ಬಳ್ಳಾರಿ ಅಪಘಾತ ಪ್ರಕರಣ; ಮಾಧ್ಯಮಗಳ ಮೇಲೆ ಸಿಡಿದ ಸಿ.ಟಿ.ರವಿ
ಮೈಸೂರು, ಫೆಬ್ರವರಿ 14: ಕಾರು ಅಪಘಾತ ಪ್ರಕರಣದಲ್ಲಿ ಸಚಿವ ಆರ್.ಅಶೋಕ್ ಮಗ ಭಾಗಿ ವಿಚಾರಕ್ಕೆ ಸಂಬಂಧಿಸಿದ ಕೇಳಿದ ಪ್ರಶ್ನೆಗೆ, ಮಾಧ್ಯಮದ ವಿರುದ್ಧವೇ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ಅಪಘಾತ ಸುದ್ದಿ ಮಾಡುತ್ತಿರೋದು ನಮ್ಮ ಮಾಧ್ಯಮದವರು, ನನ್ನ ವಿರುದ್ಧವೂ ಸಿಟಿ ರವಿ ಕುಡಿದು ಗಾಡಿ ಓಡಿಸಿ ಅಪಘಾತ ಮಾಡಿದ ಅಂತ ಪಟ್ಟ ಕಟ್ಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಂತ್ರಜ್ಞಾನ ಈಗ ಬೆಳದಿದೆ, ಸಿಸಿಟಿವಿ ದೃಶ್ಯಗಳು ಇದ್ದರೆ ಪರಿಶೀಲನೆ ಮಾಡಲಿ. ನಾನು ಅವತ್ತೇ ಹೇಳಿದ್ದೆ, ನಾನು ಬರುವಂತ ದಾರಿಯಲ್ಲಿ ಮೂರು ಸಿಸಿಟಿವಿ ಇವೆ ಚೆಕ್ ಮಾಡಿ ಅಂತ. ನಾನು ಕುಡಿತಿನಿ ಇಲ್ಲ ಅಂತ ನನ್ನ ಊರಿನ ಜನಕ್ಕೆಲ್ಲ ಗೊತ್ತು ಎಂದರು.
25ವರ್ಷಗಳ ಹಿಂದೆ ಜನತಾದಳದ ಕಡೆಯಿಂದ ಬಂದಿದ್ದ ಆಫರ್ ನೆನಪಿಸಿಕೊಂಡ ಸಚಿವ ಸಿ.ಟಿ.ರವಿ
""ಹೇಳೋದೆ ಒಂದಾದರೆ ತೋರಿಸೋದೆ ಒಂದಾಗಿರುತ್ತೆ''
ಆ ವಿಚಾರದಲ್ಲಿ ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಖಾದರ್, ಕೃಷ್ಣಬೈರೆಗೌಡ, ಆನಂದ ಸಿಂಗ್ ಬರಬೇಕಿತ್ತು. ಆದರೆ ಇಡೀ ದಿನ ಸಿ.ಟಿ ರವಿನೇ ಗಾಡಿ ಓಡಿಸುತ್ತಿದ್ದ ಅನ್ನೋದನ್ನು ಬಿಂಬಿಸುವ ಕೆಲಸ ಮಾಡಿದರು ಎಂದು ಹೇಳಿದರು.
ಆದರೆ ಯಾರೊಬ್ಬರು ಸಿಸಿಟಿವಿ ಪರಿಶೀಲಿಸೋ ಕೆಲಸ ಮಾಡಿಲಿಲ್ಲ. ನನ್ನ ಪ್ರಕರಣದಲ್ಲೇ ಹೀಗೆ ಮಾಡಿರಬೇಕಾದರೆ, ನಾನು ಯಾರನ್ನು ನಂಬಲಿ. ನಾನು ಹೇಳೋದೆ ಒಂದಾದರೆ ತೋರಿಸೋದೆ ಒಂದಾಗಿರುತ್ತೆ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು.
