ಸಿದ್ದರಾಮಯ್ಯ ಆಪ್ತ ವಿಜಯ ಶಂಕರ್ ಬಿಜೆಪಿಗೆ ವಾಪಸ್!
ಮೈಸೂರು, ಅಕ್ಟೋಬರ್ 25 : "ನಾನು ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಿಲ್ಲ. ಅಲ್ಲಿನ ಸಂಪ್ರದಾಯವೇ ಹಾಗೆ. ಸಿದ್ದರಾಮಯ್ಯ ಟಿಕೆಟ್ ಕೊಡಿಸಿದರೂ ಮೈತ್ರಿ ನಿಯಮ ಪಾಲನೆಯಾಗಲಿಲ್ಲ" ಎಂದು ಮಾಜಿ ಸಂಸದ ಸಿ. ಎಚ್. ವಿಜಯ ಶಂಕರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಿ. ಎಚ್. ವಿಜಯ ಶಂಕರ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಮೈಸೂರಿನಲ್ಲಿ ಶುಕ್ರವಾರ ಅವರು ಬೆಂಬಲಿಗರ ಸಭೆ ನಡೆಸಿದರು, ಮುಂದಿನ ನಡೆ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಿದರು.
ಮೈಸೂರು ಬಿಜೆಪಿ ಸಮಾವೇಶಕ್ಕೆ ವಿಜಯ್ ಶಂಕರ್ ಗೈರು
"ಕಾಂಗ್ರೆಸ್ನಲ್ಲಿ ಮೂಲ ಹಾಗೂ ವಲಸಿಗ ವಾಗ್ವಾದ ಜೋರಾಗಿದೆ. 5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ಮೂಲ, ವಲಸಿಗ ವಿವಾದಕ್ಕೆ ಸಿಲುಕಿಸಲಾಗಿದೆ. ಇನ್ನು ನಮ್ಮಂತವರ ಪರಿಸ್ಥಿತಿ ಏನು?" ಎಂದು ವಿಜಯ ಶಂಕರ್ ಪ್ರಶ್ನೆ ಮಾಡಿದರು.
ವಿಜಯಶಂಕರ್ ಮನವೊಲಿಸಿದ ಬಿಜೆಪಿ ನಾಯಕರು
"2009, 2014 ಮತ್ತು 2019ರ ಲೋಕಸಭಾ ಚುನಾವಣೆಯ ಸತತ ಸೋಲು ನನ್ನನ್ನು ಘಾಸಿಗೊಳಿಸಿತು. 2 ವರ್ಷಗಳ ಹಿಂದೆ ಸಿದ್ದರಾಮಯ್ಯ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ಪಕ್ಷ ಸೇರ್ಪಡೆಗೆ ಕೆಪಿಸಿಸಿ ಕಚೇರಿಗೆ ಹೋಗಿದ್ದು ಬಿಟ್ಟರೆ ಇಂದಿನ ತನಕ ಆ ಕಚೇರಿಗೆ ಕಾಲಿಟ್ಟಿಲ್ಲ" ಎಂದರು.
ಸಿ.ಎಚ್ ವಿಜಯ್ ಶಂಕರ್ ಬಿಜೆಪಿಗೆ ಗುಡ್ ಬೈ
ಬಿಜೆಪಿಯಿಂದ ಆಹ್ವಾನ
"ಬಿಜೆಪಿಗೆ ಮರಳುವಂತೆ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ಸ್ಥಿತ್ಯಂತರ ಸಹಜ. ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದು ಹೇಳಿದ್ದಾರೆ. ಬೆಂಬಲಿಗರು ಸಹ ಬಿಜೆಪಿಗೆ ವಾಪಸ್ ಆಗುವುದು ಸೂಕ್ತ ಎಂದು ಹೇಳಿದ್ದಾರೆ. ಬಿಜೆಪಿ ಸೇರುವ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುವೆ" ಎಂದು ಸಿ. ಎಚ್. ವಿಜಯ ಶಂಕರ್ ಹೇಳಿದರು.
ಬಿಜೆಪಿ ತೊರೆದದ್ದು ತಪ್ಪಾಗಿದೆ
ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಿ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣ ನಿಮ್ಮಲ್ಲಿದೆ. ಪ್ರತಿ ತಾಲೂಕಿನಲ್ಲಿಯೂ ನಿಮ್ಮ ಅಭಿಮಾನಿಗಳಿದ್ದು, ಅವರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಬೆಂಬಲಿಗರು ಸಲಹೆ ನೀಡಿದ್ದಾರೆ.
ಅಧಿಕಾರ ಕೇಳಲು ಆಗುವುದಿಲ್ಲ
"ಸಿದ್ದರಾಮಯ್ಯ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ನನಗೆ ಟಿಕೆಟ್ ನೀಡಿದ ಸಿದ್ದರಾಮಯ್ಯಗೆ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ" ಎಂದು ಸಿ. ಎಚ್. ವಿಜಯಶಂಕರ್ ಹೇಳಿದರು.
ಲೋಕಸಭಾ ಚುನಾವಣೆ ಸೋಲು
2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಸಿ. ಎಚ್. ವಿಜಯಶಂಕರ್ ಬಿಜೆಪಿಯಲ್ಲಿದ್ದರು. ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಲಾಯಿತು. 1,65,688 ಮತಗಳನ್ನು ಪಡೆದು ಎಚ್. ಡಿ. ದೇವೇಗೌಡ ವಿರುದ್ಧ ಸೋತರು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕಾಂಗ್ರೆಸ್ಗೆ ಬಂದರು. ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಸಿಕ್ಕಿತು. 5,50,327 ಮತಗಳನ್ನು ಪಡೆದು ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸೋಲು ಕಂಡರು. ಈಗ ವಿಜಯ ಶಂಕರ್ ಬಿಜೆಪಿಗೆ ಮರಳುವ ಸಾಧ್ಯತೆ ಇದೆ.