ದಸರಾ ಛಾಯಾಚಿತ್ರ ಸ್ಪರ್ಧೆ; ಅತ್ಯುತ್ತಮ ಚಿತ್ರಕ್ಕೆ ಸಿಗಲಿದೆ ಒಂದು ಲಕ್ಷ ರೂಪಾಯಿ
ಮೈಸೂರು,ಅಕ್ಟೋಬರ್ 5: ಈ ಬಾರಿ ದಸರಾದಲ್ಲಿನ ವಿಶೇಷ ಆಕರ್ಷಣೆಯಾಗಿ ದಸರಾ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.
ದಸರಾಕ್ಕೆ ಸಂಬಂಧಿಸಿದ ಅತ್ಯುತ್ತಮ ಛಾಯಾಚಿತ್ರವೊಂದಕ್ಕೆ ಪ್ರವಾಸೋದ್ಯಮ ಇಲಾಖೆ 1 ಲಕ್ಷ ರೂ.ಗಳ ಬಹುಮಾನ ನೀಡಲಿದೆ. ಯಾರು ಬೇಕಾದರೂ ದಸರಾಕ್ಕೆ ಸಂಬಂಧಿಸಿದ ಆಕರ್ಷಣೀಯ ಫೋಟೋವನ್ನು ಕಳುಹಿಸಬಹುದು. ಒಬ್ಬರು ಗರಿಷ್ಠ ಮೂರು ಫೋಟೋಗಳನ್ನು ನೀಡಬಹುದು. ತಾವೇ ತೆಗೆದ ಛಾಯಾಚಿತ್ರಗಳನ್ನು ಅ. 14ರ ಸಂಜೆ 4 ಗಂಟೆ ಒಳಗೆ ಮೈಸೂರು ಜೆಎಲ್ ಬಿ ರಸ್ತೆ, ಹೋಟೆಲ್ ಮಯೂರ ಹೊಯ್ಸಳದಲ್ಲಿನ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕು ಎಂದು ತಿಳಿಸಿದ್ದಾರೆ.
ದಸರಾಗೆ ಬರುವವರು ಚಿತ್ರ ಸಂತೆ, ಹಸಿರು ಸಂತೆಗೂ ಭೇಟಿ ನೀಡಿ...
ಉತ್ತಮ ಛಾಯಾಚಿತ್ರದ ಆಯ್ಕೆಗೆ ಸಮಿತಿಯೊಂದನ್ನು ನೇಮಿಸಲಾಗುತ್ತಿದ್ದು, ಇದರಲ್ಲಿ ಬೆಂಗಳೂರಿನ ತಜ್ಞರು ಇರಲಿದ್ದಾರೆ. ಒಂದು ಉತ್ತಮ ಫೋಟೋಗೆ ಒಂದು ಲಕ್ಷ ರೂ. ಬಹುಮಾನ ನೀಡಿದರೆ, ಉಳಿದ ಉತ್ತಮ ಚಿತ್ರಗಳನ್ನು ಪ್ರವಾಸೋದ್ಯಮ ಇಲಾಖೆ ಬಳಸಿಕೊಂಡು ಅದಕ್ಕೆ ವಿಶ್ವವ್ಯಾಪಿ ಪ್ರಚಾರ ಸಿಗುವಂತೆ ಮಾಡಲಿದೆ ಎಂದು ಅವರು ವಿವರಿಸಿದರು.
ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಬಹುದು. ಅಲ್ಲದೆ, ಅರ್ಜಿ ನಮೂನೆಯನ್ನು ಮೈಸೂರು ದಸರಾ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಛಾಯಾಚಿತ್ರದ ಕೆಳಗೆ ಶೀರ್ಷಿಕೆ ಸಹಿತ ಗರಿಷ್ಠ 50 ಪದಗಳ ವಿವರಣೆ ನೀಡಬೇಕು. ಸಿಡಿ, ಡಿವಿಡಿ ಇಲ್ಲವೇ ಪೆನ್ಡ್ರೈವ್ ನಲ್ಲಿ ನೀಡಬೇಕು. ಜೆಪಿಜಿ ಇಲ್ಲವೇ ಜೆಪಿಇಜಿ ಫಾರ್ಮೆಟ್ ನಲ್ಲಿರಬೇಕು ಎಂದು ತಿಳಿಸಿದ್ದಾರೆ.