ಮೈಸೂರು: IAS ಅಧಿಕಾರಿಗಳ ಬೆನ್ನಲ್ಲೇ IPS ಅಧಿಕಾರಿಗಳ ವರ್ಗಾವಣೆ
ಮೈಸೂರು, ಜೂನ್ 9: ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ವರ್ಗಾವಣೆ ಬೆನ್ನಲ್ಲೇ ಮೈಸೂರಿನ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ, ಇಬ್ಬರು ಪ್ರಮುಖ ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ.
ರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಐಎಎಸ್ ಅಧಿಕಾರಿಗಳ ಜಟಾಪಟಿ ನಂತರ, ಇಬ್ಬರೂ ಅಧಿಕಾರಿಗಳ ವರ್ಗಾವಣೆಯೊಂದಿಗೆ ಅಂತ್ಯಗೊಂಡಿತ್ತು. ಆ ಬಳಿಕ ಮೈಸೂರಿನ ಜಿಲ್ಲಾಧಿಕಾರಿಯಾಗಿ ಡಾ.ಬಗಾದಿ ಗೌತಮ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ನೂತನ ಎಸ್ಪಿಯಾಗಿ ಆರ್.ಚೇತನ್ ನೇಮಕ
ಇದೀಗ ಮೈಸೂರು ಜಿಲ್ಲೆಯ ಪೊಲೀಸ್ ಇಲಾಖೆಗೆ ಬದಲಾವಣೆ ಮಾಡಿರುವ ಸರ್ಕಾರ, ಮೈಸೂರಿನ ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದ ಸಿ.ಬಿ ರಿಷ್ಯಂತ್ ಹಾಗೂ ಉಪ ಪೊಲೀಸ್ ಆಯುಕ್ತರಾಗಿದ್ದ ಡಾ.ಎ.ಎನ್ ಪ್ರಕಾಶ್ ಗೌಡ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇವರ ಜಾಗಕ್ಕೆ ಕರಾವಳಿ ಸೆಕ್ಯೂರಿಟಿ ಪೊಲೀಸ್ ಅಧಿಕಾರಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್ಪಿಯಾಗಿ ಹಾಗೂ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಆಗಿದ್ದ ಪ್ರದೀಪ್ ಗುಂಟಿ ಅವರನ್ನು ಮೈಸೂರು ಡಿಸಿಪಿಯಾಗಿ ನೇಮಕ ಮಾಡಿದೆ.
ರವಿ ಡಿ. ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ನಾಲ್ವರು ಹೊಸ ಅಧಿಕಾರಿಗಳು
ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮೈಸೂರು ಒಂದಿಲ್ಲೊಂದು ವಿಷಯದಲ್ಲಿ ಪ್ರಚಲಿತದಲ್ಲಿರುತ್ತದೆ. ಇಂತಹ ಜಿಲ್ಲೆಗೆ ಇದೀಗ ನಾಲ್ವರು ಹೊಸ ಅಧಿಕಾರಿಗಳ ವರ್ಗಾವಣೆ ಮಾಡಿರುವುದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಉತ್ತಮ ಆಡಳಿತ ನೀಡುವ ಹೊಣೆಗಾರಿಕೆ ಈ ಅಧಿಕಾರಿಗಳ ಮೇಲೆ ಹೆಚ್ಚಾಗಿದೆ.
ಬೆಟ್ಟದಷ್ಟು ಜವಾಬ್ದಾರಿ ಇದೆ
ಸಾಂಸ್ಕೃತಿಕ ನಗರಿ ಮೈಸೂರಿಗೆ ಹೊಸದಾಗಿ ಬಂದಿರುವ ಈ ನಾಲ್ವರು ಅಧಿಕಾರಿಗಳ ಮೇಲೆ ದೊಡ್ಡಮಟ್ಟದ ಜವಾಬ್ದಾರಿ ಇದೆ. ಅದರಲ್ಲೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಗೆ ನಿಯೋಜನೆಗೊಂಡಿರುವುದು ಅಧಿಕಾರಿಗಳ ಮೇಲಿನ ಸವಾಲನ್ನು ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಭೂ ಒತ್ತುವರಿಗೆ ಸಂಬಂಧಿಸಿದಂತೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುವ ಹೊಣೆಗಾರಿಕೆ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗಿದೆ.
ಎಸ್ಪಿ ಹಾಗೂ ಡಿಸಿಪಿ ಮೇಲೆ ಭದ್ರತಾ ಜವಾಬ್ದಾರಿ
ಅದೇ ರೀತಿ ಕೋವಿಡ್ ನಿರ್ವಹಣೆ, ಪಾಲಿಕೆ ಮೇಯರ್ ಚುನಾವಣೆ ಯಶಸ್ವಿಯಾಗಿ ನಡೆಸುವುದು ಹಾಗೂ ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕಾದ ಜವಾಬ್ದಾರಿ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಅವರ ಮೇಲಿದೆ. ಇನ್ನು ಹೊಸದಾಗಿ ವರ್ಗಾವಣೆ ಆಗಿರುವ ಎಸ್ಪಿ ಹಾಗೂ ಡಿಸಿಪಿ ಮೇಲೂ ಜಿಲ್ಲೆಯ ಭದ್ರತಾ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ನಾಲ್ವರು ಹೊಸ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಾಂಸ್ಕೃತಿಕ ನಗರಿ ಮೈಸೂರಿಗರ ನಿರೀಕ್ಷೆಗಳು ಹೆಚ್ಚಾಗಿದೆ.