ಮೈಸೂರು ಪೊಲೀಸ್ ಭವನದ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ?
ಮೈಸೂರು, ಜೂನ್ 19: ಮೈಸೂರು ನಗರದ ಪ್ರತಿಷ್ಠಿತ ಪೊಲೀಸ್ ಭವನದ ಹೆಸರಿನಲ್ಲಿ ಲೂಟಿ ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 18 ವರ್ಷದಿಂದ ಸ್ಪಂದನ ಸಹಕಾರ ಸಂಘದ ಹೆಸರಿನಲ್ಲಿ ಪೊಲೀಸ್ ಭವನ ನಿರ್ಮಾಣವಾಗಿತ್ತು. ಆದರೆ ಅಕ್ರಮ ಮಾಡುವ ಸಲುವಾಗಿ ಪೊಲೀಸ್ ವೆಲ್ ಫೇರ್ ಟ್ರಸ್ಟ್ ಹೆಸರಿನಲ್ಲಿ ವ್ಯವಹಾರ ನಡೆಸಲಾಗಿದೆ. ಸಹಕಾರ ಸಂಘದಿಂದ ಟ್ರಸ್ಟ್ಗೆ ವರ್ಗಾವಣೆಯಾದ ಮಾಹಿತಿ ಸಂಘದ ಸದಸ್ಯರಿಗೆ ಇಲ್ಲ. ಪೊಲೀಸ್ ವೆಲ್ ಫೆರ್ ಟ್ರಸ್ಟ್ ಸ್ಥಾಪಿಸಿ ಸರ್ಕಾರಕ್ಕೂ ಹಣ ಕೊಡದೆ ಪೊಲೀಸರಿಗೂ ಸಹಾಯ ಮಾಡದೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
1.65 ಕೋಟಿ ತೆರಿಗೆ ಕಟ್ಟದಿದ್ದರೆ ಮೈಸೂರಿನ ಪೊಲೀಸ್ ಭವನ ಜಪ್ತಿ
ಪೊಲೀಸ್ ಭವನ ನಿರ್ಮಾಣ ಸಂದರ್ಭದಲ್ಲಿ ಆಯುಕ್ತರಾಗಿದ್ದ ಕೆಂಪಯ್ಯ ಅವರ ಮೇಲೆ ಆರೋಪವಿತ್ತು. ಈಗಲೂ ಸಿ.ಜೆ.ಮುರುಳೀಧರ್ ಎಂಬ ಎಎಸ್ ಐ ಸಿಬ್ಬಂದಿಯಿಂದ ಟ್ರಸ್ಟ್ ಹೆಸರಿನಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ. ಪಾಲಿಕೆಗೆ 1 ಕೋಟಿ 65 ಲಕ್ಷದಷ್ಟು ತೆರಿಗೆ ಹಣ ಪಾವತಿಸದಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸಬೇಕು ಎಂದರು.
ಪಾಲಿಕೆಯಿಂದ ನೀಲಿನಕ್ಷೆಯ ಅನುಮತಿ ಪಡೆದುಕೊಳ್ಳದೆ ಟ್ರಸ್ಟ್ ನಿರ್ಮಾಣವಾಗಿದೆ. ಈವರೆಗೂ ಪೊಲೀಸ್ ಭವನದ ಕಟ್ಟಡ ಕಮಾಂಡೆಂಟ್ ಹೆಸರಿನಲ್ಲಿ ಇದೆ. ಪೊಲೀಸ್ ಭವನ ನಿರ್ಮಾಣ ಆಗಿರುವ ಸ್ಥಳವೂ ಸರ್ಕಾರದ ಹೆಸರಿನಲ್ಲಿ ಇದೆ. ಹಾಗಾಗಿ ತಕ್ಷಣವೇ ಈ ಕಟ್ಟಡವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿ ಎಂದು ಸಾಮಾಜಿಕ ಹೋರಾಟಗಾರ ಗಂಗರಾಜು ಆಗ್ರಹಿಸಿದರು.