ಮೈಸೂರು ಮೇಯರ್ ಆಯ್ಕೆ ವಿಚಾರ: ಮೊದಲ ಬಾರಿಗೆ ಯಾರಿಗೂ ಬೇಡವಾದ ಪಕ್ಷೇತರರು
ಮೈಸೂರು, ಸೆಪ್ಟೆಂಬರ್.8: ಮೈಸೂರು ಮಹಾನಗರಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇತ್ತೀಚಿನ ರಾಜಕೀಯ ಹೊಂದಾಣಿಕೆಯಿಂದಾಗಿ ಪಕ್ಷೇತರರು ಗೌಣವಾಗಿದ್ದಾರೆ. ಈವರೆಗೆ ಚುನಾವಣೆ ಮುಗಿಯುತ್ತಿದ್ದಂತೆ ಬಹು ಬೇಡಿಕೆಯ ಸದಸ್ಯರಾಗಿರುತ್ತಿದ್ದ ಪಕ್ಷೇತರರು ಈಗ ಯಾರಿಗೂ ಬೇಡವಾಗಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ಬಹುಮತದ ಕೊರತೆ ಉಂಟಾದಾಗಲೆಲ್ಲಾ ಪಕ್ಷೇತರರಾಗಿ ಆಯ್ಕೆಯಾಗಿರುವವರನ್ನು ಮನವೊಲಿಸಲು ಮೊದಲ ಪ್ರಯತ್ನವನ್ನು ಮುಖಂಡರು ಮಾಡುತ್ತಿದ್ದರು. ಮೂರೂ ಪಕ್ಷಗಳ ನಾಯಕರು ಪೈಪೋಟಿಗೆ ಬೀಳುತ್ತಿದ್ದರು. ಪಕ್ಷೇತರರು ಬಹುಬೇಡಿಕೆ ಸದಸ್ಯರಾಗಿ ಬಿಗುವಿನಿಂದ ಇರುತ್ತಿದ್ದರು.
ದಸರೆಯೊಳಗೆ ನಡೆಯಲಿದೆ ಮೈಸೂರು ಮೇಯರ್ ಆಯ್ಕೆ ಪ್ರಕ್ರಿಯೆ, ಬಿಜೆಪಿಗೆ ವಿಪಕ್ಷ ಸ್ಥಾನ ನಿಕ್ಕಿ
ಅವರಿಗೆ ರಾಜಮರ್ಯಾದೆ' ಜತೆಗೆ ಅಧಿಕಾರದ ಸ್ಥಾನಮಾನದ ಆಮಿಷಗಳನ್ನು ಒಡ್ಡಲಾಗುತ್ತಿತ್ತು. ಕೆಲವೊಮ್ಮೆ ಉಪಮಹಾಪೌರರ ಹುದ್ದೆ, ಸಮಿತಿಗಳ ಅಧ್ಯಕ್ಷ, ಸದಸ್ಯ ಸ್ಥಾನಗಳೂ ಲಭ್ಯವಾಗಿವೆ.
ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ದೋಸ್ತಿ ಆಡಳಿತಕ್ಕೆ ಮುಂದಾಗಿರುವುದರಿಂದ ಪಕ್ಷೇತರರನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿಗೆ ಬಹುಮತವಿಲ್ಲದ್ದರಿಂದ ಅವರೂ ತಲೆಕೆಡೆಸಿಕೊಂಡಿಲ್ಲ.
ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಜೆಡಿಎಸ್ಗೆ ಮೇಯರ್ ಸ್ಥಾನ
ಬಿಜೆಪಿ ಟಿಕೆಟ್ ಸಿಗದೆ ಬಂಡಾಯವೆದ್ದು ಚಾಮುಂಡಿಪುರಂ 55ನೇ ವಾರ್ಡ್ ನಿಂದ ಆಯ್ಕೆಯಾಗಿರುವ ಮ.ವಿ.ರಾಮಪ್ರಸಾದ್, ಕಾಂಗ್ರೆಸ್ ಟಿಕೆಟ್ ಸಿಗದೆ ಬಂಡಾಯವೆದ್ದು ಮಹದೇಶ್ವರ ಬಡಾವಣೆ 3ನೇ ವಾರ್ಡ್ ನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೆ.ವಿ.ಶ್ರೀಧರ್ ಜಯಗಳಿಸಿದ್ದರೆ, ಜಾ.ದಳದ ವಿರುದ್ಧ ಬಂಡಾಯವೆದ್ದ ಕೆ.ಹರೀಶ್ ಗೌಡ ಬೆಂಬಲಿಗರಾದ ಪೈ.ಶ್ರೀನಿವಾಸ್ ಜಾ.ದಳದ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಅವರ ಸತತ 5ನೇ ಗೆಲುವಿಗೆ ಬ್ರೇಕ್ ಹಾಕಿದ್ದಾರೆ.
