ನಿಮ್ಮಂತೆ ನಮಗೂ "ಮುಖ್ಯಮಂತ್ರಿ" ಆಗುವ ಅವಕಾಶ ಕೊಡಿ ಎಂದ ಸಿ.ಟಿ.ರವಿ
Recommended Video
ಮೈಸೂರು, ಫೆಬ್ರವರಿ 15: ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು. ನಿನ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನು ಕಂಡು, "ನಿಮ್ಮಂತೆ ನಮಗೂ ಮುಖ್ಯಮಂತ್ರಿಯಾಗುವ ಅವಕಾಶ ಕೊಡಿ" ಎಂದು ಹಾಸ್ಯಮಯ ರೀತಿಯಲ್ಲೇ ಕೇಳಿದರು. ನಂತರ ತಮ್ಮ ಭಾಷಣದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದರು.
"ನೀವು ಶಾಶ್ವತ ಮುಖ್ಯಮಂತ್ರಿಗಳಾಗಿದ್ದೀರ, ನಮಗೂ ಕನಿಷ್ಠ ಮಾಜಿ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಭಾಗ್ಯ ನೀಡಿ" ಎಂದರು. ಸಚಿವರ ಈ ಆಸೆಗೆ ಸಂಸದ ಪ್ರತಾಪ್ ಸಿಂಹ, ತಮ್ಮ ಭಾಷಣದ ವೇಳೆ ಶುಭ ಹಾರೈಸಿದರು. "ಆಸೆ ಇದ್ದೋರು ಮಾತ್ರ ರಾಜಕೀಯಕ್ಕೆ ಬರಲು ಸಾಧ್ಯ. ಸಿಎಂ ಆಗುವ ಸಿ.ಟಿ.ರವಿ ಅವರ ಆಸೆ ಈಡೇರಲಿ" ಎಂದು ಹಾಸ್ಯವಾಗಿಯೇ ಶುಭಕೋರಿದರು.
ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಮುಖ್ಯಮಂತ್ರಿ ಚಂದ್ರು ಮಾತುಗಳು
ಸಚಿವ ಸಿಟಿ.ರವಿಗೆ ಸಿಎಂ ಆಗುವ ಆಸೆ?
ನಿನ್ನೆ ವೇದಿಕೆಯಲ್ಲಿ ಹಾಸ್ಯಮಯವಾಗಿ ಸಿಎಂ ಆಗುವ ಬಯಕೆ ಬಿಡಿಸಿಟ್ಟಿದ್ದ ಸಿ.ಟಿ.ರವಿ, ಇಂದು ಮತ್ತೆ ಅದೇ ವಿಚಾರವನ್ನು ಪ್ರಸ್ತಾಪಿಸಿದರು. "ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ನನಗೂ ಆಸೆ ಇದೆ. ಹಾಗೆಂದು ನಾನು ವಾಮಮಾರ್ಗ ಹಿಡಿಯುವುದಿಲ್ಲ. ಪಕ್ಷ, ಪಕ್ಷ ನಿಷ್ಠೆ, ಪರಿಶ್ರಮ ಪಟ್ಟು ಸಮಾಜ ಗುರುತಿಸುವ ಕೆಲಸ ಮಾಡುತ್ತೇನೆ. ಈ ನನ್ನ ನಂಬಿಕೆ ಎಂದಿಗೂ ವ್ಯತ್ಯಾಸ ಆಗಲ್ಲ. ಅದರಂತೆ ಸಮಾಜ ನನ್ನನ್ನು ಹಾಗೇ ಗುರುತಿಸಿದೆ, ನಾನೂ ಹಾಗೇ ನಡೆದುಕೊಂಡಿದ್ದೇನೆ ಎಂದು ಸಿಎಂ ಆಸೆಯನ್ನು ಪುನರುಚ್ಚರಿಸಿದರು.
