ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ
ಮೈಸೂರು, ಅಕ್ಟೋಬರ್ 25: ಮೈಸೂರು ಒಡೆಯರ್ ರಾಜಮನೆತನದಿಂದ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಲಾಯಿತು.
ಮೈಸೂರು ರಾಜವಂಶಸ್ಥ, ಯದುವಂಶದ ಮಹಾರಾಜ ಯದುವೀರ್ ಒಡೆಯರ್ರಿಂದ ಆಯುಧ ಪೂಜಾ ಕೈಂಕರ್ಯ, ಅರಮನೆಯ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಸವಾರಿತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ನೆರವೇರಿಸಲಾಯಿತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರಳವಾಗಿ ಆಯುಧ ಪೂಜೆ ನೆರವೇರಿಸಿ, ಆನೆ ಬಾಗಿಲು ಬಳಿಬಂದ ನಿಂತ ಪಟ್ಟದ ಆನೆ, ಕುದುರೆ, ಒಂಟೆಗಳನ್ನು ಬೆಳಿಗ್ಗೆ 10.50 ರಿಂದ 11.15 ಶುಭ ಲಗ್ನದಲ್ಲಿ ಆಯುಧ ಪೂಜೆ ನೆರವೇರಿಸಿದರು. ಯದುವೀರ್ ಒಡೆಯರ್ ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡಿ, ನಂತರ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿಸಿದರು.
ಪಟ್ಟದ ಆನೆ, ಕುದುರೆ, ಹಸು, ಒಂಟೆಗೆ ಪೂಜೆ ಸಲ್ಲಿಸಿದ ನಂತರ ರಾಜವಂಶಸ್ಥರು ಬಳಸುವ ವಾಹನಗಳಿಗೆ ಪೂಜೆ ಮಾಡಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಆಯುಧ ಪೂಜೆಯಲ್ಲಿ 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 ಮಂದಿ ಭಾಗವಹಿಸಿದ್ದರು.
ಮೈಸೂರು ಅರಮನೆಯಲ್ಲಿ ಪೊಲೀಸ್ ಇಲಾಖೆಯಿಂದ ಫಿರಂಗಿ ಗಾಡಿಗಳಿಗೆ ಪೂಜೆ ನೆರವೇರಿಸಲಾಯಿತು. ಅರಮನೆಯ ಆನೆ ಬಾಗಿಲು ದ್ವಾರದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಮಾಡಲಾಯಿತು.