ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ: ಪ್ರತಾಪ್ ಸಿಂಹ ವ್ಯಂಗ್ಯ
Recommended Video
ಮೈಸೂರು, ಜನವರಿ 03: ಕಪಾಲ ಬೆಟ್ಟ ಅದು ಶಿವನ ಬೆಟ್ಟ, ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಎನಿಸಿಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತಾನಾಡಿದ ಪ್ರತಾಪ್ ಸಿಂಹ ಅವರು, ಶಿವ ಮತ್ತು ಭಕ್ತರ ನಡುವಿನ ಸಂಬಂಧವನ್ನು ನೀವು ಮುರಿಯಬೇಡಿ. ಆ ಪಾಪವನ್ನು ನೀವು ಹೊತ್ತುಕೊಳ್ಳಬೇಡಿ ಎಂದು ತಿಳಿಸಿದರು.
ಏಸು ಪ್ರತಿಮೆ ನಿರ್ಮಿಸಲು ಮುಂದಾದ ಡಿಕೆಶಿಗೆ ಬಿಎಸ್ವೈ ಪುತ್ರ ಕೇಳಿದ 3 ಪ್ರಶ್ನೆಗಳು
ಕಾಂಗ್ರೆಸ್ ನವರು ಪ್ರಧಾನಿ ನರೇಂದ್ರ ಮೋದಿ ಶ್ರೀ ಸಿದ್ದಗಂಗಾ ಮಠಕ್ಕೆ ಹೋಗಿದ್ದನ್ನು ಟೀಕಿಸುತ್ತಾರೆ, ಪ್ರಧಾನಿಯವರು ಹಣೆಗೆ ವಿಭೂತಿ ಹಚ್ಚಿಕೊಂಡಿದ್ದನ್ನು ನೋಡಿ ಕಾಂಗ್ರೆಸ್ಸಿಗರು ಹೊಟ್ಟೆ ಉರಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಮೀನು ತಿಂದು ಹೋಗಿದ್ದವರಿಂದ ಪ್ರಧಾನಿಯವರು ಪಾಠ ಕಲಿಯಬೇಕಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತೆಗಳಿದರು.
ಪ್ರಧಾನಿ ಭಾಷಣವನ್ನು ಮತ್ತು ವಿಭೂತಿಯನ್ನು ಟೀಕಿಸುವ ಮನಸ್ಥಿತಿ ಕಾಂಗ್ರೆಸ್ ಯಾಕೆ ಬರುತ್ತದೆ ಎಂದು ಗೊತ್ತಿಲ್ಲ. ಹಾಗಾದರೆ ಕಾಲಬೈರವೇಶ್ವರನ ಜಾಗದಲ್ಲಿ ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆ ಮಾಡಲು ಹೊರಟಿರುವುದನ್ನು ನೋಡಿದರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಗೆ ಮತ್ಸರ ಉಂಟಾಗಿರಬೇಕು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಏಸುಗೆ ಡಿಕೆಶಿ ಫೋಟೊ; ಸಾಮಾಜಿಕ ಜಾಲತಾಣದಲ್ಲಿ ಏಸುಕುಮಾರ್ ಎಂದು ಕುಚೋದ್ಯ
ಪ್ರಧಾನಿ ಮೋದಿಯವರು ಪ್ರಸ್ತುತ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿಲ್ಲ. ಯಾಕೆ ಇಷ್ಟು ಉರಿದುಕೊಂಡು ಟ್ವಿಟ್ ಮಾಡುತ್ತಿದ್ದೀರಿ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರಿಗೆ ಪ್ರತಾಪ್ ಸಿಂಹ ಪ್ರಶ್ನೆ ಹಾಕಿದರು.
ಕಾಂಗ್ರೆಸ್ಸಿಗರಂತೆ ಸೋನಿಯಾ ಗಾಂಧಿ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಗೆ ಬಂದಿಲ್ಲ, ಕಾಂಗ್ರೆಸ್ ನಿಂದ ಹೇಳಿಸಿಕೊಂಡು ಪ್ರಧಾನಿಯವರ ಜೊತೆ ಮಾತನಾಡಬೇಕಿಲ್ಲ. ಮೋದಿಯವರು ಯಾವಾಗಲೂ ರಾಜ್ಯದ ಪರವಾಗಿದ್ದಾರೆ ಎಂದು ತಿಳಿಸಿದರು.
ನೆರೆ ಪರಿಹಾರದ ಬಗ್ಗೆ ಮಾತನಾಡದ ಮೋದಿಯನ್ನು ಟೀಕಿಸಿದ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟಕದ ಜನ ನಮಗೆ 1998 ರಿಂದಲೂ ಸಂಸದರ ಸಂಖ್ಯೆ ಏರಿಸುತ್ತಲೇ ಬಂದಿದ್ದಾರೆ. ರಾಜ್ಯದ ಜನರೊಂದಿಗೆ ನಾವಿದ್ದೇವೆ ಎಂದು ಹೇಳಿದರು.