ಮೈಸೂರಿನಲ್ಲಿ ಈರುಳ್ಳಿ ದಾಸ್ತಾನಿಗೂ ಬಿತ್ತು ಮಿತಿ; ಯರ್ರಾಬಿರ್ರಿ ಕೂಡಿಡುವಂತಿಲ್ಲ
ಮೈಸೂರು, ಡಿಸೆಂಬರ್ 10: ಮುಕ್ತ ಮಾರುಕಟ್ಟೆಯಲ್ಲಿ ಮತ್ತು ಸಗಟು ಗೋದಾಮುಗಳಲ್ಲಿ ಈರುಳ್ಳಿ ದಾಸ್ತಾನಿರಿಸುವುದನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಅವರು, ಸರ್ಕಾರವು ಉಲ್ಲೇಖಿತ ಅಧಿಸೂಚನೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986 ಅಡಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ಮಾರಾಟಗಾರರಲ್ಲಿ/ಡೀಲರ್ ಗಳಲ್ಲಿ/ಉತ್ಪಾದಕರಲ್ಲಿ/ಕಮಿಷನ್ ಏಜೆಂಟ್ ಗಳಲ್ಲಿ ದಾಸ್ತಾನಿನ ಮಿತಿಯನ್ನು 250 ಕ್ವಿಂಟಾಲ್ ಗೆ ಹಾಗೂ ಈರುಳ್ಳಿ ಚಿಲ್ಲರೆ ಮಾರಾಟಗಾರರಲ್ಲಿ ದಾಸ್ತಾನಿನ ಮಿತಿಯನ್ನು 50 ಕ್ವಿಂಟಾಲ್ ಗೆ ಮಿತಿಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಈರುಳ್ಳಿ ಬೆಳೆವ ಹುಬ್ಬಳ್ಳಿಯಲ್ಲಿ ಸೇಬು ಸಸ್ತಾ, ಆದರೆ ಈರುಳ್ಳಿ ದುಬಾರಿ
ಈ ಗರಿಷ್ಠ ದಾಸ್ತಾನಿನ ಮಿತಿಯನ್ನು ಮೀರಿ ಅಧಿಕ ಈರುಳ್ಳಿಯನ್ನು ದಾಸ್ತಾನಿರಿಸಿದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ
ಜಿಲ್ಲೆಯ ಈರುಳ್ಳಿ ಸಗಟು ಮಾರಾಟಗಾರರು/ಡೀಲರ್ ಗಳು/ಕಮಿಷನ್ ಏಜೆಂಟ್ ಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ಈರುಳ್ಳಿ ಚಿಲ್ಲರೆ ಮಾರಾಟಗಾರರು ತಮ್ಮ ತಾಲೂಕಿನ ತಹಶೀಲ್ದಾರರಿಂದ ಮೈಸೂರು ನಗರದವರಾದಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಅನೌಪಚಾರಿಕ ಪಡಿತರ ಪ್ರದೇಶ ಕಚೇರಿಯಿಂದ ಕರ್ನಾಟಕ ಅಗತ್ಯ ವಸ್ತುಗಳ ಪರವಾನಗಿ ಆದೇಶ 1986ರಂತೆ ಪರವಾನಿಗೆ ಪಡೆದುಕೊಳ್ಳಲು ಸೂಚಿಸಿದೆ.