ಮೈಸೂರು ದಸರಾ: ಗಜಪಡೆ ಹಾಗೂ ಅಶ್ವ ದಳಕ್ಕೆ ಪೊಲೀಸ್ ಬ್ಯಾಂಡ್ ಸಮೇತ ತಾಲೀಮು
ಮೈಸೂರು, ಅಕ್ಟೋಬರ್ 22: ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಪೊಲೀಸ್ ಬ್ಯಾಂಡ್ ಸಮೇತ ತಾಲೀಮು ನಡೆಸಲಾಯಿತು.
ಕಳೆದ ವರ್ಷ ತಾಲೀಮು ಸಂದರ್ಭ ಕುಶಾಲತೋಪು ಸಿಡಿಸುವ ವೇಳೆ ಬರುವ ಭಾರೀ ಶಬ್ಧಕ್ಕೆ ಸಾಕಷ್ಟು ಆನೆಗಳು ಬೆಚ್ಚಿದ್ದವು. ಕೊನೆ ಕೊನೆಗೆ ಶಬ್ಧಕ್ಕೆ ಹೊಂದಿಕೊಂಡಿದ್ದವು. ಈ ಬಾರಿ ಕೂಡ ಯಾವುದೇ ಆನೆಗಳು ಶಬ್ಧ ಕ್ಕೆ ಬೆಚ್ಚದೆ ಜಂಬೂಸವಾರಿಗೆ ನಾವು ತಯಾರಾಗಿದ್ದೇವೆ ಎಂಬ ಸಂದೇಶವನ್ನು ಸಾರಿವೆ.
ಜಂಬೂಸವಾರಿ ವೇಳೆ ಕುಶಾಲತೋಪು ಸಿಡಿಸುವುದು
ಅ.26ರಂದು ಜಂಬೂಸವಾರಿ ಮೆರವಣಿಗೆ ಹೊರಡುವ ಮುನ್ನ ರಾಷ್ಟ್ರಗೀತೆ ಮೊಳಗಲಿದ್ದು, ಆ ವೇಳೆ 21 ಸುತ್ತು ಕುಶಾಲತೋಪು ಸಿಡಿಸಲಾಗುವುದು. ಜಂಬೂಸವಾರಿ ವೇಳೆ ಕುಶಾಲತೋಪಿನ ಶಬ್ದಕ್ಕೆ ಆನೆಗಳು, ಕುದುರೆಗಳು ವಿಚಲಿತವಾಗದೆ ಇರಲಿ ಎಂಬ ಕಾರಣಕ್ಕೆ ಪ್ರತಿ ವರ್ಷ ಒಟ್ಟು ಮೂರು ಬಾರಿ ತಾಲೀಮು ನಡೆಸಲಾಗುತ್ತದೆ.
ಮೈಸೂರು ದಸರಾ: ಗೋಪಿ ಆನೆಗೂ ಮರದ ಅಂಬಾರಿ ಹೊರಿಸಿ ತಾಲೀಮು
ಜಂಬೂಸವಾರಿ ರಿಹರ್ಸಲ್ ಪ್ರಾರಂಭವಾಗಿದೆ
ಜಂಬೂಸವಾರಿಗೆ ಇನ್ನೂ ಕೆಲವೇ ದಿನ ಬಾಕಿ ಇದ್ದು, ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಈ ಬಾರಿ ಅರಮನೆ ಆವರಣದೊಳಗೆ ಮಾತ್ರ ಜಂಬೂಸವಾರಿ ನಡೆಯಲಿದೆ. ಅ.೨೨ ರಿಂದ ಜಂಬೂಸವಾರಿ ರಿಹರ್ಸಲ್ ಪ್ರಾರಂಭವಾಗಿದ್ದು, ಗಜಪಡೆ, ಅಶ್ವಾರೋಹಿದಳ, ಶಸ್ತ್ರಸಜ್ಜಿತ ಪೊಲೀಸರು ಏಕ ಕಾಲದಲ್ಲಿ ತಾಲೀಮು ನಡೆಸಿದರು.
ತಾಲೀಮಿನ ವೇಳೆ ಅಶ್ವಗಳು ವಿಚಲಿತಗೊಂಡಿವೆ
ಅರಮನೆ ಆವರಣದಲ್ಲಿ ತಾಲೀಮು ನಡೆದಿದ್ದು, ತಂಡಗಳು ಜಂಬೂಸವಾರಿ ದಿನ ನಡೆಯುವ ಪ್ರಕ್ರಿಯೆಗಳ ರಿಹರ್ಸಲ್ ನಡೆಸಿವೆ. ಪೊಲೀಸ್ ಬ್ಯಾಂಡ್ ಗಳಿಂದಲೂ ರಿಹರ್ಸಲ್ ನಡೆದಿದ್ದು, ತಾಲೀಮಿನ ವೇಳೆ ಅಶ್ವಗಳು ವಿಚಲಿತಗೊಂಡಿವೆ. ಅಶ್ವಾರೋಹಿ ಪಡೆಯ ಕೆಲವು ಅಶ್ವಗಳು ಅನೆಗಳನ್ನು ಕಂಡು ಗಾಬರಿಗೊಂಡಿವೆ.
ಗಜಪಡೆಯೊಂದಿಗೆ ಅಶ್ವಾರೋಹಿ ಪಡೆ
ವಿಚಲಿತಗೊಂಡ ಕುದುರೆ ಹಿಮ್ಮುಖವಾಗಿ ಚಲಿಸಿದ್ದು, ಅಶ್ವಾರೋಹಿಗಳಾದ ಪೊಲೀಸ್ ಸಿಬ್ಬಂದಿಗಳು ಕೆಲವರು ಕೆಳಗೆ ಬಿದ್ದ ಘಟನೆಯೂ ನಡೆಯಿತು. ಮೊದಲ ದಿನ ಜಂಬೂ ಸವಾರಿ ರಿಹರ್ಸಲ್ ನಲ್ಲಿ ಗಜಪಡೆಯೊಂದಿಗೆ ಅಶ್ವಾರೋಹಿ ಪಡೆಯೂ ಭಾಗಿಯಾಗಿತ್ತು. ಆದರೂ ಇಂದು ವಿಚಲಿತಗೊಂಡಿದೆ. ಇನ್ನೆರಡು ದಿನ ತಾಲೀಮು ನಡೆಸಲಾಗುತ್ತಿದ್ದು, ಸರಿ ಹೋಗಬಹುದು ಎಂದು ಪೊಲೀಸರು ಹೇಳಿದ್ದಾರೆ.