ದಸರಾ ಕ್ರೀಡೆಗೆ ಹೊಸ ಸ್ವರೂಪ: ವಿಭಿನ್ನವಾಗಿ ನಡೆಸಲು ಭರ್ಜರಿ ತಯಾರಿ
ಮೈಸೂರು, ಸೆಪ್ಟೆಂಬರ್.6: ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ದಸರಾ ಉತ್ಸವದ ಆಕರ್ಷಣೆಯಲ್ಲೊಂದು ಕ್ರೀಡೆ. ಆದ್ದರಿಂದ ದಸರಾ ಕ್ರೀಡಾಕೂಟವನ್ನು ಕಳೆದ ಬಾರಿಗಿಂತ ಸ್ವಲ್ಪ ಭಿನ್ನ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಇದೇ ಮೊದಲ ಬಾರಿಗೆ ದಸರಾ ಅಥ್ಲೆಟಿಕ್ಸ್ ನಲ್ಲಿ ವಿವಿಧ ವಯೋವರ್ಗಗಳಲ್ಲಿ ಸ್ಪರ್ಧೆಗಳನ್ನು ನಡೆಸುವ ಚಿಂತನೆ ನಡೆಸಿದ್ದು, ಕ್ರೀಡಾ ಇಲಾಖೆಯು ಈ ಕುರಿತ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆನೆಗಳ ದಿನಚರಿ ಹೇಗಿದೆ ನೋಡಿ...
ದಸರಾ ಉತ್ಸವ ವರ್ಷದಿಂದ ವರ್ಷಕ್ಕೆ ಹೊಸತನ ಮೈಗೂಡಿಸಿಕೊಂಡು ಬರುತ್ತಿದೆಯಾದರೂ, ದಸರಾ ಕ್ರೀಡಾಕೂಟ ಮಾತ್ರ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬ ಟೀಕೆಗಳು ಇವೆ. ಆದ್ದರಿಂದ ದಸರಾ ಕ್ರೀಡೆಗೆ ಹೊಸ ಸ್ವರೂಪ ನೀಡಲು ಗಂಭೀರ ಪ್ರಯತ್ನ ನಡೆಯುತ್ತಿದೆ.
ದಸರಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವವರಿಗೆ ಸೂಕ್ತ ಮಾನ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ನಗರದಲ್ಲಿ ನಡೆದಿದ್ದ ಸಭೆಯಲ್ಲಿ ಹೇಳಿದ್ದರು.
ಎಲ್ಲವೂ ಅಂದುಕೊಂಡಂತೆ ಆದರೆ, ಈ ಬಾರಿ 14 ವರ್ಷ ವಯಸ್ಸಿನೊಳಗಿನವರು, 16 ವರ್ಷ ವಯಸ್ಸಿನೊಳಗಿನವರು ಮತ್ತು ಮುಕ್ತ ವಿಭಾಗಗಳಲ್ಲಿ (ಪುರುಷರು ಮತ್ತು ಮಹಿಳೆಯರು) ಸ್ಪರ್ಧೆಗಳು ನಡೆಯಲಿವೆ.
ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!
ವಿವಿಧ ವಯೋವರ್ಗಗಳಲ್ಲಿ ಸ್ಪರ್ಧೆ ಆಯೋಜಿಸಬೇಕು ಎಂಬ ಪ್ರಸ್ತಾವ ಪರಿಶೀಲನೆಯಲ್ಲಿದೆ. ಕ್ರೀಡಾ ಇಲಾಖೆ ಈ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ತಿಳಿಸಿದರು.
ಮೈಸೂರಿನಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸುವ ರೀತಿಯಲ್ಲೇ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಆಯೋಜನೆಗೆ ಚಿಂತನೆ ಇದೆ ಎಂದು ಅವರು ಹೇಳಿದರು.
ಮಕ್ಕಳಿಗೆ ಇರಲಿಲ್ಲ ಸ್ಪರ್ಧೆಗಳು
ಈಗ ಅಥ್ಲೆಟಿಕ್ಸ್ ಮತ್ತು ಇತರ ಕ್ರೀಡೆಗಳಲ್ಲಿ ಕೇವಲ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ 18 ವರ್ಷಕ್ಕಿಂತ ಮೇಲಿನವರಿಗೆ ಮಾತ್ರ ಸ್ಪರ್ಧಿಸುವ ಅವಕಾಶವಿತ್ತು.
