ಕೊರೊನಾ ಶಾಪ ಕಳೆಯಲಿ ಎಂದು ಶಿರಡಿಗೆ ಭಕ್ತನ ಬರಿಗಾಲ ಪಾದಯಾತ್ರೆ
ಮೈಸೂರು, ಮೇ 11: ಕೊರೊನಾ ನೋವು ಮರೆಯಾಗಿ ದೇಶಕ್ಕೆ ಸುಖ-ಶಾಂತಿ ಸಿಗಲಿ ಎಂದು ಮೈಸೂರಿನ ಭಕ್ತರೊಬ್ಬರು ಮಹಾರಾಷ್ಟ್ರದ ಶಿರಡಿಗೆ ಬರೋಬ್ಬರಿ 1052 ಕಿ.ಮೀ. ದೂರ ಪಾದಯಾತ್ರೆ ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ಶಿವರಾತ್ರಿಗೆ ಮಹದೇಶ್ವರ ಬೆಟ್ಟ, ಧರ್ಮಸ್ಥಳ ಮೊದಲಾದ ಕಡೆಗಳಿಗೆ ಪಾದಯಾತ್ರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಭಕ್ತರು ಕಳೆದೆರಡು ವರ್ಷ ಕೋವಿಡ್ನಿಂದ ಉಂಟಾಗಿರುವ ಹಾನಿ ಮತ್ತೆ ಮರುಕಳಿಸದಿರಲಿ, ಇಡೀ ಸಮಾಜಕ್ಕೆ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿ ಕೈಗೊಂಡಿರುವುದು ಪಾದಯಾತ್ರೆ ಎಲ್ಲರ ಗಮನ ಸೆಳೆದಿದೆ.
ಮೈಸೂರು ತಾಲೂಕಿನ ಏಳಿಗೆ ಹುಂಡಿ ಗ್ರಾಮದ ನಿವಾಸಿ ರಾಜೇಂದ್ರ ಅವರೇ ಮಹಾರಾಷ್ಟ್ರದ ಶಿರಡಿಗೆ ಪಾದಯಾತ್ರೆ ಕೈಗೊಂಡಿರುವ ಭಕ್ತ. ಕೊರೊನಾ ಕಡಿಮೆಯಾದರೆ ಬರಿಗಾಲಲ್ಲಿ ಬಂದು ದೇವರ ದರ್ಶನ ಮಾಡುತ್ತೇನೆ ಎಂದು ರಾಜೇಂದ್ರ ಅವರು ಹರಕೆ ಕಟ್ಟಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿ ಹರಕೆ ತೀರಿಸಲು ಮುಂದಾಗಿದ್ದಾರೆ.
ಮೇ 12 ರಿಂದ ಮುಂಜಾನೆ 5.30ಕ್ಕೆ ಸ್ವಗ್ರಾಮದಿಂದ ಪಾದಯಾತ್ರೆ ನಡೆಸಲಿದ್ದಾರೆ. ಮೂಲತಃ ಶಾಲಾ ಬಸ್ ಚಾಲಕರಾಗಿರುವ ಇವರು ಸದ್ಯ ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ 21 ದಿನಗಳ ಕಾಲ ನಾಗಮಂಗಲ, ಬೆಳ್ಳೂರ್ ಕ್ರಾಸ್, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಪಾದಯಾತ್ರೆ ಆರಂಭಿಸಿದ್ದಾರೆ.
''ಕೋವಿಡ್ ಕಾಲದಲ್ಲಿ ಜನರ ಸಂಕಷ್ಟ ಕಂಡು ಮನಸ್ಸು ಕರಗಿತು. ಹೀಗಾಗಿ ಇಂತಹದೊಂದು ಹರಕೆ ಮಾಡಿಕೊಂಡಿದ್ದೆ. ಅದನ್ನು ಈಗ ನೆರವೇರಿಸಲು ಪಾದಯಾತ್ರೆ ಕೈಗೊಂಡಿದ್ದೇನೆ. ಜತೆಗೆ ಬ್ಯಾಗ್ನಲ್ಲಿ ಒಂದು ಜತೆ ಬಟ್ಟೆಯೊಂದಿಗೆ ತೆರಳುತ್ತಿದ್ದು, ಮಾರ್ಗದುದ್ದಕ್ಕೂ ಸಿಕ್ಕ ಸ್ಥಳದಲ್ಲೇ ಮಲಗಿ ಹೋಗುವೆ. ದೇಶಕ್ಕೆ ಒಳಿತಾದರೆ ಅಷ್ಟೇ ಸಾಕು,'' ಎಂದು ರಾಜೇಂದ್ರ ತಿಳಿಸಿದ್ದಾರೆ.