ಮೈಸೂರು ದಸರಾ: ವಿಜಯದಶಮಿ ದಿನದಂದು ಅರಮನೆ ಆವರಣದಲ್ಲಿ ಸರಳ ಜಂಬೂಸವಾರಿ
ಮೈಸೂರು, ಅಕ್ಟೋಬರ್ 26: ಮೈಸೂರು ದಸರಾ ಅಂದರೆ ಅಲ್ಲಿ ಸಂಭ್ರಮ, ಸಡಗರ ಹಾಗೂ ಸಂಪ್ರದಾಯಗಳ ಸಂಗಮವಾಗಿರುತ್ತದೆ. ಮೈಸೂರು ದಸರಾ ಅಂದರೆ ರೋಮಾಂಚನ, ದಸರಾ ವಿಜೃಂಭಣೆ ನೋಡುವುದೇ ಚಂದದ ಅನುಭವ. ಆದರೆ ಈ ಬಾರಿ ವಿಶ್ವವಿಖ್ಯಾತ ದಸರಾ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ. ಇಂದು ಸೋಮವಾರ ಸರಳ ಜಂಬೂಸವಾರಿ ನಡೆಯಲಿದ್ದು, ಹಿಂದಿನ ದಿನ ಭಾನುವಾರದಂದು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
ಪಟ್ಟದ ಆನೆ, ಕುದುರೆ, ಹಸು, ಒಂಟೆಗಳನ್ನು ಆನೆ ಬಾಗಿಲು ಬಳಿಯಿಂದ ಕೋಡಿ ಸೋಮೇಶ್ವರ ಸ್ವಾಮಿ ದೇಗುಲಕ್ಕೆ ಕರೆತರಲಾಯಿತು. ಈ ವೇಳೆ ಪಲ್ಲಕ್ಕಿ ಮೇಲಿದ್ದ ಪಟ್ಟದ ಕತ್ತಿ ಸಮೇತ ರಾಜವಂಶಸ್ಥರು ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದರು. ನಂತರ ಸವಾರಿ ತೊಟ್ಟಿಯಲ್ಲಿ ಆನೆ, ಒಂಟೆ, ಕುದುರೆ, ಪಲ್ಲಕಿ, ಕುದುರೆಗಳಿಗೂ ಮತ್ತು ಕಾರುಗಳಿಗೂ ಪೂಜೆ ಸಲ್ಲಿಸಿದರು.
ದೂರದರ್ಶನ, ಸಾಮಾಜಿಕ ಜಾಲತಾಣದಲ್ಲಿ ಜಂಬೂಸವಾರಿ ನೇರ ಪ್ರಸಾರ
ಮಾವುತ, ಕಾವಾಡಿಗನ ಹೆಸರಿನಲ್ಲಿ ಅರ್ಚನೆ
ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಜಂಬೂಸವಾರಿ ಗಜಪಡೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಶೃಂಗಾರಗೊಂಡಿದ್ದ ಆನೆಗಳಿಗೆ ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಹಣ್ಣು ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಅಭಿಮನ್ಯು ಆನೆಯ ಮಾವುತ, ಕಾವಾಡಿಗನ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು.
ಇದೇ ಮೊದಲ ಬಾರಿ ಅಂಬಾರಿ ಹೊರುವ ಅಭಿಮನ್ಯು
ಅ.26 ರಂದು ಸರಳ ದಸರೆಯ ಜಂಬೂಸವಾರಿ ನಡೆಯಲಿದ್ದು, ಇದೇ ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅಭಿಮನ್ಯು ಆನೆಗೆ ವಹಿಸಲಾಗಿದೆ. ಇದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಲಿದೆ. ಆದರೆ ಇಷ್ಟು ವರ್ಷ ಐದೂವರೆ ಕಿಲೋಮೀಟರ್ ನಡೀತಿದ್ದ ಜಂಬೂಸವಾರಿ, ಈ ವರ್ಷ ಕೇವಲ 400 ಮೀಟರ್ಗಷ್ಟೇ ಸೀಮಿತವಾಗಲಿದೆ. ಅಲ್ಲದೇ ಈ ಬಾರಿ ಕೇವಲ 30 ರಿಂದ 40 ನಿಮಿಷಗಳಲ್ಲಿ ಜಂಬೂಸವಾರಿ ಪೂರ್ಣಗೊಳ್ಳಲಿದೆ.
ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಷ್ಟೇ ಸರಳವಾಗಿ ಚಾಮುಂಡಿ ದೇವಿ ಮೂರ್ತಿ ಹೊತ್ತು ಅಂಬಾರಿ ಸಾಗಲಿದೆ. ಕೇವಲ 300 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಇದಕ್ಕಾಗಿ ಕುರ್ಚಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ತೆರಳುವ ಎಡ ಮತ್ತು ಬಲ ಭಾಗದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ಹತ್ತಿ ದಸರಾ ವೀಕ್ಷಣೆಗೆ ಅವಕಾಶ ನೀಡಲಾಗಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ನಡೆಸಿದೆ. ಅರಮನೆಯಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮುಖ್ಯಮಂತ್ರಿಗಳಿಂದ ಚಾಮುಂಡಿ ದೇವಿಗೆ ಪುಷ್ಪಾರ್ಚನೆ
ಇಂದು ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಒಡೆಯರ್ ಅವರು ಬನ್ನಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.59 ರಿಂದ 3.20ಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4.15ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿಗಳು ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಜಂಬೂ ಸವಾರಿಯಲ್ಲಿ 2 ಟ್ಯಾಬ್ಲೋ, ಕೆಲವೇ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ. ಸಾಯಂಕಾಲ ಬನ್ನಿ ಮಂಟಪದಲ್ಲಿ ನಡೆಯುತ್ತಿದ್ದ ಪಂಜಿನ ಕವಾಯತನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಸರಳ ದಸರಾ ಜಂಬೂಸವಾರಿ ಹಿನ್ನೆಲೆ ಮೈಸೂರು ಅರಮನೆಯ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅರಮನೆಯ ಸುತ್ತಲಿನ ಕನಿಷ್ಠ 200 ಮೀಟರ್ ದೂರದಲ್ಲೂ ಯಾರು ನಿಲ್ಲುವಂತಿಲ್ಲ. ಕಟ್ಟಡಗಳನ್ನು ಹತ್ತಿ ದಸರಾ ವೀಕ್ಷಿಸುವಂತಿಲ್ಲ ಎಂದು ಆದೇಶಿಸಲಾಗಿದೆ