ದಸರಾದಂಥ ರಾಜ್ಯಮಟ್ಟದ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಮಕ್ಕಳಿಗೆ ಇರಲಿಲ್ಲ. ವಿವಿಧ ವಯೋವರ್ಗಗಳಲ್ಲಿ ಸ್ಪರ್ಧೆ ಆಯೋಜಿಸಿದರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ಭಾಗವಹಿಸಲು ಸಾಧ್ಯವಾಗಲಿದೆ.]
ಮೊತ್ತದಲ್ಲಿ ಹೆಚ್ಚಳ
ದಸರಾ ಕೂಟದಲ್ಲಿ ಈ ಬಾರಿ ಗೆದ್ದವರಿಗೆ ನೀಡುವ ಬಹುಮಾನ ಮೊತ್ತದಲ್ಲಿ ಹೆಚ್ಚಳವಾಗಲಿದೆ. ವೈಯಕ್ತಿಕ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದವರಿಗೆ ಕಳೆದ ದಸರಾದಲ್ಲಿ ಕ್ರಮವಾಗಿ 5 ಸಾವಿರ, 3 ಸಾವಿರ ಮತ್ತು 2 ಸಾವಿರ ಬಹುಮಾನ ನೀಡಲಾಗಿತ್ತು. ಈ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಸುರೇಶ್ ಹೇಳಿದರು.
ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ
ಪ್ರಮಾಣಪತ್ರಗಳಿಗೆ ಮಾನ್ಯತೆ
ಈ ವರ್ಷದಿಂದ ದಸರಾ ಕ್ರೀಡಾಕೂಟವನ್ನು ದಸರಾ-ಸಿ.ಎಂ.ಕಪ್ ಹೆಸರಿನಲ್ಲಿ ಆಯೋಜಿಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಬಜೆಟ್ ನಲ್ಲಿ ಕ್ರೀಡಾಕೂಟಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿತ್ತು. ದಸರಾ ಕ್ರೀಡಾಕೂಟದಲ್ಲಿ ಪಡೆದ ಪ್ರಮಾಣಪತ್ರಗಳಿಗೆ ಮಾನ್ಯತೆಯಿರಲಿಲ್ಲ.
ಇನ್ನು ಮುಂದೆ ಪ್ರಮಾಣಪತ್ರಗಳಿಗೆ ಮಾನ್ಯತೆ ದೊರೆಯಲಿದ್ದು, ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕ್ರೀಡಾಪಟುಗಳಿಗೆ ನೆರವಾಗಲಿದೆ.
ಹೊರರಾಜ್ಯದ ತಂಡಗಳಿಗೆ ಆಹ್ವಾನ
2016 ಹಾಗೂ 2017ರ ದಸರಾದಲ್ಲಿ ರಾಷ್ಟ್ರಮಟ್ಟದ ಯಾವುದೇ ಟೂರ್ನಿ ಆಯೋಜನೆಯಾಗಿರಲಿಲ್ಲ. ಕುಸ್ತಿಯಲ್ಲಿ ಮಾತ್ರ ಹೊರರಾಜ್ಯಗಳ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಇತರ ಕ್ರೀಡೆಗಳಲ್ಲಿ ಬೇರೆ ರಾಜ್ಯಗಳ ಸ್ಪರ್ಧಿಗಳಿಗೆ ಅವಕಾಶವಿರಲಿಲ್ಲ.
ಈ ವರ್ಷ ಕೆಲವೊಂದು ಕ್ರೀಡೆಗಳಿಗೆ ಹೊರರಾಜ್ಯಗಳ ತಂಡಗಳನ್ನು ಆಹ್ವಾನಿಸುವ ಚಿಂತನೆ ನಡೆದಿದೆ. ಯಾವೆಲ್ಲಾ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದ ಟೂರ್ನಿ ಆಯೋಜನೆಯಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಸುರೇಶ್ ತಿಳಿಸಿದರು. ಈ ಯೋಜನೆಯಿಂದಾಗಿ ನಾಡಹಬ್ಬ ಮೈಸೂರು ಮತ್ತಷ್ಟು ಕಳೆಗಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ.