ಕೆಆರ್ ಎಸ್ ನಲ್ಲಿ ಸದ್ಯ ನೀರೆಷ್ಟಿದೆ? ಪ್ರಾಧಿಕಾರ ಹೇಳಿದ್ದೇನು?
ಮಂಡ್ಯ, ಮೇ 28 : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪು ಇಂದು ಮಂಡ್ಯದ ಭಾಗದ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ದೆಹಲಿ ಜಲಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮತ್ತೆ ಕರ್ನಾಟಕದ ಪಾಲಿಗೆ ಬೇಸರದ ಆದೇಶ ಹೊರಬಿದ್ದಿದೆ. ಈ ಬಾರಿಯೂ ಕರ್ನಾಟಕಕ್ಕೇ ಪ್ರಾಧಿಕಾರ ಬರೆ ಹಾಕಿದ್ದು, 9.19 ಟಿಎಂಸಿ ನೀರನ್ನು ಜೂನ್ ನಿಂದ ತಮಿಳುನಾಡಿಗೆ ಬಿಡುವಂತೆ ಆದೇಶಿಸಲಾಗಿದೆ.
ಕರ್ನಾಟಕ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದ ತಂಡ ರಾಜ್ಯದ ಪ್ರಸ್ತುತ ಸ್ಥಿತಿಯನ್ನು ಇಂದು ನಡೆದ ಕಾವೇರಿ ನಿರ್ವಹಣಾ ಮಂಡಳಿ ಮುಂದಿಟ್ಟರು. ಎರಡು ರಾಜ್ಯಗಳಲ್ಲೂ ಮಳೆ ಅಭಾವ ಕಾಡುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಮುಂಗಾರುಮಳೆ ಪ್ರವೇಶ ವಿಳಂಬವಾಗಲಿದ್ದು, ಜೂನ್ 8ರ ನಂತರ ಮೊದಲ ಮಳೆ ಸಿಂಚನ ಸಾಧ್ಯತೆಯಿದೆ. ಕಳೆದ ವಾರದಿಂದ ದಕ್ಷಿಣ ಒಳನಾಡಿನಲ್ಲಿ ಸುರಿದ ಗಾಳಿ ಮಳೆಯಿಂದ ಹಾನಿ ಪ್ರಮಾಣವೇ ಅಧಿಕವಾಗಿದೆ ಎಂದು ಅವರು ವಾದಿಸಿದ್ದಾರೆ. ಆದರೆ ಯಾವುದೇ ವಾದಕ್ಕೂ ಜಗ್ಗದ ಅಧಿಕಾರಿಗಳು ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದಾರೆ.
ನೀರಿನ ಪ್ರಮಾಣ ಏರಿಕೆಯಾದರೆ ಸಾಧ್ಯ
ಕೆಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಈ ನಾಲ್ಕು ಜಲಾಶಯಗಳಲ್ಲಿ ಬಳಕೆ ಮಾಡುವ ನೀರಿನ ಪ್ರಮಾಣ 14 ಟಿಎಂಸಿ ಮಾತ್ರ. ಈ ನೀರು ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ ಸೇರಿದಂತೆ ಎಲ್ಲೆಡೆಗೂ ಅಗತ್ಯವಿದೆ. ಮಳೆ ಬಂದರಷ್ಟೇ ನೀರಿನ ಪ್ರಮಾಣ ಏರಿಕೆಯಾಗಲೂ ಸಾಧ್ಯ. ಸಾಮಾನ್ಯವಾಗಿ ಜಲವರ್ಷವನ್ನು ಜೂನ್ ತಿಂಗಳಿನಿಂದ ಪರಿಗಣಿಸಲಾಗುತ್ತದೆ. ಜೂನ್ 1 ರಿಂದ ಮೇ 30ರವರೆಗೆ ಒಂದು ಜಲವರ್ಷವೆಂದು ಪರಿಗಣಿಸಲಾಗುತ್ತದೆ. ಜೂನ್ 1 ರಿಂದ ಕಾಲಾವಧಿ ಆರಂಭವಾದರೆ ಮುಂದಿನ ಜೂ 30ರವರೆಗೆ ಇದು ಕೊನೆಗೊಳ್ಳುತ್ತದೆ.
