ಒಕ್ಕೂಟ ವ್ಯವಸ್ಥೆಯ ಸೂತ್ರ ಕಿತ್ತಿದ್ದಾರೆ; ದೇವನೂರು ಮಹಾದೇವ
ಮೈಸೂರು, ಡಿಸೆಂಬರ್ 08: ಕೃಷಿ ವಲಯವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ರಾಜ್ಯಗಳನ್ನು ಕೇಂದ್ರ ಸರ್ಕಾರ (ಒಕ್ಕೂಟ ಸರ್ಕಾರ) ಗಣನೆಗೇ ತೆಗೆದುಕೊಳ್ಳದೆ ಕಾಲು ಕಸ ಮಾಡಿಕೊಂಡಿದೆ. ಇದು ಕೆಟ್ಟ ಬೆಳವಣಿಗೆ ಎಂದು ಸಾಹಿತಿ ದೇವನೂರ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹಮ್ಮಿಕೊಂಡಿದ್ದ ಭಾರತ್ ಬಂದ್ ಗೆ ಬೆಂಬಲ ನೀಡಲು ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಡಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವು ಜಿಎಸ್ ಟಿ ತಂದು ರಾಜ್ಯಗಳ ಜುಟ್ಟನ್ನು ತನ್ನ ಹಿಡಿತದೊಳಗೆ ಇರಿಸಿಕೊಂಡಿದೆ. ಇದಲ್ಲದೆ ಕೃಷಿ ರಾಜ್ಯ ವ್ಯಾಪ್ತಿಯಲ್ಲಿ ಇದ್ದರೂ ಏಕೆ ಕಾನೂನು ತರುತ್ತಿದ್ದೀರ ಎಂದು ಯಾವುದೇ ರಾಜ್ಯಗಳು ಕೇಂದ್ರವನ್ನು ಪ್ರಶ್ನಿಸುತ್ತಿಲ್ಲ. ರಾಜ್ಯಗಳು ನರ ಸತ್ತಂತಿವೆ, ಭಯದಲ್ಲಿವೆ. ಭಯದ ವಾತಾವರಣ ಇಡೀ ದೇಶದಲ್ಲಿ ಸೃಷ್ಟಿಯಾಗಿದೆ ಎಂದು ಟೀಕಿಸಿದರು.
ಬಂದ್ಗೆ ಮೈಸೂರಲ್ಲಿ ನೀರಸ ಪ್ರತಿಕ್ರಿಯೆ; ಕೆಲವೆಡೆ ಬಲವಂತದ ಬಂದ್
ಸಂವಿಧಾನದ ಪ್ರಕಾರ ಕೃಷಿ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಹಾಗಾದರೆ, ಸಂವಿಧಾನವನ್ನೇ ಕಾಲು ಕಸ ಮಾಡಿಕೊಂಡಂತಾಯಿತು. ಸಂವಿಧಾನ, ಒಕ್ಕೂಟ ಸ್ವರೂಪ, ರಾಜ್ಯ ಎಲ್ಲದರ ಸೂತ್ರ ಕಿತ್ತುಹಾಕಲಾಗಿದೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಬೇಸರಿಸಿದರು.
ಪ್ರತಿಭಟನೆಗೆ ಬರುವವರನ್ನು ದೇಶದ್ರೋಹಿಗಳು, ಖಲಿಸ್ತಾನಿಗಳು ಎನ್ನುತ್ತಿದ್ದಾರೆ. ಈ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ, ದಯವಿಟ್ಟು ಮನುಷ್ಯರಾಗಿ ನಿಮ್ಮ ಗುಣಗಳನ್ನು ಬದಲಾಯಿಸಿಕೊಳ್ಳಿ ಎಂದು ಮನವಿ ಮಾಡಿದರು.