ಮೈಸೂರಿನ ಬೈಲುಕುಪ್ಪೆಯಲ್ಲಿ ದಲೈಲಾಮಾರಿಗೆ ಭವ್ಯ ಸ್ವಾಗತ
ಮೈಸೂರು, ಡಿಸೆಂಬರ್ 19: ಟಿಬೆಟಿಯನ್ ನಿರಾಶ್ರಿತರ ಶಿಬಿರ ಬೈಲುಕುಪ್ಪೆಗೆ ಆಗಮಿಸಿದ ಧರ್ಮಗುರು ದಲೈಲಾಮಾ ಅವರಿಗೆ ಟಿಬೇಟಿಯನ್ನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದರು.
ಎರಡು ವರ್ಷಗಳ ನಂತರ ಬೈಲುಕುಪ್ಪೆಗೆ ಆಗಮಿಸಿದ್ದರಿಂದ ದಲೈಲಾಮಾ ಅವರನ್ನು ನೋಡಲು ಟಿಬೆಟಿಯನ್ನರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಶಿವಮೊಗ್ಗದಿಂದ ಕಾರಿನಲ್ಲಿ ಆಗಮಿಸಿದ ಅವರು ಬೈಲುಕುಪ್ಪೆಗೆ ಆಗಮಿಸುತ್ತಿದ್ದಂತೆಯೇ ದಾರಿ ನಡುವೆ ಕೊಡಗು ಮತ್ತು ಮೈಸೂರು ಜಿಲ್ಲೆಯನ್ನು ಬೇರ್ಪಡಿಸುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕುಶಾಲನಗರ ಮತ್ತು ಕೊಪ್ಪ ಸೇತುವೆಯುದ್ದಕ್ಕೂ ನೂರಾರು ಮಂದಿ ಟಿಬೇಟಿಯನ್ನರು ಹರ್ಷೋದ್ಘಾರದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು. ಧರ್ಮಗುರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಇಡೀ ಬೈಲುಕುಪ್ಪೆ ಮದುಮಗಳಂತೆ ಸಿಂಗಾರಗೊಂಡಿತ್ತು.
ನಂತರ ಸೆರಲಾಚಿ ದೇವಾಲಯ ಪ್ರವೇಶ ಮಾಡಿದ ದಲೈಲಾಮಾ ಅವರು ಹಯಗ್ರೀವ ದೇವರಿಗೆ ಆರಂಭಿಕ ಪೂಜೆ ಸಲ್ಲಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವು ಏನೇ ಮಾಡಿದರೂ ಅದನ್ನು ತಪ್ಪು ಎಂಬಂತೆ ಬಿಂಬಿಸುತ್ತಿದ್ದು, ನನ್ನ ಆ್ಯಪ್ನ್ನು ಚೀನಿಯರು ನಿಷೇಧಿಸಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಜಾರಿಯಾಗಿರುವ ಜಿಎಸ್ಟಿಯಿಂದ ಟಿಬೇಟಿಯನ್ರ ಪ್ರಮುಖ ವ್ಯಾಪಾರವಾದ ಸ್ಪೆಟರ್ ವ್ಯಾಪಾರಕ್ಕೆ ತೊಂದರೆಯಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಜಿಎಸ್ಟಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ದಲೈಲಾಮಾ ಅವರು ಮೂರುದಿನಗಳ ಕಾಲ ವಾಸ್ತವ್ಯ ಹೂಡಲಿರುವುದರಿಂದ ಸೂಕ್ತ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.