ಪಿರಿಯಾಪಟ್ಟಣದಲ್ಲಿ ಪ್ರತಿಭಟನಾನಿರತರು ಆಸ್ಪತ್ರೆಗೆ ದಾಖಲು
ಪಿರಿಯಾಪಟ್ಟಣ, ಫೆಬ್ರವರಿ 14 : ಇಲ್ಲಿನ ವಲಯ ಅರಣ್ಯ ಕಚೇರಿ ಎದುರು ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ದಿನಗೂಲಿ ನೌಕರರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದ್ದು ಮೂವರು ಅಸ್ವಸ್ಥರಾಗಿದ್ದಾರೆ.
ದಿನಗೂಲಿ ನೌಕರರ ಪೈಕಿ ವೈರಮುಡಿ ದೊಡ್ಡಹರವೆ, ನಂಜಶೆಟ್ಟಿ ಕಿತ್ತೂರು, ಹೆಚ್.ಕೆ.ರಮೇಶ್ ಹುಣಸೇತೊಪ್ಪಲು ಅಸ್ವಸ್ಥರಾಗಿದ್ದು, ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಮಾತನಾಡಿದ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ರುದ್ರಯ್ಯ ಅವರು ಪ್ರಾಣ ಹೋದರೂ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಬಿಡೆವು ಎಂದು ಅಧ್ಯಕ್ಷ ರುದ್ರಯ್ಯ ಹೇಳಿದ್ದಾರೆ.
ದಿನಗೂಲಿ ನೌಕರರಿಗೆ ಇಲಾಖೆ ವತಿಯಿಂದ ಸಿಗಬೇಕಾದ ಸೌಲಭ್ಯ ದೊರೆಯದಂತೆ ಮಾಡಿರುವುದನ್ನು ವಿರೋಧಿಸಿ, ಶೋಷಣೆಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಇದರಲ್ಲಿ ಮಹಿಳೆಯರೂ ಸೇರಿದಂತೆ ಸುಮಾರು 48 ಮಂದಿ ಹೋರಾಟ ನಡೆಸುತ್ತಿದ್ದು, ಯಾವುದೇ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ನಮ್ಮ ಹೋರಾಟ ಬೇಡಿಕೆ ಈಡೇರುವವರೆಗೂ ನಡೆಸುತ್ತೇವೆ ಎಂದು ಧರಣಿ ನಿರತರು ಹೇಳಿದ್ದಾರೆ.
ಸ್ಥಳೀಯ ಶಾಸಕರಾದ ಕೆ.ವೆಂಕಟೇಶ್ರವರನ್ನು ದಿನಗೂಲಿ ನೌಕರರು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದಾಗ ನಿಮ್ಮ ಶಾಮಿಯಾನವನ್ನು ಕಿತ್ತು ಹಾಕಿ ಕೆಲಸಕ್ಕೆ ಹೋಗಿ, ಆ ಮೇಲೆ ನೋಡೋಣ ಎಂದು ಹಗುರವಾಗಿ ಮಾತಾಡಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದ್ದಾರೆ. ಅಲ್ಲದೆ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸದೆ ಮುಂದುವರೆಸುವುದಾಗಿ ಹೇಳಿದ್ದಾರೆ.