ಮೈಸೂರಿನಲ್ಲಿ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ; ಕೈಗಾರಿಕೆಗಳಿಗೆ ಡಿಸಿ ಸೂಚನೆ
ಮೈಸೂರು, ಅಕ್ಟೋಬರ್ 30: ಮೈಸೂರಿನ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೆಲ್ಲರಿಗೂ ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಕೈಗಾರಿಕೆಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈಸೂರು ಜಿಲ್ಲೆಯ ಕೈಗಾರಿಕೆಗಳ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಾರ್ಮಿಕರಿಗೆ ಆಗಾಗ್ಗೆ ಪರೀಕ್ಷೆಯನ್ನು ನಡೆಸುತ್ತಿರಬೇಕು. ಪರೀಕ್ಷೆ ಮಾಡಿಸುವಲ್ಲಿ ಕೈಗಾರಿಕೋದ್ಯಮಿಗಳು ಕೂಡ ಸಹಕರಿಸಬೇಕು ಎಂದು ತಿಳಿಸಿದರು.
ಮೈಸೂರು ಅರಮನೆ ನೋಡೋಕೂ ಮುನ್ನ ಕೋವಿಡ್ ಟೆಸ್ಟ್ ಕಡ್ಡಾಯ
ಕೈಗಾರಿಕಾ ಸಂಘದವರು ಕಾರ್ಮಿಕರಿಗೆ ಈ ಪರೀಕ್ಷೆಯನ್ನು ನಡೆಸಲು ನಿಗದಿತ ಜಾಗವನ್ನು ಗುರುತಿಸಬೇಕು. ಆ ನಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಉಚಿತವಾಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಕುರಿತು ಶ್ರೀಘ್ರವೇ ಕೆಲಸ ನಡೆಯಬೇಕು ಎಂದರು. ಇನ್ನು ಜಿಲ್ಲೆಯ ಹಲವು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ 50 ವರ್ಷ ಮೇಲ್ಪಟ್ಟಿರುವ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯೂ ಇದೆ ಎಂದರು. ಅಂಥವರಿಗೆ ಸೋಂಕಿನ ಲಕ್ಷಣ ಕಂಡುಬಂದರೆ ತಡ ಮಾಡದೇ ಪರೀಕ್ಷೆ ಮಾಡಿಸಲು ಮುಂದಾಗಬೇಕು ಎಂದು ನಿರ್ದೇಶಿಸಿದರು.
ಜ್ಯುಬಿಲಿಯಂಟ್ ಕಾರ್ಖಾನೆ ನೆನಪು: ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕಾರ್ಖಾನೆಯ ಔಷಧ ತಯಾರಿಕಾ ಘಟಕದಲ್ಲಿ ಓರ್ವ ವ್ಯಕ್ತಿಯಿಂದ ಹಲವು ವ್ಯಕ್ತಿಗಳಿಗೆ ಕೊರೊನಾ ವೈರಸ್ ಸೋಂಕು ಹರಡಿದ ಕಾರಣ, ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಅದಕ್ಕಾಗಿ ಕಾರ್ಖಾನೆಗೆ ಬೀಗ ಹಾಕಿ ವೈರಸ್ ಮೂಲ ಪತ್ತೆಗೆ ಸರ್ಕಾರ ತನಿಖೆ ನಡೆಸಿತಾದರೂ ಕೊನೆಗೂ ಅದರ ಮೂಲ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸಲಾಯಿತು. ಇದೀಗ ಎಲ್ಲಾ ಕಾರ್ಖಾನೆಗಳಲ್ಲಿನ ಕಾರ್ಮಿಕರಿಗೂ ಕೊರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
Recommended Video
ಮೈಸೂರಿನ ಪ್ರಸ್ತುತ ಕೊರೊನಾ ಸೋಂಕಿನ ಪ್ರಕರಣ: ಮೈಸೂರಿನಲ್ಲಿ ಅ.30ರ ವರದಿಯಂತೆ ಒಟ್ಟು 47,523 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದುವರೆಗೂ 44,786 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ 1,781 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 956 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.