಗಳಲ್ಲಿ ಏನೇ ನೀಡಿದರೂ ಭಗವಂತನ ಪ್ರಸಾದ ಎಂದು ಜನರು ಸ್ವೀಕರಿಸುತ್ತಾರೆ. ಇಂತಹ ಘಟನೆಗಳಿಂದ ಜನರು ದೇವಾಲಯಗಳಿಗೆ ಬರಲು ಮತ್ತು ಪ್ರಸಾದ ಸ್ವೀಕರಿಸಲು ಹಿಂಜರಿದು, ಅನುಮಾನ ಪಡುತ್ತಿದ್ದಾರೆ" ಎನ್ನುತ್ತಾರೆ ಮಾರಮ್ಮ ದೇವಸ್ಥಾನದ ಅರ್ಚಕರಾದ ನಿರಂಜನ್.
ವಿಷ ಪ್ರಸಾದ ಪ್ರಕರಣ: ಊರಿಗೆ ಕಿಚ್ಚುಗುತ್ತಿ ಎಂಬ ಹೆಸರು ಬಂದಿದ್ದು ಹೇಗೆ?
ತುಂಬಾ ಬೇಸರದ ಸಂಗತಿ
"ಇತ್ತೀಚಿನ ಪ್ರಸಾದ ದುರಂತಗಳನ್ನು ನೋಡಿದ ಬಳಿಕ ದೇವಾಲಯಗಳಲ್ಲಿ ಕೊಡುವ ಪ್ರಸಾದವನ್ನು ಯಾವ ಖಾತ್ರಿಯ ಮೇಲೆ ತಿನ್ನುವುದು ಎಂದು ಭಯವಾಗುತ್ತದೆ. ಇನ್ನು ಮೇಲೆ ಬರೀ ದೇವರ ದರ್ಶನ ಮಾಡಿಕೊಂಡು, ಪ್ರಸಾದ ಬೇಡ ಎಂದು ಹೇಳಿ ಬರಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಇದು ತುಂಬಾ ಬೇಸರದ ಸಂಗತಿ" ಎನ್ನುತ್ತಾರೆ ಭಕ್ತೆ ಮಂಜುಳಾ.
ಅರ್ಚಕರಿಂದ ಸಹಮತ
ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸುವ ಅಗತ್ಯವಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ನಾಸ್ತಿಕರ ಜತೆಗೆ ದೇವಾಲಯಗಳ ಅರ್ಚಕರು ಸಹ ಸಹಮತ ವ್ಯಕ್ತಪಡಿಸುತ್ತಿದ್ದಾರೆ.