ಸದ್ಯ ಕಾವೇರಿ ನಿರ್ವಹಣಾ ಮಂಡಳಿ ಈಗ 9.19 ಟಿಎಂಸಿ ನೀರು ಹರಿಸಬೇಕೆಂದು ಪ್ರಾಧಿಕಾರ ತಿಳಿಸಿದೆ. ಅದು ಜಲಾಶಯಗಳಲ್ಲಿ ಮಳೆ ಬಂದು ನೀರಿನ ಪ್ರಮಾಣ ಏರಿಕೆಯಾದರೆ ಮಾತ್ರ. ಇದನ್ನು 10 ದಿನಗಳ ಬಿಡಿ ಭಾಗವಾಗಿ, ಅಂದರೆ 1/3 ಭಾಗವಾಗಿ ಹರಿಸಬೇಕೆಂದು ತಿಳಿಸಿದೆ. ಇದು ಎಷ್ಟು ದಿನ ಎಂಬುದನ್ನು ತಿಳಿಸಬೇಕಿದೆ. ತಮಿಳುನಾಡಿನ ಪ್ರಕಾರ ಬಂದಾಗ, ಮುಂದಿನ ವರ್ಷದವರೆಗಿನ ಪ್ಲಾನ್ ಎನ್ನಬಹುದು. ಆದರೆ ಇವೆಲ್ಲವೂ ಮುಂಗಾರು ಮಳೆಯನ್ನು ಅವಲಂಬಿಸಿದೆ ಎಂಬುದು ಸತ್ಯ.
ಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ
ಕೆಆರ್ ಎಸ್ ಡ್ಯಾಂನಲ್ಲಿ 6.9 ಟಿಎಂಸಿ ನೀರು ಬಳಕೆಗೆ
ಕಾವೇರಿ ಕೊಳ್ಳದ ಜಲಾಶಯದಲ್ಲಿ 23.3 ಟಿಎಂಸಿ ನೀರು ಸಂಗ್ರಹವಿದೆ. ನಾಲ್ಕು ಜಲಾಶಯದಿಂದ ಸದ್ಯ ಕೇವಲ 14.5 ಟಿಎಂಸಿ ನೀರು ಬಳಕೆಗೆ ಸಂಗ್ರಹವಾಗಿದೆ. ಕೆಆರ್ ಎಸ್ ಡ್ಯಾಂನಲ್ಲಿ 6.9 ಟಿಎಂಸಿ ನೀರು ಬಳಕೆಗೆ (ಉಳಿದಿದ್ದು ಡೆಡ್ ಸ್ಟೋರೆಜ್ ) ಸಾಧ್ಯವಾಗಿದೆ. ಕಬಿನಿ ಡ್ಯಾಂನಲ್ಲಿ 2.93 ಟಿಎಂಸಿ ನೀರು ಸಂಗ್ರಹವಾಗಿದೆ. ಹಾರಂಗಿಯಲ್ಲಿ 1.35 ಟಿಎಂಸಿ ಮಾತ್ರ ನೀರು ಬಳಕೆಗೆ, ಹೇಮಾವತಿ 3.49 ಟಿಎಂಸಿ ನೀರು ಬಳಕೆಗೆ ಸಾಧ್ಯವಾಗಿದೆ. ಇದನ್ನು ಹೊರತುಪಡಿಸಿ 9 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಇದನ್ನು ಬಳಕೆ ಮಾಡಲು ಸಾಧ್ಯವಿಲ್ಲ.
ಸದ್ಯ ಕೆಆರ್ ಎಸ್ನಲ್ಲಿ ಒಳ ಹರಿವು 193 ಕ್ಯೂಸೆಕ್ ಹಾಗೂ ಹೊರ ಹರಿವು 348 ಕ್ಯೂಸೆಕ್ ನಷ್ಟಿದೆ. ಕೆಆರ್ ಎಸ್, ಹಾರಂಗಿ, ಹೇಮಾವತಿ ಮತ್ತು ಕಬಿನಿ ಈ ನಾಲ್ಕೂ ಜಲಾಶಯಗಳಲ್ಲಿ ಬರೀ 14.5 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.
ಮೇಕೆದಾಟು : ಆಕ್ಷೇಪಣೆ ಸಲ್ಲಿಸಲು ತಮಿಳುನಾಡಿಗೆ ಸುಪ್ರೀಂ ಸೂಚನೆ
7 ಜಿಲ್ಲೆಗಳಿಗೆ 30 ದಿನಕ್ಕೆ ( ತಿಂಗಳಿಗೆ ) 4.84 ಟಿ ಎಂಸಿ ನೀರು ಅವಶ್ಯ
ಕಬಿನಿ, ಹಾರಂಗಿ, ಹೇಮಾವತಿ, ಕೆ ಆರ್ ಎಸ್ ನಲ್ಲಿ 14.5 ಟಿಎಂಸಿ ನೀರು ಬಳಕೆಯ ಪ್ರಮಾಣಕ್ಕೆ ಹೊರತಾಗಿ ಇದೆ. ಇದನ್ನು ಜೂನ್ - ಜುಲೈನಲ್ಲಿ ಬಳಕೆಗೆ ಬೇಕೆಂದು ಮುಂಜಾಗೃತಾ ಕ್ರಮವಾಗಿ ಕುಡಿಯಲು, ಕೃಷಿಗೆ ಇಟ್ಟುಕೊಳ್ಳಲಾಗುತ್ತದೆ. ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಿಗೆ 30 ದಿನಕ್ಕೆ ( ತಿಂಗಳಿಗೆ ) 4.84 ಟಿ ಎಂಸಿ ನೀರು ಬೇಕು. ಬೆಂಗಳೂರಿಗೆ - 2.08, ರಾಮನಗರಕ್ಕೆ - 0.29, ಮಂಡ್ಯ -0.65, ಮೈಸೂರು -0.42, ಚಾಮರಾಜನಗರ - 0.38 ನೀರು, ಹಾಸನ - 0.28ಕ್ಕೆ ನೀರು ಬೇಕು. ಸದ್ಯ 139 ನೀರು ಕ್ಯೂಸೆಕ್ ನೀರು ಒಳಹರಿವು ಕೆ ಆರ್ ಎಸ್ ನಲ್ಲಿದೆ.
ಮಳೆ ಬರದಿದ್ದರೆ ತಪ್ಪದು ಕಷ್ಟ
ರಾಜ್ಯದಲ್ಲಿ ಮುಂಗಾರು ಮಳೆಯ ಕಾಲಾವಧಿಯನ್ನು ಜೂನ್, ಜುಲೈ, ಆಗಸ್ಟ್ ಎಂದೇ ಪರಿಗಣಿಸಲಾಗಿದ್ದು, ಅಂದಿನ ಮಳೆಯ ನೀರಿನ ಸಂಗ್ರಹವನ್ನು ವರ್ಷಪೂರ್ತಿ ಬಳಕೆ ಮಾಡಿಕೊಳ್ಳಬೇಕು. ಸೆಪ್ಟೆಂಬರ್ ನಿಂದ ಮಳೆಯ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗುತ್ತದೆ. ಜೂನ್ - ಆಗಸ್ಟ್ ನಲ್ಲಿ ನಾವು ಸಂಗ್ರಹಿಸಿದ ನೀರನ್ನು ತಮಿಳುನಾಡಿಗಿತ್ತರೆ ಉಳಿದವರ ಗತಿಯೇನು? ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಇದರೊಟ್ಟಿಗೆ ಈ ಬಾರಿ ಜೂನ್ ನಲ್ಲಿ ಒಂದು ವಾರ ವಿಳಂಬವಾಗಿ ಮುಂಗಾರು ಮಳೆ ಬರುತ್ತದೆಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಹೀಗೆ ಒಂದು ಬಾರಿ ವಿಳಂಬವಾದರೂ ಮಳೆ ಎಷ್ಟರ ಪ್ರಮಾಣದಲ್ಲಿ ಬರಬಹುದೆಂದು ಯಾರೂ ಊಹಿಸಲಾರರು. ಇನ್ನು ಕರ್ನಾಟಕವಷ್ಟೇ ಅಲ್ಲ, ಕೇರಳದ ವೈಯನಾಡು ಭಾಗದಲ್ಲೂ ಮಳೆ ಸುರಿದ ಪಕ್ಷದಲ್ಲಿ ಕೆ ಆರ್ ಆಸ್ ಭಾಗಕ್ಕೆ ನೀರು ಬಂದರೆ ಮಾತ್ರವೇ ನಮ್ಮಿಂದ ತಮಿಳುನಾಡಿಗೆ ನೀರನ್ನು ಸರಾಗವಾಗಿ ಬಿಡಲು ಸಾಧ್ಯ. ಹೀಗಿದ್ದರೆ ಮಾತ್ರ ಜಲಸಂಕಷ್ಟವನ್ನು ಅಲ್ಪಮಟ್ಟಿಗೆ ಬಗೆಹರಿಸಿಕೊಳ್ಳಬಹುದು.