ಇರುವುದು 69 ದಿನ ಮಾತ್ರ; ಇನ್ನೂ ಆರಂಭಗೊಂಡಿಲ್ಲ ದಸರಾಗೆ ಸಿದ್ಧತೆ
ಮೈಸೂರು, ಆಗಸ್ಟ್ 1: ರಾಜ್ಯದ ರಾಜಕೀಯ ಬೆಳವಣಿಗೆ ನಾಡಹಬ್ಬ ದಸರೆಯ ಪೂರ್ವಸಿದ್ಧತೆ ಮೇಲೂ ಪರಿಣಾಮ ಬೀರಿದಂತಿದೆ. ಇಷ್ಟು ಹೊತ್ತಿಗಾಗಲೇ ದಸರೆಗೆ ತಯಾರಿ ಆರಂಭಗೊಳ್ಳಬೇಕಿದ್ದು, ಈ ಬಾರಿ ವಿಳಂಬವಾದಂತೆ ಕಾಣುತ್ತಿದೆ.
ದಸರಾ ಮಹೋತ್ಸವಕ್ಕೆ ಬಾಕಿ ಇರುವುದು ಕೇವಲ 69 ದಿನಗಳು. ಹೀಗಿದ್ದರೂ ಮೂರು ತಿಂಗಳ ಮುಂಚೆಯೇ ಆರಂಭವಾಗಬೇಕಾಗಿದ್ದ ಸಭೆಗಳು ಹಾಗೂ ಸಿದ್ಧತಾ ಕಾರ್ಯಗಳು ಇನ್ನೂ ನಡೆದಿಲ್ಲ.
ಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗ
ಉನ್ನತ ಸಮಿತಿ ಅಧ್ಯಕ್ಷರಾಗಿರುವ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸಿದ್ಧತೆಗೆ ಸೂಚನೆ ದೊರೆತ ಬಳಿಕವೇ ದಸರಾ ಕಾರ್ಯಗಳು ಆರಂಭವಾಗಬೇಕಿದೆ. ಆದರೆ ಈ ಬಾರಿ ಜುಲೈ ಕಳೆದರೂ ಉನ್ನತಮಟ್ಟದ ಸಭೆ ನಡೆದಿಲ್ಲ. ರಾಜಕೀಯ ಬದಲಾವಣೆಗಳಿಂದಾಗಿ ಯಾವುದೇ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ದಸರಾ ಕಾರ್ಯಗಳಿಗೆ ಹಿನ್ನಡೆಯಾಗಿದೆ.
ಕಳೆದ ವರ್ಷದ ದಸರಾ ಮಹೋತ್ಸವ ಅಕ್ಟೋಬರ್ 10ರಿಂದ 19ರವರೆಗೆ ನಡೆಯಿತು. ಈ ಬಾರಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 9ರವರೆಗೆ ನಡೆಯಲಿದೆ. ಕಳೆದ ವರ್ಷಕ್ಕಿಂತ 11 ದಿನ ಮುಂಚಿತವಾಗಿಯೇ ದಸರಾ ಮಹೋತ್ಸವ ಆರಂಭವಾಗಲಿದೆ. ಹೀಗಾಗಿ ಉನ್ನತ ಮಟ್ಟದ ಸಭೆಯನ್ನು ಈಗಾಗಲೇ ಕರೆಯಬೇಕಿತ್ತು. ಆದರೆ ಒಂದು ತಿಂಗಳು ತಡವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟ ರಚನೆಯೂ ಬಾಕಿ ಇರುವುದರಿಂದ ಸಭೆ ಇನ್ನಷ್ಟು ವಿಳಂಬವಾಗುವ ಲಕ್ಷಣಗಳು ಕಂಡು ಬರುತ್ತಿವೆ.
ವಿಶ್ವವಿಖ್ಯಾತ ದಸರೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಈ ಸಂದರ್ಭ ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ದಸರೆಗೆ ಮೂರು ತಿಂಗಳ ಮುಂಚಿತವಾಗಿಯೇ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಬೇಕು. ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಗಳ ವ್ಯವಸ್ಥೆಯೂ ಇರಬೇಕು. ಜೊತೆಗೆ ವ್ಯಾಪಕ ಪ್ರಚಾರ ದೊರೆತಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ. ಆದರೆ ಈ ಸಿದ್ಧತೆಗಳೇ ಆರಂಭಗೊಂಡಿಲ್ಲವಾದ್ದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಈ ಬಾರಿ ಹಿನ್ನಡೆಯಾಗುವ ಸೂಚನೆಯಿದೆ.
ದಸರಾ ಆನೆ ದ್ರೋಣ ಸಾವಿಗೆ ಕಂಬನಿ ಮಿಡಿದ ಗಣ್ಯರು
ಉನ್ನತ ಸಭೆಯ ಕುರಿತು ಪ್ರಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, "ಅನಿವಾರ್ಯ ಕಾರಣದಿಂದ ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯನ್ನು ಈವರೆಗೆ ಆಯೋಜಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷಕ್ಕಿಂತ ಹತ್ತು ದಿನ ಮುಂಚಿತವಾಗಿ ದಸರಾ ಆಯೋಜಿಸಬೇಕಿದೆ. ಮುಖ್ಯಮಂತ್ರಿ ದಿನಾಂಕವನ್ನು ಪಡೆದು ಶೀಘ್ರವೇ ಆಯೋಜಿಸುತ್ತೇವೆ" ಎಂದರು.