ಮೈಸೂರಿನಲ್ಲಿ ಲಕ್ಷಾಂತರ ಜನಕ್ಕೆ ಅಕ್ಷರ ಕಲಿಸಿದ ಈ ಶಾಲಾ ಕಟ್ಟಡ ನೆಲಕ್ಕುರುಳುತ್ತಾ?
ಮೈಸೂರು, ಮೇ.20: ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಇಲ್ಲಿರುವ ಅರಮನೆಗಳು ಮಾತ್ರವಲ್ಲ, ಕಟ್ಟಡಗಳು ಕೂಡ ಇತಿಹಾಸದ ಕಥೆಗಳನ್ನು ಹೇಳುತ್ತಾ ಪಾರಂಪರಿಕತೆಯನ್ನು ಬಿಂಬಿಸುತ್ತಾ ಪಾರಂಪರಿಕ ನಗರ ಎಂಬ ಖ್ಯಾತಿಗೂ ಕಾರಣವಾಗಿವೆ.
ದೂರದಿಂದ ಬಂದವರಿಗೆ ನಗರದಲ್ಲಿ ಕಾಣಸಿಗುವ ಇಲ್ಲಿನ ಹಳೆಯ ಕಾಲದ ಕಟ್ಟಡಗಳು ಕುತೂಹಲವನ್ನು ಕೆರಳಿಸುತ್ತವೆ ಅಷ್ಟೇ ಅಲ್ಲ ಅಚ್ಚರಿ, ಆಕರ್ಷಣೆಯನ್ನುಂಟು ಮಾಡುತ್ತವೆ. ಇಂತಹ ಕಟ್ಟಡಗಳು ಇತ್ತೀಚೆಗಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಬದಲು ಕೆಡವಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದರೆ ನಿರೀಕ್ಷೆಗೂ ಮೀರಿದ ಆರ್ಥಿಕ ಲಾಭ ಪಡೆಯಲು ಸಾಧ್ಯ ಎಂಬ ಮನೋಭಾವಗಳು ಹೆಚ್ಚಾಗುತ್ತಿವೆ ಎಂದರೂ ತಪ್ಪಾಗಲಾರದು.
ಹೋಟೆಲ್ ಆಗಿ ಬದಲಾಗುತ್ತಿದೆ ಮೈಸೂರಿನ ಪಾರಂಪರಿಕ ಕಟ್ಟಡ ಗನ್ ಹೌಸ್
ಈಗಾಗಲೇ ಬಹಳಷ್ಟು ಕಟ್ಟಡಗಳು ಧರಾಶಾಹಿಯಾಗಿವೆ. ಇಂತಹ ಕಟ್ಟಡಗಳ ಸಾಲಿಗೆ ಇದೀಗ ಶತಮಾನ ಕಂಡಿರುವ ಶಾಲಾ ಕಟ್ಟಡವೊಂದು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ನಗರದ ಇಟ್ಟ್ಟಿಗೆಗೂಡಿನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮೈಸೂರು ರಾಜ ಮನೆತನ ನಿರ್ಮಿಸಿದ ಶಾಲಾ ಕಟ್ಟಡ ಶತಮಾನವನ್ನು ಕಂಡಿದ್ದು, ಅದೆಷ್ಟೋ ಬಡಮಕ್ಕಳಿಗೆ ವಿದ್ಯೆ ನೀಡಿದೆ. ಈ ಕಟ್ಟಡದ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣ ಇದೀಗ ಶಿಥಿಲಾವಸ್ಥೆಗೆ ತಲುಪಿದೆ.
ನಿರ್ಮಾಣವಾಗಲಿದೆ ವಾಣಿಜ್ಯ ಕಟ್ಟಡ!