ಅದೇ ರೀತಿ ಕೆ.ಜಿ.ಕೊಪ್ಪಲಿನಲ್ಲಿ ಹರೀಶ್ ಗೌಡ ಬೆಂಬಲಿಗ ಶಿವಕುಮಾರ್ (ಶಿವಪ್ಪ) ಅವರು ಹಾಲಿ ನಗರಪಾಲಿಕೆ ಸದಸ್ಯರಾಗಿದ್ದ ಎಸ್.ಬಾಲು ಅವರನ್ನು ಮಣಿಸಿದ್ದಾರೆ. ಮ.ವಿ.ರಾಮಪ್ರಸಾದ್ ಬಿಜೆಪಿ ಸೋಲಿಗೆ ಹಾಗೂ ಕೆ.ವಿ.ಶ್ರೀಧರ್ ಕಾಂಗ್ರೆಸ್ ಸೋಲಿಗೆ ಕಾರಣವಾಗಿ ಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?
ಹೀಗಾಗಿ ಇವರಿಬ್ಬರನ್ನೂ ಆಯಾ ಪಕ್ಷಗಳು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸದ್ಯಕ್ಕೆ ಅನುಮಾನವಾಗಿದೆ. ಇವರೂ ಕೂಡ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದ ಜತೆ ಗುರುತಿಸಿ ಕೊಳ್ಳಬೇಕು ಎಂದು ತೀರ್ಮಾನಿಸಿಲ್ಲ ಎನ್ನಲಾಗಿದೆ.
ಇನ್ನು ಜಾ.ದಳದ ವಿರುದ್ಧ ಬಂಡಾಯವೆದ್ದಿರುವ ಕೆ.ಹರೀಶ್ ಗೌಡ ಬೆಂಬಲಿಗರನ್ನು ಕೂಡ ಯಾವ ಪಕ್ಷದ ಮುಖಂಡರೂ ಸಂಪರ್ಕಿಸಿಲ್ಲ. ನರಸಿಂಹರಾಜ ಕ್ಷೇತ್ರದಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿರುವ ಸಮೀವುಲ್ಲಾ (ಅಜ್ಜು) ಅವರೂ ಕೂಡ ಅತಂತ್ರರಾಗಿದ್ದಾರೆ.
ಜಾ.ದಳ 18 ಸ್ಥಾನಗಳನ್ನು ಹೊಂದಿದ್ದು, ಬಿಎಸ್ ಪಿಯಿಂದ ಒಬ್ಬರು, ಓರ್ವ ಶಾಸಕ ಹಾಗೂ ಇಬ್ಬರು ವಿಧಾನಪರಿಷತ್ ಸದಸ್ಯರ ಬೆಂಬಲದೊಂದಿಗೆ 22 ಸದಸ್ಯ ಬಲ ಹೊಂದಿದ್ದರೆ, ಕಾಂಗ್ರೆಸ್ 19 ಸದಸ್ಯರು, ಓರ್ವ ಶಾಸಕ ಹಾಗೂ ಒಬ್ಬರು ವಿಧಾನಪರಿಷತ್ ಸದಸ್ಯರ ಬೆಂಬಲದಿಂದ 21 ಸದಸ್ಯ ಬಲ ಹೊಂದಿದೆ.
ಮಹಾಪೌರರು ಮತ್ತು ಉಪಮಹಾಪೌರರ ಸ್ಥಾನ ಪಡೆಯಲು 38 ಸದಸ್ಯರ ಬಲ ಸಾಕು. ಆದರೆ ಜಾ.ದಳ ಮತ್ತು ಕಾಂಗ್ರೆಸ್ ಮೈತ್ರಿಯಿಂದ 43 ಸದಸ್ಯರಾಗುತ್ತಾರೆ. ಹೀಗಾಗಿ ಪಕ್ಷೇತರರು ಅಗತ್ಯವಿಲ್ಲವಾಗಿದೆ.
ಹಿಂದೆ ಪಕ್ಷೇತರರ ಅಗತ್ಯ ಎಷ್ಟಿತ್ತೆಂದರೆ, ಅವರನ್ನು ಅಪಹರಿಸುವುದು, ಮನೆಯಿಂದ ಕರೆದುಕೊಂಡು ಬಂದು ತಮ್ಮ ಜತೆಯೇ ದಿಗ್ಬಂಧನದಲ್ಲಿ ಇಟ್ಟುಕೊಳ್ಳುವುದು, ರೆಸಾರ್ಟ್ ವಾಸ್ತವ್ಯ, ಚುನಾವಣೆ ದಿನ ಕೊಠಡಿಯಲ್ಲಿ ಕೂಡಿ ಹಾಕಿಕೊಳ್ಳುವುದು, ಹೊಡೆದಾಟ ಎಲ್ಲವೂ ನಡೆದಿತ್ತು.
ಇದೇ ಮೊದಲ ಬಾರಿಗೆ ಮಹಾನಗರಪಾಲಿಕೆ ಇತಿಹಾಸದಲ್ಲಿ ಪಕ್ಷೇತರರು ರಾಜಕೀಯ ಚದುರಂಗದಾಟದಿಂದ ದೂರ ಉಳಿಯುವಂತಾಗಿದೆ.