ಮೈಸೂರು ದಸರಾ: ಅಭಿಮನ್ಯು ಸಾರಥ್ಯದ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ
ಮೈಸೂರು, ಅಕ್ಟೋಬರ್ 28: ನಾಡಹಬ್ಬ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ಸಾರಥ್ಯದ ಗಜಪಡೆ ಬುಧವಾರ ನಾಡಿನಿಂದ ಕಾಡಿನತ್ತ ಹೊರಟವು.
ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿ ಜಂಬೂಸವಾರಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಗಜಪಡೆಗೆ ಮೈಸೂರು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಂಬೂಸವಾರಿ ಯಶಸ್ವಿ: ಮಾವುತರು ಹಾಗೂ ಕಾವಾಡಿಗಳಿಗೆ ಗೌರವಧನ ವಿತರಣೆ
ದಸರಾ ಗಜಪಡೆ ಹೊರಡುವ ಮುನ್ನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಪೂಜೆ ನೆರವೇರಿಸಲಾಯಿತು.
ಪೂಜೆಯ ಬಳಿಕ ಲಾರಿಗಳನ್ನೇರಿ ಆನೆ ಶಿಬಿರಗಳತ್ತ ದಸರಾ ಗಜಪಡೆ ತೆರಳಿದವು. ಪ್ರತಿ ವರ್ಷದಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿಯೂ ಸಂಭ್ರಮದಿಂದ ಪಾಲ್ಗೊಂಡಿದ್ದವು. ಕೊರೊನಾ ಕಾರಣಕ್ಕೆ ಅರಮನೆ ಆವರಣದಲ್ಲೇ ದಸರಾ ಆನೆಗಳು ತಾಲೀಮು ನಡೆಸಿದ್ದವು. ಮತ್ತು ಅರಮನೆ ಆವರಣದಲ್ಲಿ ಮಾತ್ರ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದವು.
ಕ್ಯಾಪ್ಟನ್ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಸಾಗಿ ಯಶಸ್ವಿಗೊಳಿಸಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಮಂಗಳವಾರ ಸಂಪ್ರದಾಯದಂತೆ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಪೂಜೆ ಸಲ್ಲಿಸಿ, ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನ ವಿತರಿಸಿದ್ದರು.
ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನವಾಗಿ 10 ಸಾವಿರ ರುಪಾಯಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.