ಈ ಶಾಲಾ ಕಟ್ಟಡವನ್ನು ಕೆಡವಿ ಅಲ್ಲಿರುವ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎನ್ನಲಾಗುತ್ತಿದ್ದು, ನಗರಪ್ರಾಧಿಕಾರದ ಈ ಧೋರಣೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಶಾಲಾ ಕಟ್ಟಡದ ಕುರಿತಂತೆ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಕಟ್ಟಡದ ಮಹತ್ವದ ಕುರಿತಂತೆ ಒಂದಷ್ಟು ಮಾಹಿತಿಗಳು ನಮಗೆ ಲಭ್ಯವಾಗುತ್ತವೆ.
1910 ರಲ್ಲಿ ನಿರ್ಮಾಣವಾದ ಶಾಲಾ ಕಟ್ಟಡ
ರಾಜ ವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತಾವಧಿಯಲ್ಲಿ ನಗರಾಭಿವೃದ್ಧಿ ಸಶಕ್ತ ಮಂಡಳಿ (ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್)ನ್ನು ರಚಿಸಿದ್ದರು. ಈ ಮಂಡಳಿ 1910 ರಲ್ಲಿಇಟ್ಟಿಗೆಗೂಡಿನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಶಾಲಾ ಕಟ್ಟಡವನ್ನು ನಿರ್ಮಿಸಿತು. ಪಾರಂಪರಿಕ ಶೈಲಿಯಲ್ಲಿರುವ ಈ ಕಟ್ಟಡ ಆಗಿನ ಕಾಲದಲ್ಲಿ ಶಾಲಾ ಮಕ್ಕಳನ್ನು ಆಕರ್ಷಿಸಿತು. ಬಹಳಷ್ಟು ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಅಕ್ಷರ ಕಲಿತರು. ಹೀಗೆಯೇ ನಡೆದುಕೊಂಡು ಬಂದ ಶಾಲೆ ಕ್ರಮೇಣ ತನ್ನ ವೈಭವವನ್ನು ಕಳೆದುಕೊಂಡಿತು.
ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
7 ವರ್ಷಗಳ ಹಿಂದೆಯೇ ಮುಚ್ಚಲಾಯಿತು
ನಗರದಲ್ಲಿ ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ಸ್ಥಾಪನೆಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಈ ಶಾಲೆಯತ್ತ ಬರಲು ಹಿಂದೇಟು ಹಾಕಿದ್ದರಿಂದ ಶಾಲಾ ಮಕ್ಕಳ ಗಣತಿ ಇಳಿಮುಖವಾಯಿತು. ಹೀಗಾಗಿ ಕಳೆದ ಏಳು ವರ್ಷಗಳ ಹಿಂದೆಯೇ ವಿದ್ಯಾರ್ಥಿಗಳ ಕೊರತೆ ನೆಪವೊಡ್ಡಿ ಮುಚ್ಚಲಾಯಿತು. ಅಲ್ಲಿಂದ ಈ ಶಾಲಾ ಕಟ್ಟಡ ಪಾಳು ಬಿದ್ದಿತ್ತು. ಈ ಕಟ್ಟಡ ಶತಮಾನ ಕಂಡ ಹಳೆಯ ಕಟ್ಟಡವಾದರೂ ಇದು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಇಲ್ಲವಾದ್ದರಿಂದ ಮುಡಾ ಈ ಕಟ್ಟಡವನ್ನು ಕೆಡವಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಎಲ್ಲೆಡೆ ಆಕ್ರೋಶದ ಸುರಿಮಳೆ
ಶತಮಾನ ಕಂಡಿರುವ ಶಾಲಾ ಕಟ್ಟಡವನ್ನು ಕೆಡವಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಡಾ ಉದ್ದೇಶಿರುವ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಎಲ್ಲೆಡೆ ಆಕ್ರೋಶದ ಸುರಿಮಳೆಯಾಗುತ್ತಿದೆ. ಈ ಕಟ್ಟಡವನ್ನು ಉಳಿಸಿಕೊಂಡು ನವೀಕರಿಸುವ ಮೂಲಕ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಿ ಎಂಬ ಸಲಹೆಗಳು ಕೂಡ ಬರುತ್ತಿವೆ. ಆದರೆ ಮುಡಾ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.