Mysuru Dasara 2022: ದಸರಾ ಮಹೋತ್ಸವ: ಅರಮನೆ ಪ್ರವೇಶಿಸಿದ ಗಜಪಡೆ
ಮೈಸೂರು, ಆಗಸ್ಟ್ 10: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗಾಗಿ ಮೈಸೂರಿಗೆ ಕರೆತರಲಾಗಿರುವ ಅಂಬಾರಿ ಆನೆಗಳಿಗೆ ಅರಣ್ಯಭವನದಲ್ಲಿ ಸಾಂಪ್ರದಾಯಿಕ ಪೂಜೆ ಮಾಡಿ ಅರಮನೆ ಆವರಣಕ್ಕೆ ಬುಧವಾರ ಬರಮಾಡಿಕೊಳ್ಳಲಾಗಿದೆ.
ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡದ ಗಜಪಡೆಯನ್ನು ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಆವರಣಕ್ಕೆ ಬುಧವಾರ ಬರಮಾಡಿಕೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳಿಗೆ ಕಬ್ಬು, ಬೆಲ್ಲ ವಿತರಿಸಿ ಆನೆಗಳಿಗೆ ಸ್ವಾಗತ ಕೋರಿದರು.
ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು.
ಜಿಲ್ಲಾಡಳಿತ, ಅರಮನೆ ಮಂಡಳಿ ಕಡೆಯಿಂದ ಸಡಗರ, ಸಂಭ್ರಮದ ವಾತಾವರಣದಲ್ಲಿ ಆನೆಗಳನ್ನು ಬರಮಾಡಿಕೊಳ್ಳಲಾಯಿತು. ನಗರದ ಅರಣ್ಯ ಭವನದಿಂದ 6.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಆನೆಗಳ ಪಾದ ತೊಳೆದು ಪಾದಪೂಜೆ,ಷೋಡಶೋಪಚಾರ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳಿಗೆ ಇಷ್ಟವಾದ ಪಂಚಫಲಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. 7.30ಕ್ಕೆ ಅಧಿಕಾರಿಗಳು ಆಗಮಿಸಿದ ನಂತರ ಮತ್ತೊಮ್ಮೆ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳು ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಹೊರಟಿತು.
ಅರಮನೆ ಆವರಣಕ್ಕೆ ಬೆಳಗ್ಗೆ 9.10ಕ್ಕೆ ಬಂದ ಗಜಪಡೆಗೆ ಅರ್ಚಕ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಿದರು. ಗಜಪಡೆಯನ್ನು ಅರಮನೆ ಆವರಣಕ್ಕೆ ಸ್ವಾಗತಿಸುವ ಮುನ್ನ ಪೊಲೀಸ್ ತಂಡದಿಂದ ಗೌರವ ವಂದನೆ ಸಲ್ಲಿಸಲಾಯಿತು. ನಂತರ ನಾದಸ್ವರ, ಪೂರ್ಣಕುಂಭ ಸ್ವಾಗತದೊಂದಿಗೆ ಗಜಪಡೆಯನ್ನು ಬರ ಮಾಡಿಕೊಳ್ಳಲಾಯಿತು.
ದಸರಾ ಮಹೋತ್ಸವದ ಜಂಬೂಸವಾರಿಗೆ ಆನೆಗಳ ಪಟ್ಟಿ ಕೂಡ ಅಂತಿಮಗೊಂಡಿದೆ. ಜಂಬೂ ಸವಾರಿಯಲ್ಲಿ ಅಭಿಮನ್ಯು ನೇತೃತ್ವವಹಿಸಲಿದೆ, 4 ಹೆಣ್ಣಾನೆಗಳು ಸೇರಿದಂತೆ 14 ಅನೆಗಳ ಪಟ್ಟಿ ಅಂತಿಮಗೊಂಡಿದೆ. ಮತ್ತಿಗೋಡು ಆನೆ ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷ ಭೀಮ, 38 ವರ್ಷದ ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ ದಸರಾದಲ್ಲಿ ಪಾಲ್ಗೊಳ್ಳಲಿವೆ.
ದುಬಾರೆ ಆನೆ ಶಿಬಿರದಿಂದ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ, 63 ವರ್ಷದ ವಿಜಯ ಆನೆ, ರಾಮಾಪುರ ಆನೆ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ, 18 ವರ್ಷದ ಪಾರ್ಥಸಾರಥಿ ಆನೆಗಳು ಮೈಸೂರಿಗೆ ಆಗಮಿಸಿವೆ.
Recommended Video