ಆನಂದ್ ಸಿಂಗ್ ಟೀಕೆಗೆ ಸಿ.ಟಿ.ರವಿ ಉತ್ತರ
ಸಚಿವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದಕ್ಕೆ ಟೀಕೆ ವ್ಯಕ್ತವಾಗಿದ್ದ ವಿಚಾರವಾಗಿ ಮಾತನಾಡಿ, "ಆನಂದ್ ಸಿಂಗ್ ಕಾಂಗ್ರೆಸ್ ನಲ್ಲಿದ್ದಾಗ ಶುದ್ಧರಾಗಿದ್ದರು. ಈಗ ಕಾಂಗ್ರೆಸ್ ಬಿಟ್ಟಮೇಲೆ ಆಪಾದನೆ ಮಾಡ್ತಿದ್ದಾರೆ. ಕಾಂಗ್ರೆಸ್ ಗೆ ರಾಜಿನಾಮೆ ಕೊಟ್ಟು ಈಗ ಗೆದ್ದ ಮೇಲೆ ಆಪಾದನೆ ಮಾಡುವುದು ಎಷ್ಟು ಸರಿ? ಇಷ್ಟಕ್ಕೂ ಆನಂದ್ ಸಿಂಗ್ ಮೇಲೆ ಇರುವುದು ಆಪಾದನೆ. ಅವರು ಅಪರಾಧಿ ಎಂಬುದು ಸಾಬೀತಾದರೆ ಒಂದು ಕ್ಷಣವೂ ಸಚಿವ ಸ್ಥಾನದಲ್ಲಿರುವುದಿಲ್ಲ. ಆಪಾದನೆ ಇದ್ದವರೆಲ್ಲರೂ ಅಪರಾಧಿಗಳಲ್ಲ. ಸಾರ್ವಜನಿಕ ವಲಯದಲ್ಲಿ ಸಂಶಯವಿಲ್ಲದಂತೆ ನಡೆದುಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ಉಳಿದಿದ್ದನ್ನು ಮುಖ್ಯಮಂತ್ರಿಗಳು ನೋಡಿಕೊಳ್ತಾರೆ" ಎಂದರು.
ಬಳ್ಳಾರಿ ಅಪಘಾತ ಪ್ರಕರಣ; ಸತ್ತ ರವಿ ನಾಯ್ಕನ ಮನೆಯವರಿಗೆ ಉತ್ತರ ನೀಡುವವರಾರು?
"ಟಿಪ್ಪು ಕನ್ನಡ ಪ್ರೇಮಿ ಹೇಗಾಗ್ತಾನೆ?'
ಈ ನಡುವೆ ಟಿಪ್ಪು ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕರ ವಿವಾದದ ಕುರಿತು ಮಾತನಾಡಿ, "ಟಿಪ್ಪು ಬಗ್ಗೆ ನಾನು ಕೂಡಾ ಮಾತನಾಡಿದ್ದೀನಿ. ತಾಕತ್ತಿದ್ದರೆ ನನ್ನನ್ನೂ ವಜಾ ಮಾಡಿ ಅಂತ ಕೇಳಲಿ" ಎಂದು ತಿರುಗೇಟು ನೀಡಿದರು. "ಟಿಪ್ಪು ಮತಾಂಧ, ಕೊಡವರ ಮೇಲೆ ದೌರ್ಜನ್ಯ ಮಾಡಿರುವುದು ಸತ್ಯ. ಮಲಬಾರಿಗಳ ಮೇಲೆ ಟಿಪ್ಪು ಹಾಗೂ ಆತನ ಸೈನಿಕರು ಅತ್ಯಾಚಾರ ಮಾಡಿರುವುದು ಸತ್ಯ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಮಾಡಿ ನೆತ್ತರು ಹರಿಸಿದ್ದು ಎಷ್ಟು ಸತ್ಯವ್ಯೋ. ಅಷ್ಟೇ ಸತ್ಯ ಬ್ರಿಟಿಷರ ವಿರುದ್ಧವೂ ಹೋರಾಟ ಮಾಡಿದ್ದ. ನಾವೂ ಎರಡೂ ಸತ್ಯಗಳನ್ನು ಹೇಳಬೇಕು. ಒಂದನ್ನು ಮಾತ್ರ ಹೇಳಿ ಇನ್ನೊಂದನ್ನು ಮರೆಮಾಚುವುದು ತಪ್ಪು. ಟಿಪ್ಪುವನ್ನು ಕನ್ನಡ ಪ್ರೇಮಿ ಎನ್ನುವುದು ಹಾಸ್ಯಾಸ್ಪದ ಸಂಗತಿ. ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದವ ಕನ್ನಡ ಪ್ರೇಮಿ ಹೇಗಾಗ್ತಾನೆ?" ಎಂದರು.
ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ
ಪುಲ್ವಾಮ ದಾಳಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, "ಹೆತ್ತ ತಾಯಿಯನ್ನು ನಂಬಲಾಗದ ಸ್ಥಿತಿಗೆ ಅವರು ಬಂದಿದ್ದಾರೆ. ಭಯೋತ್ಪಾದಕರನ್ನು ಮಟ್ಟ ಹಾಕಿದರೆ ಅದನ್ನು ನಂಬುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಅಂದರೆ ಸೈನಿಕರನ್ನು ನಂಬಲ್ಲ. ಎಲೆಕ್ಷನ್ ಅಂದ್ರೆ ಇವಿಎಂ ನಂಬಲ್ಲ. ಅವರು ಯಾವ ದೇಶದ ನಾಯಕರು ಎಂಬುದೇ ಗೊತ್ತಿಲ್ಲ. ನಮ್ಮ ಸೈನಿಕರ ದಾಳಿಗಳನ್ನೇ ಅನುಮಾನದಲ್ಲಿ ನೋಡಿದ್ದಾರೆ" ಎಂದು ಹೇಳಿದರು.