ನಾಗರಹೊಳೆ ಅರಣ್ಯದಲ್ಲಿ ಜಿಂಕೆ ಬೇಟೆಗಾರನ ಬಂಧನ
ಮೈಸೂರು, ಜುಲೈ 29 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ನಾಲ್ವರು ಬೇಟೆಗಾರರ ಪೈಕಿ ಓರ್ವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಪರಾರಿಯಾದ ಮೂವರ ಬಂಧನಕ್ಕೆ ಬಲೆಬೀಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಸುಳುಗೋಡು ಗ್ರಾಮದ ಮರೀಗೌಡರ ಪುತ್ರ ಎಚ್.ಎಂ.ದೇವೇಗೌಡ ಬಂಧಿತ ಬೇಟೆಗಾರ. ಹುಣಸೂರು ವಲಯದ ಕಚುವಿನಹಳ್ಳಿ ಸೆಕ್ಷನ್ನಲ್ಲಿ ನಾಲ್ವರು ಬಂದೂಕು ಮತ್ತು ಆಯುಧ ಹಿಡಿದುಕೊಂಡು ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದರು.
ಈ ಸಂದರ್ಭ ಗಸ್ತಿನಲ್ಲಿದ್ದ ಎಡಿಆರ್ಎಫ್ಓ ನೇತೃತ್ವದ ತಂಡ ದಾಳಿ ಮಾಡಿದೆ. ಆದರೆ ಅಷ್ಟರಲ್ಲೇ ನಾಲ್ವರ ಪೈಕಿ ಮೂವರು ಕಾಡಿನೊಳಗೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಎಚ್.ಎಂ.ದೇವೇಗೌಡ ಎಂಬಾತ ಸಿಕ್ಕಿಬಿದ್ದಿದ್ದಾನೆ.
ಆತನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಕಾಡಿನಲ್ಲಿ ಜಿಂಕೆ ಮತ್ತು ಕಾಡುಹಂದಿಯನ್ನು ಬೇಟೆಯಾಡಲು ಬಂದಿದ್ದರು ಎಂಬುದನ್ನು ತಿಳಿಸಿದ್ದಾನೆ.
ಆರೋಪಿ ದೇವೇಗೌಡನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈಗಾಗಲೇ ಪರಾರಿಯಾಗಿರುವ ಆರೋಪಿಗಳ ವಿವರವನ್ನು ಕಲೆಹಾಕಲಾಗಿದ್ದು ಅವರನ್ನು ಶೀಘ್ರವೇ ಬಂಧಿಸಲಾಗುವುದು ವಲಯ ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿದ್ದಾರೆ.