ಮೈಸೂರು ದಸರಾ 2020: ಅರ್ಜುನನ ಉತ್ತರಾಧಿಕಾರಿಗೆ ಹುಡುಕಾಟ?
ಮೈಸೂರು, ಸೆಪ್ಟೆಂಬರ್ 7: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ ಕುರಿತು ನಾಳೆ ಹೈಪವರ್ ಕಮಿಟಿ ಮೀಟಿಂಗ್ ನಡೆಯಲಿದ್ದು, ಕೋವಿಡ್ ರೋಗದ ಹಿನ್ನೆಲೆಯಲ್ಲಿ ಯಾವ ರೀತಿ ದಸರಾ ಆಚರಿಸಬೇಕೆನ್ನುವ ಕುರಿತು ಅಂತಿಮ ತೀರ್ಮಾನವಾಗಲಿದೆ.
Recommended Video
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಭಾಗ್ಯ ಅಭಿಮನ್ಯುಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸತತ 8 ವರ್ಷ ಯಶಸ್ವಿಯಾಗಿ ಅಂಬಾರಿ ಹೊತ್ತ ಅರ್ಜುನ ಈಗಾಗಲೇ 60 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಬೇರೆ ಆನೆ ಅಂಬಾರಿ ಹೊರಬೇಕಾಗಿದೆ.
ಇಂದಿನಿಂದ ಚಾಮುಂಡೇಶ್ವರಿ, ನಂಜನಗೂಡು ದೇಗುಲ ಜನರಿಗೆ ಮುಕ್ತ
ಸುಪ್ರೀಂ ಕೋರ್ಟ್ ಆದೇಶದಂತೆ 60 ವರ್ಷ ತುಂಬಿದ ಆನೆಗಳಿಗೆ ಭಾರ ಹೊರಿಸುವಂತಿಲ್ಲ. ಹೀಗಾಗಿ ಈ ಬಾರಿ ಅರ್ಜುನನ ಬದಲಿಗೆ ಅಭಿಮನ್ಯು ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ. ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿದರೂ ಕೂಡಾ, ಅಂಬಾರಿ ಹೊರಲು ಆನೆ ಬೇಕೇ ಬೇಕಿದೆ. ಅಲ್ಲದೇ, ಕೊರೊನಾ ಭೀತಿಯಲ್ಲಿ ಆನೆಗಳಿಗೆ ಮೈಸೂರು ಪುರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ಸರ್ಕಾರದಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ವಯಸ್ಸಾದ ಬಳಿಕ ಆನೆಗಳಿಗೆ ವಿಶ್ರಾಂತಿ ಕೊಡಲಾಗುತ್ತದೆ
ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಗಳೂರಿನ ಅಧಿಕಾರಿಗಳಿಗೆ ಬರೆದಿರುವ ಪತ್ರಕ್ಕೆ ಇದುವರೆಗೆ ಉತ್ತರವೇ ಸಿಕ್ಕಿಲ್ಲ. ಆನೆಗಳು ದೈಹಿಕವಾಗಿ ಬಳಲುವ ಜೊತೆಗೆ ವಯಸ್ಸಾದ ಬಳಿಕ ಆನೆಗಳಿಗೆ ವಿಶ್ರಾಂತಿ ಕೊಡಲಾಗುತ್ತದೆ. ಬಲರಾಮನ ಬಳಿಕ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ 60 ವರ್ಷ ದಾಟಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಅರಣ್ಯ ಇಲಾಖೆ ನಿಯಮದ ಪ್ರಕಾರ ಮನುಷ್ಯರಂತೆ ಪ್ರಾಣಿಗಳಿಗೂ ಕಾನೂನು ಅನ್ವಯಿಸುತ್ತದೆ. ಅದರಲ್ಲೂ ಆನೆಗಳಿಗೆ 60 ವರ್ಷ ವಯಸ್ಸಾದ ಮೇಲೆ ಯಾವುದೇ ರೀತಿಯ ಭಾರವನ್ನು ಹೇರಬಾರದು ಅನ್ನುವ ನಿಯಮವಿದೆ.
