ನಾಳೆ ಅರಮನೆ ಪ್ರವೇಶ ಪಡೆಯುವ ಆನೆಗಳು; ಜಂಬೂಪಡೆಯ ಸಂಪೂರ್ಣ ವಿವರ ಇಲ್ಲಿದೆ...
ಮೈಸೂರು, ಅಕ್ಟೋಬರ್ 1: ಗಜಪಯಣದ ನಂತರ ಮೈಸೂರು ದಸರಾಕ್ಕೆ ಕಳೆ ಬರುತ್ತದೆ. ಇದುವರೆಗೆ ಗಜಪಡೆಯನ್ನು ಅರಮನೆ ಆವರಣಕ್ಕೆ ದಸರಾಕ್ಕೆ ಒಂದೂವರೆ ತಿಂಗಳು ಇರುವಾಗಲೇ ಕರೆತರಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿರುವುದರಿಂದ ಕೇವಲ ಐದು ಸಾಕಾನೆಗಳಿಗಷ್ಟೆ ಅವಕಾಶ ನೀಡಲಾಗಿದೆ.
ಇದೀಗ ಸಂಪ್ರದಾಯದಂತೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್ ನಿಂದ ಅಭಿಮನ್ಯುವಿನ ನೇತೃತ್ವದ ಕಾವೇರಿ, ವಿಜಯ, ವಿಕ್ರಮ ಮತ್ತು ಗೋಪಿಯನ್ನೊಳಗೊಂಡ ಗಜಪಡೆಗೆ ಸಂಪ್ರದಾಯದಂತೆ ತುಲಾ ಲಗ್ನದಲ್ಲಿ ಬೆಳಿಗ್ಗೆ 10.10ರಿಂದ 11 ಗಂಟೆಯ ಸಮಯದಲ್ಲಿ ವೀರನಹೊಸಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪುಷ್ಪಾರ್ಚನೆ ಸಲ್ಲಿಸಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ ಬಳಿಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಡಿಸಿಯಿಂದ ಸುರಕ್ಷಿತ ಆಚರಣೆಯ ಆಶ್ವಾಸನೆ
ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ದಸರೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಬಹಳ ಎಚ್ಚರಿಕೆಯಿಂದ ಸುರಕ್ಷಿತವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚು ಜನಸಂದಣಿ ಉಂಟಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮೈಸೂರು ದಸರಾ; ವೀರನಹೊಸಳ್ಳಿಯಿಂದ ಮೈಸೂರಿಗೆ ಗಜಪಯಣ
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಓ ಡಿ.ಭಾರತಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ.ಅಲೆಗ್ಸಾಂಡರ್, ಮಹೇಶ್ಕುಮಾರ್, ಡಾ.ಕೆ.ಸಿ.ಪ್ರಶಾಂತ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ ನಟೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹದೇವ್, ಅಂಟೋನಿ ಪೌಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾಳೆ ಮಧ್ಯಾಹ್ನ ಅರಮನೆ ಪ್ರವೇಶ
ಇನ್ನು ವೀರನ ಹೊಸಹಳ್ಳಿಯಿಂದ ಹೊರಟ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಬಂದಿದ್ದು, ಅಕ್ಟೋಬರ್ 2ರಂದು ಮಧ್ಯಾಹ್ನ 12:18 ಗಂಟೆಯಿಂದ 12:40 ಗಂಟೆಯವರೆಗೆ ಧನುರ್ ಲಗ್ನದಲ್ಲಿ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣಕ್ಕೆ ಸ್ವಾಗತಿಸಲಾಗುತ್ತಿದೆ.
ಗಜಪಡೆಯ ಸ್ವಾಗತ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಬಾರಿಯ ಜಂಬೂಸವಾರಿಯ ನೇತೃತ್ವವನ್ನು ಅಭಿಮನ್ಯು ವಹಿಸಲಿದ್ದು, ಅರಮನೆ ಆವರಣದಲ್ಲಿಯೇ ಜಂಬೂಸವಾರಿ ನಡೆಯಲಿದೆ.
ಅಭಿಮನ್ಯು ನೇತೃತ್ವದ ಐದು ಆನೆಗಳ ತಂಡ
ಇದುವರೆಗೆ ಜಂಬೂಸವಾರಿಯಲ್ಲಿ ಸಂಗೀತದ ಗಾಡಿಯನ್ನು ಎಳೆಯುತ್ತಿದ್ದ ಅಭಿಮನ್ಯು ಈ ಬಾರಿ ಅಂಬಾರಿ ಹೊರುತ್ತಿರುವುದು ವಿಶೇಷವಾಗಿದೆ. ಹೀಗಾಗಿ ಈತನ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಸದ್ಯ ಈತನ ವಯಸ್ಸು 54 ವರ್ಷವಾಗಿದ್ದು, ಕಳೆದ 21 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2.68 ಮೀಟರ್ ಎತ್ತರ ಹಾಗೂ 3.51 ಮೀಟರ್ ಉದ್ದವನ್ನು ಹೊಂದಿದ್ದು ಅಂದಾಜು ತೂಕ 5000 ದಿಂದ 5290 ಕೆಜಿಯಷ್ಟಿದೆ. ಇದನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿದೆ. ಮತ್ತಿಗೋಡು ಶಿಬಿರದಿಂದ ಬಂದಿರುವ ಈತನನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ನೋಡಿಕೊಳ್ಳುತ್ತಿದ್ದಾರೆ.
