ಎಚ್.ಡಿ.ಕೋಟೆಯಲ್ಲಿ ಸಾವಿಗೀಡಾದವರು ಮಂಗನ ಕಾಯಿಲೆಯಿಂದಲ್ಲ:ವೈದ್ಯರ ಸ್ಪಷ್ಟನೆ
ಮೈಸೂರು, ಜನವರಿ 28: ಕಳೆದೆರಡು ದಿನಗಳ ಕೆಳಗೆ ಮೈಸೂರಿನ ಎಚ್ ಡಿ ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹೊಸಹಳ್ಳಿಯ ಹಾಡಿಯಲ್ಲಿ ಇಬ್ಬರು ಮೃತಪಟ್ಟಿದ್ದಕ್ಕೆ ಮಂಗನ ಕಾಯಿಲೆ ಕಾರಣವಲ್ಲ. ಬೇರೆ ಕಾರಣಗಳಿಂದ ಅವರು ಮೃತಪಟ್ಟಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಕೇರಳದ ಮಾನಂದವಾಡಿಯ ತಾಲೂಕು ಆಸ್ಪತ್ರೆಯಲ್ಲಿ ಮತ್ತು ಕೊಚ್ಚಿಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಇಬ್ಬರು ತಿಮ್ಮನಹೊಸಹಳ್ಳಿ ಹಾಡಿಯವರಲ್ಲ. ಇಬ್ಬರು ಮಾನಂದವಾಡಿ ತಾಲ್ಲೂಕಿನ ಅಕ್ಕಪಕ್ಕದ ಗ್ರಾಮದವರು ಅಷ್ಟೇ. ಈ ಇಬ್ಬರು ತಿಮ್ಮನಹೊಸಹಳ್ಳಿ ಹಾಡಿಯ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದು, ಅನಾರೋಗ್ಯದ ಕಾರಣ ತಿಮ್ಮನಹೊಸಳ್ಳಿ ಹಾಡಿಗೆ ವಿಶ್ರಾಂತಿಗಾಗಿ ಬಂದಿದ್ದರು. ಆದರೆ ರೋಗದ ತೀವ್ರತೆ ಮತ್ತಷ್ಟು ಹೆಚ್ಚಾದಾಗ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ ಎಂದರು.
ಮೈಸೂರು ಜಿಲ್ಲೆಯಲ್ಲೂ ಮಂಗನ ಕಾಯಿಲೆಯ ಭೀತಿ:ಆತಂಕಗೊಂಡ ಜನ
ಸದ್ಯ ಇವರಿಂದ ಪಡೆದ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗನ ಕಾಯಿಲೆ ಇರುವ ಲಕ್ಷಣಗಳು ಕಂಡು ಬಂದಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಿಮ್ಮನ ಹೊಸಹಳ್ಳಿಹಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಸಾಧಾರಣವಾಗಿ ಆದಿವಾಸಿ ಹಾಗೂ ಗಿರಿಜನರು ಕಾಡಿನಲ್ಲಿ ಅಡ್ಡಾಡುವ ಸಮಯದಲ್ಲಿ ಮೈತುಂಬಾ ಬಟ್ಟೆ ಧರಿಸುವುದಿಲ್ಲ.
ಬಟ್ಟೆ ಧರಿಸದೇ ಇರುವ ಸಂದರ್ಭದಲ್ಲಿ ಈ ಉಣ್ಣೆಗಳು ಮನುಷ್ಯನ ದೇಹವನ್ನು ಸೇರುತ್ತವೆ. ಹಾಗಾಗಿ ಮೈತುಂಬಾ ಬಟ್ಟೆಯನ್ನು ಧರಿಸುವಂತೆ ತಿಳಿಸಲಾಗಿದೆ. ಕರಪತ್ರಗಳನ್ನು ಹಂಚಲಾಗುತ್ತಿದೆ. ಅರಣ್ಯ ಇಲಾಖೆಯವರಿಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಕಾಯಿಲೆಯಿಂದ ದೂರ ಇರಲು ಹೇಗೆ ಇರಬೇಕು ಎನ್ನುವುದನ್ನು ಇಲ್ಲಿನ ಜನರಿಗೆ ವಿವರಿಸಿ ಸಾಕಷ್ಟು ಅರಿವು ಮೂಡಿಸಲಾಗಿದೆ. ಈ ಜಾಗದ ಕಾಡಿನಲ್ಲಿರುವ ಉಣ್ಣೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಕೀಟಶಾಸ್ತ್ರ ತಜ್ಞದವರು, ತಾಲೂಕಿನ ಆರೋಗ್ಯ ಇಲಾಖೆಯ ತಂಡ ಪ್ರತಿ ಹಾಡಿಗಳಲ್ಲಿ ಸಮೀಕ್ಷೆ ನಡೆಸುವ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.