ಅಕ್ಟೋಬರ್ 8 ರವರೆಗೂ ಝಗಮಗಿಸಲಿದೆ ಮೈಸೂರಿನ ರಸ್ತೆಗಳು
ಮೈಸೂರು, ಅಕ್ಟೋಬರ್ 1: ಕಳೆದ 10 ದಿನಗಳಿಂದ ಮೈಸೂರಿನಲ್ಲಿ ಕಳೆಗಟ್ಟಿದ್ದ ದಸರಾ ಸಂಭ್ರಮಕ್ಕೆ ನಿನ್ನೆ ಜಂಬೂ ಸವಾರಿ ಮೆರವಣಿಗೆ ಹಾಗೂ ಆಕರ್ಷಕ ಪಂಜಿನ ಕವಾಯತು ಕಾರ್ಯಕ್ರಮದ ಮೂಲಕ ಅದ್ದೂರಿ ತೆರೆ ಬಿದ್ದಿದೆ.
In Pics:ಪಂಜಿನ ಕವಾಯಿತಿನ ಚಿತ್ರಗಳನ್ನು ಕಣ್ತುಂಬಿಕೊಳ್ಳಿ
ಆದರೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ವಿವಿಧೆಡೆ ಮಾಡಲಾಗಿರುವ ದೀಪಾಲಂಕಾರ ಮಾತ್ರ ಅಕ್ಟೋಬರ್ 8 ರವರೆಗೂ ಮೈಸೂರಿನಲ್ಲಿ ಜಗಮಗಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಅದ್ಧೂರಿಯಾಗಿ ದೀಪಲಂಕಾರವನ್ನ ಮಾಡಲಾಗಿದ್ದು, ದೀಪಾಲಂಕಾರದಿಂದ ಮೈಸೂರು ರಾರಾಜಿಸುತ್ತಿದೆ.
ರಿಲ್ಯಾಕ್ಸ್ ಮೂಡಿನಲ್ಲಿ ಅರ್ಜುನ ಆ್ಯಂಡ್ ಟೀಂ
ಇನ್ನು ದಸರೆಯ ಮುಖ್ಯ ಆಕರ್ಷಣೆಗೆ ಕಾರಣೀಭೂತರಾದ ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳು ಇಂದು ವಿಶ್ರಾಂತಿಗೆ ಜಾರಿವೆ. ಆಗಸ್ಟ್ 14ರಂದು ಗಜ ಪಯಣ ಆರಂಭಿಸಿ ಆಗಸ್ಟ್ 20ರಂದು ಅರಮನೆಗೆ ಆಗಮಿಸಿದ ಆನೆಗಳು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಾಯಂಕಾಲ ತಾಲೀಮು ನಡೆಸುತ್ತಿದ್ದವು. ಬಳಿಕ ನಿನ್ನೆ ಜಂಬೂ ಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕ್ಯಾಪ್ಟನ್ ಅರ್ಜುನ ಹಾಗೂ ಟೀಂ ಇಂದು ವಿರಾಮ ತೆಗೆದುಕೊಳ್ಳುತ್ತಿವೆ.
ಮೈನವಿರೇಳಿಸುವ ಪಂಜಿನ ಕವಾಯತಿಗೆ ಸಾಕ್ಷಿಯಾದ ಮೈಸೂರು
ಆನೆಗಳಾದ ಅರ್ಜುನ, ಬಲರಾಮ, ಭೀಮ, ಅಭಿಮನ್ಯು, ಗಜೇಂದ್ರ, ದ್ರೋಣ, ಕಾವೇರಿ, ವಿಜಯ, ವರಲಕ್ಷ್ಮೀ, ಕೃಷ್ಣ, ಹರ್ಷ, ಪ್ರಶಾಂತ, ಗೋಪಾಲಸ್ವಾಮಿ, ಗೋಪಿ ನಿರಾಳರಾಗಿದ್ದು, ಆನೆಗಳ ಮಾವುತರು ಹಾಗೂ ಕಾವಾಡಿಗರ ಕುಟುಂಬವೂ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದೆ.
ಗದಗದ ಸ್ತಬ್ಧ ಚಿತ್ರಕ್ಕೆ ದಕ್ಕಿತು ಬಹುಮಾನ
ಇನ್ನು ಜಂಬೂ ಸವಾರಿಗೂ ಮುನ್ನ ಪಾಲ್ಗೊಂಡ ಸ್ತಬ್ಧ ಚಿತ್ರಗಳಲ್ಲಿ ತೀರ್ಪುಗಾರರ ಗಮನ ಸೆಳೆದ ಗದಗ ಜಿಲ್ಲೆಯ ಧರ್ಮಸಮನ್ವಯ ಕುರಿತ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದಿದೆ.
ಇದರಲ್ಲಿ ವೀರನಾರಾಯಣ ದೇವಸ್ಥಾನ, ಜಾಮೀಯಾ ಮಜ್ಜಿದ್, ತ್ರೀಕೂಟೇಶ್ವರ ದೇವಸ್ಥಾನವನ್ನು ರಚಿಸಲಾಗಿತ್ತು. ಎರಡನೇ ಸ್ಥಾನವನ್ನು ಪ್ರವಾಸೋದ್ಯಮ ಇಲಾಖೆ ಪಡೆದುಕೊಂಡಿದ್ದು, ಕರ್ನಾಟಕ ಚಾರಿತ್ರಿಕ ಪರಂಪರೆ ಮತ್ತು ವನ್ಯಲೋಕದ ಕುರಿತು ನೋಡುಗರಿಗೆ ಮಾಹಿತಿ ನೀಡಿತ್ತು.
ಮೂರನೇ ಸ್ಥಾನವನ್ನು ಕಾವೇರಿ ನೀರಾವರಿ ನಿಗಮ ಮೈಸೂರು ತನ್ನದಾಗಿಸಿಕೊಂಡಿದ್ದು, ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದರ ಕುರಿತು ಜಾಗೃತಿ ಮೂಡಿಸಿತ್ತು. ಸಮಾಧಾನಕರ ಬಹುಮಾನವನ್ನು ಮೈಸೂರು ವಿಭಾಗ (ಚಿಕ್ಕಮಗಳೂರು), ಬೆಂಗಳೂರು ವಿಭಾಗ (ತುಮಕೂರು), ಅರಣ್ಯ ಇಲಾಖೆ, ಬೆಳಗಾಂ ವಿಭಾಗ, ಗುಲ್ಬರ್ಗಾ ವಿಭಾಗ ಪಡೆದುಕೊಂಡಿವೆ.