ಮೈಸೂರು ದಸರಾ 2020: ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯಕ್ಕೆ ಚಾಲನೆ
ಮೈಸೂರು, ಸೆಪ್ಟೆಂಬರ್ 18: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ, ಅರಮನೆಯ ಸಾಂಪ್ರದಾಯಿಕ ದಸರಾಗೆ ಅಧಿಕೃತ ಚಾಲನೆ ನೀಡಲಾಗಿದೆ.
ಕೊರೊನಾ ವೈರಸ್ ಆತಂಕದ ನಡುವೆ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವರಾತ್ರಿ ಉತ್ಸವದ ಅಂಗವಾಗಿ ಅಂಬಾ ವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಇಂದು ಬೆಳಿಗ್ಗೆ 10 ರಿಂದ 10.15 ಗಂಟೆಗೆ ಆರಂಭಗೊಂಡಿದೆ. ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆಯನ್ನು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಇದರ ಜೊತೆಯಲ್ಲೆ ಅರಮನೆಯಲ್ಲಿನ ದಸರಾ ಖಾಸಗಿ ದರ್ಬಾರ್ ಸಿದ್ಧತೆಗೂ ಚಾಲನೆ ದೊರೆಯಲಿದೆ.
ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಯಲ್ಲಿ ಅರಳಿದ ಮೋದಿ ಮತ್ತು ತಾಯಿಯ ಚಿತ್ರ
ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ನಡೆಯಿತು
ಸಾಮಾನ್ಯವಾಗಿ ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸಿಂಹಾಸನದ ಜೋಡಣೆ ನಡೆಯುತ್ತಿತ್ತು. ಆದರೆ ಈ ಬಾರಿ ಅಧಿಕ ಮಾಸದ ಕಾರಣ ಒಂದು ತಿಂಗಳು ಮೊದಲೇ ಜೋಡಣೆ ಕಾರ್ಯ ನಡೆಯುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿವೆ. ಸಿಂಹಾಸನ ಜೋಡಣೆ ಅಂಗವಾಗಿ ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ನಡೆಯಿತು.
ಯದುವೀರರಿಂದ ಖಾಸಗಿ ದರ್ಬಾರ್
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬವನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದ್ದು, ದಸರಾ ಮಹೋತ್ಸವ ಅ.17 ರಂದು ಆರಂಭವಾಗಿ, ಅ.26 ರಂದು ಕೊನೆಗೊಳ್ಳಲಿದೆ.
ಇದೇ ಅವಧಿಯಲ್ಲಿ ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಅಕ್ಟೋಬರ್ 25 ರಂದು ಆಯುಧ ಪೂಜೆ, ಸಾಂಪ್ರದಾಯಿಕ ಜಟ್ಟಿ ಕಾಳಗ, 26 ರಂದು ಶಮೀಪೂಜೆ, ವಿಜಯದಶಮಿ ಮೆರವಣಿಗೆ ನಡೆಯಲಿದೆ.
ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದವರಿಗೆ ಮಾತ್ರ ಅವಕಾಶ
ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿ ಭಾಗಗಳನ್ನು ದರ್ಬಾರ್ ಹಾಲ್ಗೆ ತಂದು ಜೋಡಿಸಲಾಗುತ್ತಿದೆ. ಪ್ರತಿ ವರ್ಷದಂತೆ ಅರಮನೆಯ ಸಿಬ್ಬಂದಿ ಹಾಗೂ ಗೆಜ್ಜಹಳ್ಳಿ ಗ್ರಾಮದ ಕುಶಲಕರ್ಮಿಗಳು ಸಿಂಹಾಸನ ಜೋಡಣೆ ಕಾರ್ಯದಲ್ಲಿ ತೊಡಗಿದ್ದಾರೆ. .
ಪ್ರವಾಸಿಗರಿಗೆ ಅರಮನೆಯ ಒಳ ಆವರಣ ಪ್ರವೇಶ ನಿರ್ಬಂಧ
ರಾಜಮನೆತನದವರು ಅರಮನೆಯಲ್ಲಿ ಸೆಪ್ಟೆಂಬರ್ 18 ರಂದು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ ಪ್ರವಾಸಿಗರಿಗೆ ಅರಮನೆಯ ಒಳ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.