ಮುಖ್ಯಮಂತ್ರಿ ಚಂದ್ರುಗೆ ಪಕ್ಷಕ್ಕೆ ಆಹ್ವಾನ
ಮುಖ್ಯಮಂತ್ರಿ ಚಂದ್ರು ಅವರನ್ನು ಬಿಜೆಪಿಗೆ ಬರುವಂತೆ ಸಂಸದ ಪ್ರತಾಪ ಸಿಂಹ ಬಹಿರಂಗವಾಗಿ ಆಹ್ವಾನ ನೀಡಿದರು. ತಮ್ಮ ಭಾಷಣದ ವೇಳೆ ಮುಖ್ಯಮಂತ್ರಿ ಚಂದ್ರು ಅವರ ಕುರಿತಂತೆ ಮಾತನಾಡಿದ ಪ್ರತಾಪ ಸಿಂಹ, "ನೀವು ಆರ್ಎಸ್ಎಸ್ ನಲ್ಲಿದ್ದಾಗ ನಿಮ್ಮ ಭಾಷಣಗಳನ್ನು ಕೇಳುತ್ತಿದ್ದೆವು, ನಿಮ್ಮ ಭಾಷಣ ಅದ್ಧುತವಾಗಿ ಇರುತ್ತಿತ್ತು. ಆದರೆ ನೀವು ಪಕ್ಷ ಬಿಡಬಾರದಿತ್ತು. ನೀವು ಬಿಜೆಪಿಯಲ್ಲೇ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ, ವಾಪಸ್ ಪಕ್ಷಕ್ಕೆ ಬನ್ನಿ" ಎಂದು ಆಹ್ವಾನ ನೀಡಿದರು.
ಬಹುರೂಪಿ ಬೆನ್ನಲ್ಲೇ ರಂಗಾಯಣದ ಹಾಲಿ-ಮಾಜಿ ನಿರ್ದೇಶಕರ ತಿಕ್ಕಾಟ
"ಗಾಂಧಿಯನ್ನು ಜನರಿಂದ ದೂರವಿಡುವ ಪ್ರಯತ್ನ"
"ದೇಶದಲ್ಲಿ ಗಾಂಧೀಜಿ ಅವರನ್ನು ದೇವರನ್ನಾಗಿ ಹೆಚ್ಚು ವೈಭವೀಕರಿಸುವ ಮೂಲಕ ಜನರಿಂದ ದೂರ ಇಡುವ ಪ್ರಯತ್ನ ಮಾಡುತ್ತಾ ಬರಲಾಗಿದೆ" ಎಂದರು. ಬಹುರೂಪಿಯ ರಂಗಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, "ಗಾಂಧಿ ಬಗ್ಗೆ ಮಾತನಾಡುವುದು ಸುಲಭ. ಆದರೆ ಅವರಂತೆ ಬದುಕುವುದು ಕಷ್ಟ. ಗಾಂಧಿ ಅವರದ್ದು ಕಲ್ಲು ಮುಳ್ಳಿನ ಹಾದಿ, ಅವರ ದಾರಿಯಲ್ಲಿ ನಡೆಯುವುದು ಅಷ್ಟು ಸುಲಭವಲ್ಲ. ಹಾಗಾಗಿ ಗಾಂಧೀಜಿ ಅವರನ್ನು ಹೆಚ್ಚು ವೈಭವೀಕರಿಸಿ ಜನರಿಂದ ದೂರ ಇಡುವ ಪ್ರಯತ್ನ ಮಾಡುತ್ತಾ ಬರಲಾಗಿದೆ" ಎಂದು ಹೇಳಿದರು.
"ಏಳು ವರ್ಷಗಳಿಂದ ನನೆಗುದಿಗೆ ಬಿದ್ದದ್ದ ಯೋಜನೆಗೆ ಈಗ ಚಾಲನೆ"
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು 3 ಎಕರೆ ಜಾಗವನ್ನು ಮೈಸೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಮಾನಸ ಗಂಗೋತ್ರಿಯ ಕೇಂದ್ರೀಯ ಭಾಷಾ ಸಂಸ್ಥಾನದ ನಿರ್ದೇಶಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ಇಂದು ಬೆಳಿಗ್ಗೆ ಸಿ.ಟಿ.ರವಿ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
"ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಲು ಅಂತಿಮ ನಿರ್ಧಾರ ಮಾಡಲಾಗಿದೆ. ಏಳು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ದೊರಕಿದ್ದು, ಬಾಲಗ್ರಹ ಪೀಡಿತವಾಗಿದ್ದ ಈ ಯೋಜನೆಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಿದೆ. ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಸ್ಥಳೀಯ ನಾಯಕರಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಈ ಯೋಜನೆಗೆ ಆಸಕ್ತಿ ತೋರಿಲ್ಲ. ದೂರದ ಊರಿನವನಾದ ನಾನು ಆಸಕ್ತಿ ವಹಿಸಿದ್ದರಿಂದ ಈ ಯೋಜನೆಗೆ ಚುರುಕು ಬಂದಿದೆ" ಎಂದರು.