ಅಂಬಾರಿ ಹೊರುವ ಅರ್ಜುನ ಈ ಬಾರಿಯೂ ಮುಂದು, ಬರೋಬ್ಬರಿ 5,800 ಕೆ.ಜಿ ತೂಕ
ಮೈಸೂರು, ಆಗಸ್ಟ್ 27:ನಾಡ ಅಧಿದೇವತೆ ಚಾಮುಂಡೇಶ್ವರಿಯ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರುವ ಅರ್ಜುನ ಆನೆ ಈ ಬಾರಿಯೂ ಬಲಶಾಲಿಯಾಗಿ ಹೊರಹೊಮ್ಮಿದ್ದಾನೆ. ಬರೋಬ್ಬರಿ 5,800 ಕೆ.ಜಿ ತೂಕದೊಂದಿಗೆ ಮಿಕ್ಕೆಲ್ಲಾ ಆನೆಗಳಿಗಿಂತ ಮುಂದಿದ್ದಾನೆ.
ಮೈಸೂರು ಉಸ್ತುವಾರಿ ಸಿಗದಿದ್ದಕ್ಕೆ ಮುನಿಸಿಕೊಂಡರಾ ರಾಮದಾಸ್?
ಅರ್ಜುನ ಕಳೆದ ವರ್ಷಕ್ಕಿಂತ 150 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದು, ಕಟ್ಟುಮಸ್ತಾಗಿದ್ದಾನೆ. ಇಂದು ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ತೂಕ ಪರೀಕ್ಷೆಯನ್ನು ನಡೆಸಲಾಯಿತು. ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಎಲೆಕ್ಟ್ರಾನಿಕ್ ವೇಬ್ರಿಡ್ಸ್ ಮೇಲೆ ಅರ್ಜುನ ಬಂದು ನಿಲ್ಲುತ್ತಿದ್ದಂತೆ ಎಲ್ಲರ ಚಿತ್ತ ಕಂಪ್ಯೂಟರ್ನತ್ತ ವಾಲಿತು.
ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆ ಬಗ್ಗೆ ಗಮನ ಹರಿಸಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಜಂಬೂಸವಾರಿಗೆ ಎರಡು ದಿನ ಬಾಕಿ ಇರುವಾಗ ಮತ್ತೊಮ್ಮೆ ತೂಕ ಮಾಡಿಸಿ ಎಷ್ಟು ಪೌಷ್ಟಿಕಾಂಶ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ದಸರಾ ಮುಗಿದ ನಂತರವೂ ಆನೆಗಳನ್ನು ತೂಕಕ್ಕೆ ಒಳಪಡಿಸಲಾಗುತ್ತದೆ. ದಸರಾ ಆನೆಗಳಿಗೆ ಜಂಬೂಸವಾರಿ ತಾಲೀಮು ನಾಳೆಯಿಂದ ಆರಂಭವಾಗಲಿದೆ. ಈ ಆನೆಗಳಿಗೆ ಈಗಿನಿಂದಲೇ ಪೌಷ್ಟಿಕ ಆಹಾರ ನೀಡಲಾಗುತ್ತದೆ.
ಅರ್ಜುನನ ನಂತರ 5,145 ಕೆ.ಜಿ ತೂಕ ಹೊಂದಿರುವ ಅಭಿಮನ್ಯು ಆನೆ ಎರಡನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ ಈಶ್ವರ ಆನೆ 3,995 ಕೆ.ಜಿ ತೂಕ ಹೊಂದಿದೆ.
ಗಜಪಡೆಗೆ ಹಸಿರು ಕಾಳು, ಉದ್ದಿನ ಕಾಳು, ಕುಸುಬಲ ಅಕ್ಕಿ, ಗೋಧಿ ಬೇಯಿಸಿ ಅದಕ್ಕೆ ಈರುಳ್ಳಿ, ಉಪ್ಪು ಹಾಕಿ ಬೇಯಿಸಲಾಗುತ್ತದೆ. ನಂತರ ಅದಕ್ಕೆ ತರಕಾರಿ, ತುಪ್ಪ ಹಾಕಿ ಗುಡ್ಡೆ ಮಾಡಿ ಬೆಳಿಗ್ಗೆ 6.30ರ ಸುಮಾರಿಗೆ ನೀಡಲಾಗುತ್ತದೆ. ವಿಶೇಷ ಆಹಾರದ ಜೊತೆಗೆ ಕುಸರೆಯ ಮೂಲಕ ಭತ್ತ, ಬೆಲ್ಲ, ಬೆಣ್ಣೆ ವಿವಿದ ಬಗ್ಗೆಯ ಸೊಪ್ಪು, ಕೊಬ್ಬರಿ, ತೆಂಗಿನಕಾಯಿಯನ್ನು ಪ್ರತಿದಿನ ಎರಡು ಬಾರಿ ನೀಡಲಾಗುತ್ತದೆ. ಕ್ಯಾಪ್ಟನ್ ಅರ್ಜುನನ ಆಹಾರದಲ್ಲೂ ವಿಶೇಷ ಕಾಳಜಿ ವಹಿಸಲಾಗುತ್ತದೆ. ವಿಶೇಷ ಆಹಾರದ ಜೊತೆಗೆ ಹೆಚ್ಚಿನ ಬೆಣ್ಣೆ, ಬೆಲ್ಲ, ಕೊಬ್ಬರಿ, ಕಬ್ಬು ನೀಡಿ ಬಲಶಾಲಿಯನ್ನಾಗಿ ಮಾಡಲಾಗುತ್ತದೆ. ತಾಲೀಮು ಆರಂಭಕ್ಕೂ ಮುನ್ನ ಹಾಗೂ ತಾಲೀಮು ಮುಗಿದ ನಂತರ ದಿನಕ್ಕೆ ಎರಡು ಬಾರಿ ವಿಶೇಷ ಆಹಾರವನ್ನು ಆನೆಗಳಿಗೆ ನೀಡಲಾಗುತ್ತದೆ.
ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ
"ಕಾಡಿನಲ್ಲಿದ್ದಾಗ ಕೇವಲ ಭತ್ತ, ಹುಲ್ಲು, ಸೊಪ್ಪು ತಿಂದುಕೊಂಡು ಇರುತ್ತವೆ. ಇಲ್ಲಿಗೆ ಬಂದ ಮೇಲೆ ಕಾಳನ್ನು ಬೇಯಿಸಿ ನೀಡುತ್ತೇವೆ. ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಹೀಗಾಗಿ, ತೂಕ ಹೆಚ್ಚುತ್ತದೆ" ಎಂದು ಹೇಳುತ್ತಾರೆ ಆನೆ ವೈದ್ಯ ಡಾ.ನಾಗರಾಜು.