ತಾಳ್ಮೆಯಿಂದ ಹೆಜ್ಜೆಯನ್ನಿರಿಸಿ ರಾಜಮಾರ್ಗದಲ್ಲಿ ಸಾಗಬೇಕು
ಒಂದು ವೇಳೆ ಅರ್ಜುನನಿಗೆ ನೇತೃತ್ವ ನೀಡದಿದ್ದರೆ, ಬದಲಿಗೆ ಮತ್ತೊಂದು ಆನೆಯನ್ನು ಗುರುತಿಸಿ ತರಬೇತಿ ನೀಡಬೇಕು. ೭೫೦ ಕೆಜಿ ತೂಕ ಹೊರುವುದಕ್ಕಿಂತಲೂ ತಾಳ್ಮೆ, ಸಂಯಮದಿಂದ ಹೆಜ್ಜೆಯನ್ನಿರಿಸಿ ರಾಜಮಾರ್ಗದಲ್ಲಿ ಸಾಗಬೇಕು. ಹೀಗಾಗಿ, ಉಳಿದಿರುವ ಅಲ್ಪ ಅವಧಿಯಲ್ಲಿ ತರಬೇತಿ ನೀಡುವ ಕಠಿಣ ಸವಾಲು ಅಧಿಕಾರಿಗಳು ಮತ್ತು ಮಾವುತರು, ಕಾವಾಡಿಗಳಿಗೆ ಎದುರಾಗಲಿದೆ.
ಒಂದೇ ಹಂತದಲ್ಲಿ ಎಲ್ಲ ಆನೆಗಳು ಮೈಸೂರಿಗೆ
ಒಂದು ವೇಳೆ ಈ ಬಾರಿಯ ಸರಳ ದಸರೆಯಲ್ಲಿ ಆನೆಗಳ ಬಳಕೆ ಇಲ್ಲದೆ ಬರೀ ಪೂಜೆ ಮಾಡಿ ಸಾರ್ವಜನಿಕ ಅಂಬಾರಿ ಮೆರವಣಿಗೆ ಕೈ ಬಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ದಸರೆಯು ಸರಳವಾಗಿ ಆಚರಿಸುವ ಜೊತೆಗೆ ಅರಮನೆ ಒಳಗೆ ಸಾಂಪ್ರದಾಯಿಕವಾಗಿ ಚಿನ್ನದ ಅಂಬಾರಿ ಮೆರವಣಿಗೆ ನಡೆಸಲು ನಿರ್ಧರಿಸಿದರೆ, ಒಂದೇ ಹಂತದಲ್ಲಿ ಎಲ್ಲ ಆನೆಗಳನ್ನು ಮೈಸೂರಿಗೆ ಕರೆತರಲು ನಿರ್ಧರಿಸಲಾಗಿದೆ.
9 ರಿಂದ 12 ಆನೆಗಳನ್ನು ಕರೆತರಲು ತಯಾರಿ
ಮೊದಲೆಲ್ಲ ಎರಡು ತಿಂಗಳ ಮುಂಚಿತವಾಗಿ ಅರಮನೆಗೆ ಅರ್ಜುನ ನೇತೃತ್ವದಲ್ಲಿ ಆರು ಆನೆಗಳು ಪ್ರವೇಶಿಸಿ ತಾಲೀಮು ಶುರು ಮಾಡುತ್ತಿದ್ದವು. ನಂತರ ಉಳಿದ ಆನೆಗಳು ಸೇರಿಕೊಳ್ಳುತ್ತಿದ್ದವು. ಈ ಬಾರಿ ಒಂದೇ ಹಂತದಲ್ಲಿ 9 ರಿಂದ 12 ಆನೆಗಳನ್ನು ಕರೆತರಲು ತಯಾರಿ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.