ಅ.17 ರಂದು ಮೈಸೂರು ದಸರಾ ಉದ್ಘಾಟನೆ: ಅಭಿಮನ್ಯು ಹೆಗಲಿಗೆ ಅಂಬಾರಿ
ದುಬಾರೆಯ ಚೆಲುವೆ ಕಾವೇರಿ
ಕಳೆದ ಒಂಬತ್ತು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ ಹೆಣ್ಣಾನೆ ಕಾವೇರಿಗೆ 42 ವರ್ಷ ಪ್ರಾಯವಾಗಿದ್ದು, ಈ ಬಾರಿಯ ಗಜಪಡೆಯ ತಂಡದಲ್ಲಿದ್ದು, ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಬಂದಿದೆ. 2.50ಮೀ. ಎತ್ತರ, 3.32ಮೀ ಉದ್ದ ಹಾಗೂ 3000-3220 ಕೆ.ಜಿ. ಭಾರವನ್ನು ಹೊಂದಿದೆ. ಇದನ್ನು 2009ರ ಫೆಬ್ರವರಿಯಲ್ಲಿ ಸೋಮವಾರಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಇದರ ನಿರ್ವಹಣೆಯ ಹೊಣೆಯನ್ನು ಮಾವುತ ಜೆ.ಕೆ.ದೋಬಿ ಮತ್ತು ಕಾವಾಡಿ ರಂಜನ್ ಹೊತ್ತಿದ್ದಾರೆ.
ಪಟ್ಟದ ಅರಸ ಈ ವಿಕ್ರಮ
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಕಳೆದ 16 ವರ್ಷಗಳಿಂದ ಭಾಗವಹಿಸುತ್ತಿರುವ ವಿಕ್ರಮನಿಗೆ ಈಗ 40 ವರ್ಷ ವಯಸ್ಸು. ಸುಮಾರು 2.60 ಮೀ ಎತ್ತರ, 3.43 ಮೀ ಉದ್ದ, 3820 ಕೆಜಿ ತೂಕವನ್ನು ಹೊಂದಿರುವ ಈತನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಪಟ್ಟದ ಆನೆಯಾಗಿ ಅರಮನೆಯ ಪೂಜಾ ಕೈಂಕರ್ಯದ ಜವಾಬ್ದಾರಿ ಈ ಆನೆಯದ್ದಾಗಿದೆ. ದುಬಾರೆ ಆನೆ ಶಿಬಿರದಿಂದ ಬಂದಿರುವ ಇದನ್ನು ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್ ನೋಡಿಕೊಳ್ಳುತ್ತಿದ್ದಾರೆ.
ಸಾಧು ಸ್ವಭಾವದ ಗೋಪಿ
1993ರಲ್ಲಿ ಸೋಮವಾರಪೇಟೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾದ 38 ವರ್ಷ ವಯಸ್ಸಿನ ಗೋಪಿ ತುಂಬಾ ಸಾಧು ಸ್ವಭಾವದವನಾಗಿದ್ದು, ದುಬಾರೆ ಆನೆ ಶಿಬಿರದಲ್ಲಿದ್ದು, ಸಫಾರಿ ಕೆಲಸ ನಿರ್ವಹಿಸಿದ ಅನುಭವವಿರುವ ಈತ ಕಳೆದ ಹತ್ತು ವರ್ಷದಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈತ 2.92ಮೀ. ಎತ್ತರ, 3.42ಮೀ. ಎತ್ತರ, 3710 ಕೆ.ಜಿ. ತೂಕವಿದ್ದಾನೆ. ಈತನನ್ನು ಉಸ್ತುವಾರಿಯನ್ನು ಮಾವುತ ನಾಗರಾಜು, ಕಾವಾಡಿ ಶಿವು ವಹಿಸಿಕೊಂಡಿದ್ದಾರೆ. ಶರೀರದ ಎತ್ತರ 2.92 ಮೀಟರ್.
ಗಜಪಡೆಗೆ ಹಿರಿಯಜ್ಜಿ ವಿಜಯ
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಯ ಪೈಕಿ ವಿಜಯ ಹಿರಿಯ ವಯಸ್ಸಿನ ಆನೆಯಾಗಿದ್ದು, ಸದ್ಯ 61 ವರ್ಷ ಪ್ರಾಯ. ದುಬಾರೆ ಆನೆ ಶಿಬಿರದಲ್ಲಿರುವ ವಿಜಯಾಳನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಕಳೆದ 13 ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡ ಅನುಭವ ಹೊಂದಿದೆ. ಎತ್ತರ 2.29 ಮೀಟರ್, ಶರೀರದ ಉದ್ದ 3.00 ಮೀಟರ್, ಅಂದಾಜು ತೂಕ 3250 ಕೆ.ಜಿಯಷ್ಟಿದೆ. ತುಂಬಾ ಸಾಧು ಸ್ವಭಾವದ ಈಕೆಯನ್ನು ಮಾವುತ ಭೋಜಪ್ಪ, ಕಾವಾಡಿ ಭರತ್ ನೋಡಿಕೊಳ್ಳುತ್ತಿದ್ದಾರೆ.