ಮೈಸೂರಿನಲ್ಲಿ ಬರೋಬ್ಬರಿ 107 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ
ಮೈಸೂರು, ಮಾರ್ಚ್ 16: ಕೊರೊನಾ ಸೋಂಕು ತಡೆಗಟ್ಟುವ ಸಂಬಂಧ ಮೈಸೂರು ಜಿಲ್ಲೆಯಲ್ಲಿ 107 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು, ಈ ಪೈಕಿ 51 ಜನರನ್ನು ಮನೆಯಲ್ಲಿರಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದರು.
51 ಜನರನ್ನು ಮನೆಯಲ್ಲಿರಿಸಿ ನಿಗಾ ವಹಿಸಿದ್ದ ನಿಗದಿತ ಸಮಯ ಮುಗಿದಿದೆ. ಓರ್ವ ವ್ಯಕ್ತಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅವರ ರಕ್ತ ಹಾಗೂ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷಾ ವರದಿ ಬರಬೇಕಾಗಿದೆ ಎಂದರು.
ಮೈಸೂರಿನಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ
8 ವ್ಯಕ್ತಿಗಳ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು, 8 ರಲ್ಲಿ 7 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈ ನಡುವೆ ಮೈಸೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ದೇಶಾದ್ಯಂತ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಾದ್ಯಂತ ಸಭೆ, ಸಮಾರಂಭ, ಸಾಮೂಹಿಕ ವಿವಾಹ, ಜಾತ್ರಾಮಹೋತ್ಸವ, ದೇವರ ಉತ್ಸವಗಳನ್ನು ನಡೆಸುವಂತಿಲ್ಲ. ದೇಗುಲಗಳಲ್ಲಿ ಪ್ರಸಾದ ವಿತರಣೆಗೂ ನಿರ್ಬಂಧ ವಿಧಿಸಲಾಗಿದೆ. ಆದರೆ ದೇಗುಲಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜಾ ವಿಧಿಗಳಿಗೆ ನಿರ್ಬಂಧ ಇಲ್ಲ.
ಮೈಸೂರಿನಲ್ಲಿ ಕೊರೊನಾ ಬಗ್ಗೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ
ದೇಗುಲಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮುಂದಿನ ಆದೇಶದವರೆಗೂ ನಿರ್ಬಂಧ ಅನ್ವಯ ಆಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.
ಮೈಸೂರು ಜಿಲ್ಲೆಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆ , ಟಿ.ನರಸೀಪುರ ತಾಲ್ಲೂಕು ಆಸ್ಪತ್ರೆ, ಹೆಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆ, ಕೆ.ಆರ್.ನಗರ ತಾಲ್ಲೂಕು ಆಸ್ಪತ್ರೆ, ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆ, ಹುಣಸೂರು ತಾಲ್ಲೂಕು ಆಸ್ಪತ್ರೆ, ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ 10 ಬೆಡ್ ನ ಐಸೋಲೇಷನ್ ವಾರ್ಡ್ ನಿರ್ಮಾಣ ಆಗಿದೆ ಎಂದರು.
ಅಗತ್ಯವಿದ್ದರೆ ಮೈಸೂರಿನ ಅಪೋಲೋ, ಕೊಲಂಬಿಯಾ ಏಷಿಯಾ, ಜೆಎಸ್ಎಸ್, ವಿಕ್ರಮ್, ಸುಯೋಗ್ ಹಾಗೂ ಇತರೆ ದೊಡ್ಡ ಖಾಸಗಿ ಆಸ್ಪತ್ರೆಗೆ ಮನವಿ ಮಾಡಿದ್ದು, 10 ಬೆಡ್ನ ಐಸೋಲೇಷನ್ ವಾರ್ಡ್ ಕಾಯ್ದಿರಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.