ವಿಶ್ವನಾಥ್ ಬೆನ್ನಿಗೆ ನಿಂತ ದಲಿತ, ಕುರುಬ ಸಮುದಾಯ; ಸಿದ್ದು ಎದೆಯಲ್ಲಿ ಢವಢವ
ಮೈಸೂರು, ನವೆಂಬರ್ 25: ಹುಣಸೂರು ವಿಧಾನ ಸಭೆ ಉಪ ಚುನಾವಣಾ ಕಣದಲ್ಲಿ ಪ್ರಚಾರ ಕಾರ್ಯ ಬಿರುಸಾಗಿದೆ. ಈಗಾಗಲೇ ಕಾಂಗ್ರೆಸ್ ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ನಿಂದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯಿಂದ ಬಿ.ಎಸ್. ಶ್ರೀರಾಮುಲು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
ಇದೀಗ ಹುಣಸೂರಿನಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯ ವಿಶ್ವನಾಥ್ ಬೆಂಬಲಿಸುವುದಾಗಿ ಹೇಳಿವೆ. ಕ್ಷೇತ್ರದಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿದ್ದು, ಈ ನಡೆ ಕಾಂಗ್ರೆಸ್ ತಲೆ ನೋವಿಗೆ ಕಾರಣವಾಗಿದೆ.
ವಿಶ್ವನಾಥ್ ಗೆ ಕುರುಬ, ದಲಿತ ಸಂಘಟನೆಗಳ ಬೆಂಬಲ
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್. ವಿಶ್ವನಾಥ್ ಅವರಿಗೆ ಕುರುಬ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ. ದಲಿತ ಮುಖಂಡರೆಲ್ಲ ಒಗ್ಗಟ್ಟಾಗಿ ವಿಶ್ವನಾಥ್ ಅವರಿಗೆ ಬೆಂಬಲ ಸೂಚಿಸಿವೆ. ತಮ್ಮ ಸಮುದಾಯದ ಬಗ್ಗೆ ಯಾವುದೇ ರೀತಿಯ ವದಂತಿ ಹಬ್ಬಿಸದೇ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ದಲಿತ ಮುಖಂಡ ನಿಂಗರಾಜ್ ಮಾಲಡಿ ಮಾತನಾಡಿ, ಸಮುದಾಯದವರೆಲ್ಲಾ ವಿಶ್ವನಾಥ್ ಅವರನ್ನು ಮರು ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.
ಹುಣಸೂರಿಗೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಶ್ರೀರಾಮುಲು
ಹುಣಸೂರಿನಲ್ಲಿ ಹೆಚ್ಚಿದೆ ದಲಿತರ ಮತ
ಹುಣಸೂರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ದಲಿತರ ಮತಗಳಿವೆ, ಒಕ್ಕಲಿಗರ ನಂತರ ಅತಿ ಹೆಚ್ಚು ಸಂಖ್ಯೆಯಿರುವುದು ದಲಿತ ಸಮುದಾಯದ ಮತಗಳು. ನವೆಂಬರ್ 25 ರಂದು ದಲಿತ ಸಮುದಾಯಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ವಿಶ್ವನಾಥ್ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ನಿರ್ಣಯ ಕೈಗೊಂಡರು.
ಸಿದ್ದರಾಮಯ್ಯಗೆ ದೊಡ್ಡ ತಲೆ ನೋವು
ಹೀಗೆ ದಲಿತ ಮತ್ತು ಕುರುಬ ಸಮುದಾಯದ ಜನರು ವಿಶ್ವನಾಥ್ ಗೆ ಬೆಂಬಲ ನೀಡಲು ಮುಂದಾಗಿರುವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಹೊಡೆತ ನೀಡಿದೆ. ಅವರಿಗೆ ಈ ಬೆಂಬಲ ಸೋಲಿನ ಭಯವನ್ನೂ ಹುಟ್ಟಿಸಿದೆ.
ಹುಣಸೂರಿನಲ್ಲಿ ನಾವು ಗೆದ್ದಾಯ್ತು; ಪಕ್ಷಾಂತರ ಮಾಡಿದವರ ಕಥೆ ಇಷ್ಟೆ: ಜಿ. ಪರಮೇಶ್ವರ್
ಗ್ರಾಮಸ್ಥರ ಪ್ರಶ್ನೆಗೆ ತಬ್ಬಿಬ್ಬಾದ ವಿಶ್ವನಾಥ್
ಭಾನುವಾರ ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ಹುಣಸೂರು ಕ್ಷೇತ್ರದ ಕೊಳಘಟ್ಟ ಮತ್ತು ಶ್ರವಣಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಗ್ರಾಮಸ್ಥರ ತೀವ್ರ ಪ್ರತಿರೋಧವನ್ನೂ ಎದುರಿಸಬೇಕಾಯಿತು. "ವೋಟ್ ಹಾಕಿ ಗೆಲ್ಲಿಸಿದ್ದೀವಿ. ನಮ್ಮ ಕಷ್ಟ-ಸುಖ ಕೇಳಲು ನೀವು ಬಂದ್ರಾ" ಎಂದು ಮತ ಕೇಳಲು ಹೋದ ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರನ್ನು ಎರಡು ಗ್ರಾಮಗಳಲ್ಲಿ ಜನರು ತರಾಟೆಗೆ ತೆಗೆದುಕೊಂಡರು. "ನಾವು ನಿಮಗೆ ಮತ ಹಾಕಿದ್ದೆವು. ಆದರೆ ನೀವು ರಾಜೀನಾಮೆ ನೀಡಿದ್ದಿರಿ. ನೀವು ನಮ್ಮನ್ನು ಕೇಳಿ ರಾಜೀನಾಮೆ ಕೊಟ್ಟಿದ್ದೀರಾ" ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರ ಪ್ರಶ್ನೆಗೆ ತಬ್ಬಿಬ್ಬಾದ ವಿಶ್ವನಾಥ್, ಹೌದು ಹೌದು ಎಂದು ಸಮಾಧಾನ ಮಾಡಲು ಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.