ಮೈಸೂರಿನಲ್ಲಿ ಅಂಬಾರಿ ಸಂಚಾರಕ್ಕೆ ಅಡ್ಡಿಯಾಗಿದೆ ದೀಪಾಲಂಕಾರ
ಮೈಸೂರು, ಅಕ್ಟೋಬರ್ 21: ಕೊರೊನಾ ಸೋಂಕು ಇಲ್ಲದೇ ಎಲ್ಲವೂ ಸರಿ ಇದ್ದಿದ್ದರೆ ಈ ಬಾರಿ ಜನ ಪ್ರವಾಸೋದ್ಯಮ ಇಲಾಖೆಯ ಡಬಲ್ ಡೆಕ್ಕರ್ ಅಂಬಾರಿ ಬಸ್ನಲ್ಲಿ ಕುಳಿತು ನಗರಕ್ಕೊಂದು ಸುತ್ತು ಹೊಡೆಯುತ್ತಾ ಝಗಮಗಿಸುವ ದೀಪಾಲಂಕಾರವನ್ನು ಕಣ್ತುಂಬಿಸಿಕೊಳ್ಳಬಹುದಿತ್ತು. ಆದರೆ ಆಗಿದ್ದೇ ಬೇರೆ...
ಸರಳ ದಸರಾ ಆಚರಣೆಯಾದರೂ ದೀಪಾಲಂಕಾರ ಅದ್ಧೂರಿಯಾಗಿಯೇ ಇದೆ. ಅದನ್ನೇ ನೋಡಿ ಜನ ಖುಷಿ ಪಡುತ್ತಿದ್ದಾರೆ. ಇಂತಹ ದೀಪಾಲಂಕಾರವನ್ನು ಜನ ಬಸ್ನಲ್ಲಿ ಸಂಚರಿಸುತ್ತಾ ನೋಡಲೆಂದು ಮೈಸೂರಿಗೆ ತರಲಾಗಿರುವ ಡಬಲ್ ಡೆಕ್ಕರ್ ಅಂಬಾರಿ ಬಸ್ಗಳು ಇದೀಗ ಸಂಚರಿಸದೆ ಪ್ರವಾಸೋದ್ಯಮ ಇಲಾಖೆ ಕಚೇರಿ ಮುಂದೆ ನಿಂತಿವೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ನಗರಕ್ಕೆ ಮಾಡಿರುವ ದೀಪಾಲಂಕಾರಗಳೇ ಅಡ್ಡಿಯಾಗಿರುವ ವಿಚಾರ ಬಯಲಾಗಿದೆ.
ದೀಪಾಲಂಕಾರವೇ ಸಂಚಾರಕ್ಕೆ ಅಡ್ಡಿ
ದೀಪಾಲಂಕಾರದ ಸುಂದರ ದೃಶ್ಯಗಳನ್ನು ತೋರಿಸಲೆಂದು ಮೈಸೂರಿಗೆ ಬಂದಿಳಿದ ಅಂಬಾರಿ ಬಸ್ಗೆ ನಗರದಲ್ಲಿ ಸಂಚರಿಸಲು ದೀಪಾಲಂಕಾರವೇ ಅಡ್ಡಿಯಾಗಿದೆಯಂತೆ. ಕಾರಣ ಈ ಡಬಲ್ ಡೆಕ್ಕರ್ ಅಂಬಾರಿ ಬಸ್ ಮಾಮೂಲಿ ಬಸ್ ಗಿಂತ ಎತ್ತರವಾಗಿದೆ. ಹೀಗಾಗಿ ನಗರದಲ್ಲಿ ಸಂಚರಿಸಿದರೆ ಈಗ ಮಾಡಿರುವ ದೀಪಾಲಂಕಾರ ಬಸ್ಗೆ ತಗುಲಲಿದೆ. ಹೆಚ್ಚಿನ ಕಡೆಗಳಲ್ಲಿ ಬಸ್ನ ಎತ್ತರಕ್ಕಿಂತಲೂ ತಗ್ಗಾಗಿ ಅಲಂಕಾರ ಮಾಡಲಾಗಿದೆ. ಇದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಬೆಂಗಳೂರಿನಿಂದ ತರಿಸಲಾದ ಬಸ್ಗಳನ್ನು ಈಗ ಕಚೇರಿಯ ಆವರಣದಲ್ಲಿ ಟಾರ್ಪಲ್ ಕಟ್ಟಿ, ಮಳೆ, ಬಿಸಿಲು, ದೂಳಿನಿಂದ ಸಂರಕ್ಷಿಸಿಡುವಂತಾಗಿದೆ.
ವರ್ಷದ ಕೊನೆಯಲ್ಲಿ ಮೈಸೂರು, ಹಂಪಿಗೆ ಡಬಲ್ ಡೆಕ್ಕರ್ ಬಸ್?
