ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ
ಮೈಸೂರು, ಸೆಪ್ಟೆಂಬರ್ 09; ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿಯೂ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಸಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತದೆ. ಅಕ್ಟೋಬರ್ 7ರಂದು 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ಈ ಬಾರಿಯ ದಸರಾಕ್ಕೆ ಚಾಲನೆ ನೀಡಲಾಗುತ್ತದೆ.
ಅಕ್ಟೋಬರ್ 15ರಂದು ವಿಜಯದಶಮಿ ಜಂಬೂ ಸವಾರಿ ನಡೆಯಲಿದೆ. 4.36 ರಿಂದ 4.46ರ ನಡುವೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. 5 ರಿಂದ 5.30ರ ಸಮಯದಲ್ಲಿ ಅರಮನೆ ಆವರಣದಲ್ಲಿ ಜಂಬೂ ಸವಾರಿ ನಡೆಯಲಿದೆ. 8 ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ.
ಮೈಸೂರು ದಸರಾ- 2021ರ ಉದ್ಘಾಟನೆ ಹಾಗೂ ಕಾರ್ಯಕ್ರಮಗಳ ಪಟ್ಟಿ
ಸೆಪ್ಟೆಂಬರ್ 13ರಂದು ಸಂಪ್ರದಾಯಿಕವಾಗಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಹುಣಸೂರಿನಿಂದ ಹೊರಡುವ ಆನೆಗಳು ಸೆಪ್ಟೆಂಬರ್ 16ರಂದು ಮೈಸೂರು ನಗರಕ್ಕೆ ಆಗಮಿಸಲಿವೆ. ಅರಮನೆ ಆವರಣದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುತ್ತದೆ.
ಮೈಸೂರು ದಸರಾ ಸಂಭ್ರಮಕ್ಕೆ ತಣ್ಣೀರೆರಚಿದ ಕೊರೊನಾ!
ಈ ಬಾರಿಯ ದಸರಾವನ್ನು ಯಾರು ಉದ್ಘಾಟನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನಿಸಲಿದ್ದಾರೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಸರಾದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ವಿವರಗಳು ಇಲ್ಲಿವೆ....
ಮೈಸೂರು ದಸರಾ 2021; ಜಂಬೂ ಸವಾರಿಗೆ ಆನೆಗಳ ಆಯ್ಕೆ
ಅಂಬಾರಿ ಹೊರಲಿದ್ದಾನೆ ಅಭಿಮನ್ಯು
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು 56 ವರ್ಷದ ಅಭಿಮನ್ಯು ಹೊರಲಿದ್ದಾನೆ. ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್. ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದ ಆನೆಗೆ ಅಭಿಮನ್ಯು ಎಂದು ನಾಮಕರಣ ಮಾಡಲಾಗಿದೆ. 2012ರಿಂದ ಅಭಿಮನ್ಯು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 2015ರ ತನಕ ಕರ್ನಾಟಕ ವಾದ್ಯ ಗೋಷ್ಠಿಯವರು ಕುಳಿತುಕೊಳ್ಳುವ ಗಾಡಿ ಎಳೆಯುತ್ತಿತ್ತು. ಕಳೆದ ವರ್ಷದ ದಸರಾದಿಂದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಣೆ ಮಾಡುತ್ತಿದೆ.
ವಿಕ್ರಮ, ಅಶ್ವತ್ಥಾಮ ಆನೆಗಳು
58 ವರ್ಷದ ಗಂಡು ಆನೆ ವಿಕ್ರಮ ಸಹ ದಸರಾದಲ್ಲಿ ಪಾಲ್ಗೊಳ್ಳಲಿದೆ. ದುಬಾರೆ ಆನೆ ಶಿಬಿರದ ನಿವಾಸಿಯಾಗಿದ್ದಾನೆ ವಿಕ್ರಮ. ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ ಈ ಆನೆ 18 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. 2015ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜಾ ವಿಧಿವಿಧಾನದಲ್ಲಿ ಭಾಗವಹಿಸುತ್ತಿದೆ.
34 ವರ್ಷದ ಗಂಡು ಆನೆ ಅಶ್ವತ್ಥಾಮ ಸಹ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ದೊಡ್ಡಹರವೆ ಆನೆ ಶಿಬಿರದ ನಿವಾಸಿಯಾಗಿದೆ. ಸಕಲೇಶಪುರದಲ್ಲಿ 2017ರಲ್ಲಿ ಈ ಆನೆಯನ್ನು ಸೆರೆ ಹಿಡಿದಿದ್ದು, ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
ಲಕ್ಷ್ಮಿ, ಚೈತ್ರಾ ಆನೆಗಳ ಪರಿಚಯ
20 ವರ್ಷದ ಹೆಣ್ಣು ಆನೆ ಲಕ್ಷ್ಮಿ ರಾಮಪುರ ಶಿಬಿರದ ನಿವಾಸಿ. ತಾಯಿಯಿಂದ ಬೇರ್ಪಟ್ಟಿದ್ದ ಈ ಆನೆ ಅರಣ್ಯ ಇಲಾಖೆ ಅಧಿಕಾರಿಗಳ ಆರೈಕೆಯಲ್ಲಿ ಬೆಳೆದಿದೆ. ಕಾಡಾನೆ, ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತದೆ. 2019ರಲ್ಲಿ ದಸರಾದಲ್ಲಿ ಸಹ ಈ ಆನೆ ಭಾಗವಹಿಸಿತ್ತು.
ಚೈತ್ರ 48 ವರ್ಷದ ಹೆಣ್ಣು ಆನೆಯಾಗಿದೆ. ರಾಮಪುರ ಶಿಬಿರದ ನಿವಾಸಿ ಇದು. ಆನೆ ಕ್ಯಾಂಪ್ನಲ್ಲಿದ್ದ ಗಂಗೆ ಎಂಬ ಆನೆಯ ಮರಿ. 2018ರಲ್ಲಿ ಆನೆ ದಸರಾದಲ್ಲಿ ಪಾಲ್ಗೊಂಡಿತ್ತು.
ಕಾವೇರಿ, ಧನಂಜಯ ಆನೆಗಳು
ದುಬಾರೆ ಆನೆ ಶಿಬಿರದ ನಿವಾಸಿಯಾದ 44 ವರ್ಷದ ಹೆಣ್ಣು ಆನೆ ಕಾವೇರಿ ಈ ಬಾರಿಯೂ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. 2009ರಲ್ಲಿ ಸೋಮವಾರ ಪೇಟೆ ಆಡಿನಾಡೂರು ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು. 9 ವರ್ಷಗಳಿಂದ ಆನೆ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
ದುಬಾರಿ ಆನೆ ಶಿಬಿರದ ಮತ್ತೊಬ್ಬ ನಿವಾಸಿ 43 ವರ್ಷದ ಧನಂಜಯ ಸಹ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 2013ರಲ್ಲಿ ಹಾಸನ ಜಿಲ್ಲೆಯಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು. ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಇದು ಪಾಲ್ಗೊಳ್ಳುತ್ತದೆ. 3 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.
38 ವರ್ಷದ ಗೋಪಾಲಸ್ವಾಮಿ ಆನೆ ಸಹ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ. ಮತ್ತಿಗೋಡು ಆನೆ ಶಿಬಿರದ ನಿವಾಸಿಯಾಗಿದ್ದಾನೆ ಗೋಪಾಲಸ್ವಾಮಿ.