ಮೈಸೂರು ದಸರಾ: ಚಾಮುಂಡೇಶ್ವರಿದೇವಿ ಮೂರ್ತಿ ಅರಮನೆಗೆ ಆಗಮನ
ಮೈಸೂರು, ಅಕ್ಟೋಬರ್ 26: ಜಂಬೂಸವಾರಿಯ ಉತ್ಸವ ಮೂರ್ತಿ ತಾಯಿ ಚಾಮುಂಡೇಶ್ವರಿಯನ್ನು ವಿಶೇಷ ವಾಹನದಲ್ಲಿ ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಿಂದ ಮೆರವಣಿಗೆಯ ಮೂಲಕ ಮೈಸೂರು ಅರಮನೆಗೆ ಕರೆತರಲಾಯಿತು.
ಚಾಮುಂಡಿಬೆಟ್ಟದಲ್ಲಿ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಅವರು ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ನಂತರ ಅಂಬಾವಿಲಾಸ ಅರಮನೆಯತ್ತ ವಿಶೇಷ ವಾಹನದಲ್ಲಿ ತರಲಾಯಿತು. ಅರಮನೆಯಲ್ಲಿ ವಿಶೇಷ ಪೂಜೆ ನಂತರ ಚಿನ್ನದ ಅಂಬಾರಿಯಲ್ಲಿ ನಾಡದೇವಿಯ ಪ್ರತಿಷ್ಠಾಪನೆ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆಯಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ
ಪೂಜೆಯ ಬಳಿಕ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಗಜಪಡೆಯ ನಾಯಕ ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ಕುಳ್ಳಿರಿಸಲಾಗುವುದು. ಬಳಿಕ ನಾಡ ದೇವಿ ವಿಜೃಂಭಣೆಯಿಂದ ಜಂಬೂಸವಾರಿಯ ಅಂಬಾರಿಯಲ್ಲಿ ಮೆರವಣಿಗೆ ಸಾಗಲಿದ್ದಾಳೆ.
ಪ್ರತಿವರ್ಷವೂ ಜಂಬೂ ಸವಾರಿ ಮೆರವಣಿಗೆ ನೋಡಲು ಲಕ್ಷಾಂತರ ಜನರು ಬರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಯಾರಿಗೂ ಅವಕಾಶವಿಲ್ಲದ ಕಾರಣ, ತಮ್ಮ ತಮ್ಮ ಮನೆಗಳಲ್ಲಿಯೇ ದೂರದರ್ಶನದಲ್ಲಿ ಪ್ರಸಾರವಾಗುವ ನೇರ ಕಾರ್ಯಕ್ರಮದ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ.
ಅಂಬಾರಿ, ಗಾದಿ, ನಮ್ದಾ, ಮಾವುತ ಎಲ್ಲವೂ ಸೇರಿದರೆ ಸುಮಾರು ಸಾವಿರ ಕೆ.ಜಿ ತೂಕವನ್ನು ಅಭಿಮನ್ಯು ಹೊತ್ತು ಮೆರವಣಿಗೆಯಲ್ಲಿ ಸಾಗಬೇಕಾಗಿದೆ.
ಈ ಬಾರಿ ಸುಮಾರು ಮೂವತ್ತು ನಿಮಿಷದಷ್ಟು ಮಾತ್ರ ಜಂಬೂಸವಾರಿ ಮೆರವಣಿಗೆ ಸಾಗಲಿರುವುದರಿಂದ ಅಭಿಮನ್ಯುಗೆ ಹೆಚ್ಚಿನ ಶ್ರಮ ಇರುವುದಿಲ್ಲ. ಸದ್ಯ ಮೊದಲ ಬಾರಿಗೆ ಅಭಿಮನ್ಯು ಅಂಬಾರಿ ಹೊರುತ್ತಿದ್ದು, ಆ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಜನ ಕಾಯುತ್ತಿದ್ದಾರೆ.