ಕಳೆದ ಬಾರಿ ತೆರೆದ ಬಸ್ ವ್ಯವಸ್ಥೆ
ಮೈಸೂರು ನಗರದ ದಸರಾ ದೀಪಾಲಂಕಾರವನ್ನು ನೋಡುವ ಸಲುವಾಗಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆ ತೆರೆದ ಬಸ್ ವ್ಯವಸ್ಥೆ ಮಾಡಿತ್ತು. ಈ ಬಸ್ನಲ್ಲಿ ಕುಳಿತು ನಗರಕ್ಕೆ ಸುತ್ತು ಹೊಡೆಸಲಾಗಿತ್ತು. ಇದು ಯಶಸ್ವಿಯೂ ಆಗಿತ್ತು. ಹೀಗಾಗಿ ಈ ಬಾರಿ ಡಬಲ್ ಡೆಕ್ಕರ್ ಅಂಬಾರಿಯನ್ನು ತರಿಸಲಾಗಿತ್ತು. ಇದು ಓಡಾಡುವ ಮಾರ್ಗದಲ್ಲಿದ್ದ ಬಾಗಿಕೊಂಡಿದ್ದ ಮರಗಳ ಕೊಂಬೆಯನ್ನು ಕತ್ತರಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ದೀಪಾಲಂಕಾರ ಮಾಡುವ ವೇಳೆ ಅಂಬಾರಿ ಬಸ್ ಬಗ್ಗೆ ಮಾಹಿತಿ ನೀಡದ್ದರಿಂದ ಇವತ್ತು ಅಂಬಾರಿ ನಗರಕ್ಕೆ ಬಂದರೂ ಸಂಚರಿಸಲು ಸಾಧ್ಯವಾಗದೆ ನಿಲ್ಲುವಂತಾಗಿದೆ.
ದೀಪಾಲಂಕಾರ ಬಸ್ಗೆ ತಗಲುವ ಭಯ
ಅಂಬಾರಿ ಬಸ್ ಎತ್ತರವೇ ಸುಮಾರು ಇಪ್ಪತೈದು ಅಡಿಯಷ್ಟಿದೆ. ಇನ್ನು ಬಸ್ ಸಂಚರಿಸಲು ಸೂಚಿತವಾಗಿರುವ ಮಾರ್ಗಗಳಲ್ಲಿ, ದಸರಾ ದೀಪಾಲಂಕಾರ ಬಸ್ನಲ್ಲಿ ಪ್ರಯಾಣಿಸುವವರಿಗೆ ಅಪಾಯ ತರುವಂತಹ ಎತ್ತರದಲ್ಲಿದೆ. ಒಂದು ವೇಳೆ ಅಂಬಾರಿ ಬಸ್ನ ಮೇಲಿನ ಮಹಡಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ನಿಂತುಕೊಂಡೇ ನಗರದ ಸುತ್ತಲಿನ ಸೊಬಗನ್ನು ನೋಡಲು ಬಯಸಿದರೆ ಅದರಿಂದ ಸಮಸ್ಯೆಯಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಅಂಬಾರಿ ಸಂಚಾರ ನಿಲ್ಲಿಸಲಾಗಿದೆ ಎಂಬುದು ಅಧಿಕಾರಿಗಳು ನೀಡುತ್ತಿರುವ ಸಮಜಾಯಿಷಿ.
ದಸರೆ ಹಿನ್ನೆಲೆ : ಕೆಎಸ್ ಆರ್ ಟಿ ಸಿಯಿಂದ ನೂತನ ಬಸ್ ವ್ಯವಸ್ಥೆ
ನಲವತ್ತು ಆಸನಗಳ ಡಬಲ್ ಡೆಕ್ಕರ್ ಬಸ್
ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ಈ ಬಸ್ ಅನ್ನು ತಯಾರು ಮಾಡಿದ್ದು, ಮೇಲೆ ಮತ್ತು ಕೆಳಗೆ ಸೇರಿ ನಲವತ್ತು ಆಸನಗಳಿವೆ. ಇನ್ನು ಬಸ್ ಸಂಚರಿಸುವ ವೇಳೆ ಆಯಾಯ ಸ್ಥಳಗಳು ಬಂದಾಗ ಅದರ ಪರಿಚಯ ಬಸ್ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಮಾಡಿಕೊಡಲಾಗುತ್ತದೆ. ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾನಿಯಂತ್ರಿತವಾಗಿದ್ದು, ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ.
ದೀಪಾಲಂಕಾರದಿಂದಾಗಿ ನಗರದಲ್ಲಿ ಸಂಚರಿಸಲು ಬಸ್ಗಳಿಗೆ ಸಾಧ್ಯವಿಲ್ಲವಾದರೂ ದಸರಾ ಕಳೆದ ಬಳಿಕ ಬಸ್ಗಳು ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಿವೆ ಎಂದು ಹೇಳಲಾಗುತ್ತಿದೆ. ಆದರೆ ನವರಾತ್ರಿ ಸಂಭ್ರಮದಲ್ಲಿ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳಬೇಕೆಂದುಕೊಂಡವರಿಗೆ ಈ ಬಾರಿ ನಿರಾಸೆಯಾಗಿದ್ದಂತೂ ನಿಜ.