ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?
ಮೈಸೂರು, ಸೆಪ್ಟೆಂಬರ್.23 : ದಸರಾ ವಸ್ತು ಪದರ್ಶನದಲ್ಲಿ ಗುತ್ತಿಗೆ ತೆಗೆದುಕೊಳ್ಳುವುದಕ್ಕೆ ಟೆಂಡರ್ ದಾರರು ಮುಂದಾಗದಿದ್ದಲ್ಲಿ ಎಲ್ಲ ವ್ಯವಸ್ಥೆಗಳನ್ನೂ ವಸ್ತು ಪ್ರದರ್ಶನ ಪ್ರಾಧಿಕಾರವೇ ನಿರ್ವಹಿಸಲಿದೆ. ಇದರಿಂದ ಕಡಿಮೆ ಹಣದಲ್ಲಿ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ನೀಡಬಹುದು. ಲಾಭ, ನಷ್ಟಕ್ಕಿಂತ ಹೆಚ್ಚಾಗಿ ವಸ್ತು ಪ್ರದರ್ಶನ ಎಲ್ಲರಿಗೂ ತಲುಪಬೇಕು ಎಂಬುದು ನಮ್ಮ ಉದ್ದೇಶ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಟೆಂಡರ್ ಎಂಬ ಮಾಯಾಂಗನೆಯಿಂದಾಗಿ ಪ್ರಾಧಿಕಾರವು ಹಲ್ಲು ಕಿತ್ತ ಹಾವಾಗಿತ್ತು. ಬಡವರು, ಹಿಂದುಳಿದ ವರ್ಗದವರು, ಮಹಿಳಾ ಉದ್ಯಮಿಗಳಿಗೆ ವಸ್ತು ಪ್ರದರ್ಶನ ಎಂಬುದು ಅಕ್ಷರಶಃ ಮುಚ್ಚಿದ ಬಾಗಿಲಿನಂತಾಗಿತ್ತು.
ಇದೀಗ ಸಚಿವ ಸಾ.ರಾ.ಮಹೇಶ್ ಅವರ ಹೇಳಿಕೆಯಿಂದಾಗಿ ಬಡ ವ್ಯಾಪಾರಸ್ಥರು ತಮ್ಮ ವಸ್ತುಗಳ ಮಾರಾಟಕ್ಕಾಗಿ ಮತ್ತೆ ಪ್ರಾಧಿಕಾರದತ್ತ ಮುಖ ಮಾಡಬಹುದಾಗಿದೆ. ಕಳೆದ ಬಾರಿ ಬೆಂಗಳೂರಿನ ಫನ್ ವರ್ಲ್ಡ್ ರೆಸಾರ್ಟ್ ಇಂಡಿಯಾ ಸಂಸ್ಥೆ ಟೆಂಡರ್ ಪಡೆದುಕೊಂಡಿತ್ತು.
ದಸರಾ ವಸ್ತು ಪ್ರದರ್ಶನದ ಟೆಂಡರ್ ಕಥೆ ಅಧೋಗತಿ !
ಆದರೆ, ಆಗ ಸುರಿದ ಧಾರಾಕಾರ ಮಳೆಯಿಂದಾಗಿ ಟೆಂಡರ್ ದಾರರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು ಎಂಬುದು ಕೆಲವರ ವಾದ. ಹೀಗಾಗಿ ಈ ಬಾರಿ ಟೆಂಡರ್ ವಹಿಸಿಕೊಳ್ಳಲು ಯಾರೂ ಮುಂದಾಗಿಲ್ಲ. ಆದ್ದರಿಂದ ಮರು ಟೆಂಡರ್ ಗೆ ಅರ್ಜಿ ಕರೆಯಲಾಗಿದೆ.
ಇದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಬೇಸರತರಿಸಿದೆ. ವಸ್ತು ಪ್ರದರ್ಶನದಲ್ಲಿ ಈ ಹಿಂದೆ ಪ್ರವೇಶ ಶುಲ್ಕ ಸೇರಿದಂತೆ ಎಲ್ಲವನ್ನೂ ಪಾಧಿಕಾರವೇ ನಿರ್ವಹಿಸುತ್ತಿತ್ತು. ಆಗ ಕೂಡ ಯಾವುದೇ ನಷ್ಟವಾಗಿರಲಿಲ್ಲ.
ವಸ್ತು ಪ್ರದರ್ಶನದ ಆವರಣದಲ್ಲಿ ನ್ಯಾಯಯುತವಾಗಿ ಜನರಿಗೆ ಸಾಮಾನ್ಯ ದರದಲ್ಲಿ ವಸ್ತುಗಳು ಸಿಗಬೇಕು. ಹೀಗಾಗಿ ಟೆಂಡರ್ ವಹಿಸಿಕೊಳ್ಳಲು ಯಾರೂ ಮುಂದಾಗದಿದ್ದಲ್ಲಿ ಪ್ರಾಧಿಕಾರದಿಂದಲೇ ಎಲ್ಲವನ್ನೂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು.
ಟೆಂಡರ್ ಪ್ರಕ್ರಿಯೆ ಆರಂಭವಾದದ್ದು ಹೀಗೆ ...
