ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ ಮೈಸೂರು-ಕೊಡಗು ಕ್ಷೇತ್ರ:ಯಾರ ಲೆಕ್ಕಾಚಾರ ಹೇಗಿದೆ?
ಮೈಸೂರು, ಜನವರಿ 30:ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ತೀವ್ರಗೊಂಡಿದ್ದು, ಲೆಕ್ಕಾಚಾರಗಳು ಆರಂಭವಾಗಿವೆ. ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ದಿನಾಂಕ ಪ್ರಕಟವಾಗುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಟಿಕೆಟ್ ಬೆನ್ನು ಹತ್ತಿದ್ದಾರೆ.
ಎಲ್ಲಾ ಪಕ್ಷಗಳು ತಮ್ಮ ಬಲಾಬಲಕ್ಕೆ ಸದ್ಯ ಮುಂದಾಗಿವೆ. ಇತ್ತ ರಾಜಕೀಯ ಪಕ್ಷಗಳು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ಬಿಜೆಪಿ ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಮೂಲಕ ಕಹಳೆ ಮೊಳಗಿಸಿದರೆ, ಸ್ಥಳೀಯವಾಗಿ ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಆಯೋಜಿಸುವ ಮೂಲಕ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಹಳೆ ಮೈಸೂರು ಭಾಗದಲ್ಲಿ ಜಾತ್ಯತೀತ ಜನತಾದಳ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿರುವುದು ಹಾಗೂ ಈ ಭಾಗದಲ್ಲಿ ತನಗೆ ಇರುವ ಬೆಂಬಲದ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ, ಹಾಸನ ಸೇರಿದಂತೆ 12 ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆಯನ್ನು ಇಟ್ಟಿದೆ.
ಈ ಸಂಬಂಧ ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ವರಿಷ್ಠ ಎಚ್. ಡಿ ದೇವೇಗೌಡ ಅವರು 12 ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ : ಬಿಜೆಪಿಯ ಉಸ್ತುವಾರಿ, ಸಂಚಾಲಕರ ಬದಲಾವಣೆ
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಇದರಲ್ಲಿ ಕೃಷ್ಣರಾಜ, ಚಾಮರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಏಕೈಕ ವಿಧಾನಸಭಾ ಕ್ಷೇತ್ರ ನರಸಿಂಹರಾಜ ಮಾತ್ರ ಕಾಂಗ್ರೆಸ್ ಪಾಲಾಗಿದೆ.
ಇದನ್ನು ಕಾಂಗ್ರೆಸ್ ಒಪ್ಪಲು ಸಿದ್ಧವಿಲ್ಲ
ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ನೆಲೆ ಇದೆ. ಜೊತೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸಮೀಪ ಪ್ರತಿಸ್ಪರ್ಧಿಯಾಗಿದ್ದೆವು. ಈ ಹಿನ್ನೆಲೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ತಮಗೆ ಬಿಟ್ಟು ಕೊಡಬೇಕೆಂಬುದು ಜನತಾದಳದ ವಾದ ನಡೆಸುತ್ತಿದೆ. ಇದೇ ಇಂಗಿತವನ್ನು ಸಹ ಸಿಎಂ ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಪಡೆದಿದ್ದರೆ ಬಿಜೆಪಿ ಮೂರು ಹಾಗೂ ದಳ ಐದು ಸ್ಥಾನಗಳಲ್ಲಿ ಜಯಗಳಿಸಿದೆ. ಇದು ಜಾತ್ಯತೀತ ಜನತಾ ದಳದ ಹಕ್ಕಿಗೆ ಮುಖ್ಯ ಕಾರಣವಾಗಿದೆ. ಆದರೆ ಕಾಂಗ್ರೆಸ್ ಇದನ್ನು ಒಪ್ಪಲು ಸಿದ್ಧವಿಲ್ಲ.
ಲೋಕಸಭೆ ಚುನಾವಣೆ 2019: ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿಚಯ
ಎಲ್ಲ ಬಾರಿಯೂ ಜಯಗಳಿಸಿದ ಕಾಂಗ್ರೆಸ್
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದಳದವರು ಈವರೆಗೆ ಒಮ್ಮೆಯೂ ಗೆದ್ದಿಲ್ಲ. ಮೂರು ಬಾರಿ ಬಿಜೆಪಿ ಗೆಲವು ಸಾಧಿಸಿರುವುದು ಬಿಟ್ಟರೆ, ಉಳಿದ ಎಲ್ಲ ಬಾರಿಯೂ ಕಾಂಗ್ರೆಸ್ ಜಯಗಳಿಸಿದೆ. ಅದರಲ್ಲೂ ಮೂರು ಬಾರಿ ಬಿಜೆಪಿ ಜಯದಲ್ಲಿ ಎರಡು ಬಾರಿ ವಿಜಯಶಂಕರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ತನಗೆ ಈ ಸ್ಥಾನ ಬೇಕು ಎನ್ನುವುದಕ್ಕೆ ಸಮರ್ಥನೆ ನೀಡುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದ್ದ ದಳ ಈ ಬಾರಿ 12 ಕ್ಷೇತ್ರಗಳನ್ನು ಕೇಳುತ್ತಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ಬೇರೆಯದೇ ಲೆಕ್ಕಾಚಾರಗಳು ನಡೆಯುತ್ತಿದೆ
ಹಾಲಿ ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಸದಸ್ಯರಿಂದ ಕ್ಷೇತ್ರಗಳನ್ನು ದಳ ಯಾವ ಆಧಾರದ ಮೇಲೆ ಕೇಳುತ್ತಿದೆ ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತ ಬಿಜೆಪಿಯಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದರೂ, ಬಿಜೆಪಿಯಲ್ಲೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಈ ಬಾರಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡಿದರೆ ಕಷ್ಟವಾಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ವಾಸ್ತವ ಸ್ಥಿತಿಯನ್ನು ಬಿಟ್ಟು ಬೇರೆಯದೇ ಲೆಕ್ಕಾಚಾರಗಳು ನಡೆಯುತ್ತಿದೆ.
ರಾಜಕೀಯ ವಿಶ್ಲೇಷಕರ ಅಭಿಮತ
ಕಳೆದ ವಿಧಾನಸಭಾ ಚುನಾವಣೆಯನ್ನು ಅಳತೆಗೋಲು ಮಾಡಿಕೊಂಡು ಪಕ್ಷಗಳು ಟಿಕೆಟ್ ಲೆಕ್ಕಾಚಾರದಲ್ಲಿ ಮುಳುಗಿವೆ. ಕೇವಲ 9 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ಲೆಕ್ಕಾಚಾರ ಬಹುಮಟ್ಟಿಗೆ ಈ ಚುನಾವಣೆ ಫಲಿತಾಂಶ ನಿರ್ಧರಿಸಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಸ್ವಾತಂತ್ರ್ಯ ನಂತರ ನಡೆದ ಮೊದಲ ಚುನಾವಣೆಯಿಂದ ಇದುವರೆಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಒಮ್ಮೆ ಮಾತ್ರ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ಉಳಿದಂತೆ ಎಲ್ಲಾ 14 ಚುನಾವಣೆಗಳಲ್ಲೂ ಪುರುಷರೇ ಆಯ್ಕೆಯಾಗಿದ್ದಾರೆ.