ಕಳೆದ 14 ವರ್ಷಗಳ ಹಿಂದಿನ ಮಾತು. ವಸ್ತು ಪ್ರದರ್ಶನ ಆವರಣದಲ್ಲಿ ದೇಶದ ವಿವಿಧ ಭಾಗಗಳ ಬಟ್ಟೆ, ಗೃಹೋಪಯೋಗಿ ವಸ್ತುಗಳು, ಆಹಾರ, ಹೀಗೆ ತರಹೇವಾರಿ ವಸ್ತುಗಳು ಜನರಿಗೆ ಕಡಿಮೆ ಬೆಲೆಯಲ್ಲಿ ದೊರಕುತ್ತಿದ್ದವು. ಕಾರಣ, ಪ್ರಾಧಿಕಾರದ ಆವರಣದಲ್ಲಿನ ಮಳಿಗೆಗಳು ವ್ಯಾಪಾರಸ್ಥರಿಗೆ ಕಡಿಮೆ ಬಾಡಿಗೆ ದರದಲ್ಲಿ ದೊರಕುತ್ತಿದ್ದವು.
ಹೀಗಾಗಿ ವಸ್ತುಗಳ ಬೆಲೆ ಕೂಡ ಕೈಗೆಟಕುವಂತಿತ್ತು. ನಂತರದ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಯಿತು. ಹೀಗಾಗಿ ಪ್ರಾಧಿಕಾರದ ವತಿಯಿಂದ ಯಾರೊಬ್ಬರಿಗೂ ಕಡಿಮೆ ದರದಲ್ಲಿ ಮಳಿಗೆಗಳು ಸಿಗದಂತಾದವು.
ವಸ್ತುಪ್ರದರ್ಶನದಲ್ಲಿ ದೊರಕುವ ವಸ್ತುಗಳು, ಅದೇ ದರದಲ್ಲಿ ನಗರದ ವ್ಯಾಪಾರಸ್ಥರಿಂದಲೂ ದೊರಕಲಾರಂಭಿಸಿದವು. ವಿಶೇಷವೆಂದರೆ, ಕೆಲವೊಂದು ವಸ್ತುಗಳು ಹೊರಗಿನ ವ್ಯಾಪಾರಸ್ಥರಲ್ಲೇ ಕಡಿಮೆ ಬೆಲೆಗೆ ದೊರಕುತ್ತಿದ್ದವು. ಇದರಿಂದ ಹೊರ ರಾಜ್ಯಗಳಿಂದ ಬಂದ ವ್ಯಾಪಾರಸ್ಥರು ಹೆಚ್ಚಿನ ಲಾಭವಿಲ್ಲದೆ, ಬೇಸರದಿಂದಲೇ ತೆರಳುವಂತಾಗುತ್ತಿತ್ತು.
ಗಜಪಡೆಗಳ ರಿಂಗ್ ಮಾಸ್ಟರ್ ಮಾವುತರದು ಹೀನಾಯ ಬದುಕು
ಉಚಿತ ಮಳಿಗೆಗಳು
ಸರ್ಕಾರಗಳು ಉದ್ಯಮಿಗಳಿಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಬಹುದು. ಆದರೆ, ವಸ್ತು ಪ್ರದರ್ಶನ ಆವರಣದ ಮೂಲಕ ಅವುಗಳಿಗೆ ಮಾರುಕಟ್ಟೆಯ ಸೌಲಭ್ಯವನ್ನು ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಅಂದು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಆರ್.ರಘು ಅವರು, ಪ್ರಾಧಿಕಾರದ ಆವರಣದಲ್ಲಿ ಉಚಿತವಾಗಿ ಮಳಿಗೆಗಳನ್ನು ನೀಡುವ ಮೂಲಕ ಮೈಸೂರು ಭಾಗದಲ್ಲಿ ತಯಾರಾಗುವ ವಸ್ತುಗಳನ್ನು ಜನರಿಗೆ ಪರಿಚಯವಾಗುವಂತೆ ಮಾಡಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆನೆಗಳ ದಿನಚರಿ ಹೇಗಿದೆ ನೋಡಿ..
ಮಹಿಳೆಯರಿಗೂ ಆಸರೆಯಾಗಿತ್ತು
ವಸ್ತು ಪ್ರದರ್ಶನದ ಮೂಲಕ ಮಹಿಳೆಯರೂ ಕೂಡ ತಾವು ತಯಾರಿಸಿದ ವಸ್ತುಗಳನ್ನು ಜನರಿಗೆ ತಲುಪಿಸಲಿ ಎಂಬ ಉದ್ದೇಶದಿಂದ ಅವರಿಗೆ ಅತ್ಯಂತ ಕಡಿಮೆ ದರದಲ್ಲಿ, ಕೆಲವೊಮ್ಮೆ ಉಚಿತವಾಗಿ ಮಳಿಗೆಗಳನ್ನು ನೀಡುವ ಮೂಲಕ ಆಸರೆಯಾಗಿದ್ದರು. ಟೆಂಡರ್ ಪ್ರಕ್ರಿಯೆ ಆರಂಭವಾದ ನಂತರ ಅದಕ್ಕೆ ಕೂಡ ತಿಲಾಂಜಲಿ ಇಡಲಾಯಿತು.
ಕಡಿಮೆ ಬೆಲೆಯಲ್ಲಿ ದೊರಕಬಹುದೇ?
ಇದೀಗ ಸಾ.ರಾ.ಮಹೇಶ್ ಅವರ ಹೇಳಿಕೆಯಿಂದಾಗಿ ವಸ್ತು ಪ್ರದರ್ಶನ ಆವರಣ ಮತ್ತೆ ತನ್ನ ಗತ ವೈಭವವನ್ನು ಜನರ ಮುಂದೆ ಅನಾವರಣಗೊಳಿಸಿಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ. ವಸ್ತು ಪ್ರದರ್ಶನದಲ್ಲಿ ನಾನಾ ರಾಜ್ಯಗಳ ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕಬಹುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.