ಸರಳ ದಸರಾದಲ್ಲೂ ದುಂದು ವ್ಯಯ: ಸಾರ್ವಜನಿಕ ಆರೋಪ
ಮೈಸೂರು, ನವೆಂಬರ್ 2: ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಮಾಡುವ ಮೂಲಕ ಸರ್ಕಾರದ ಹಣ ಉಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಹೇಳಿಕೊಂಡಿದೆ.
ಈ ಕುರಿತು ನಿನ್ನೆಯಷ್ಟೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದಸರಾದ ವೆಚ್ಚದ ಲೆಕ್ಕ ಪತ್ರವನ್ನೂ ನೀಡಿದ್ದಾರೆ. ಆದರೆ ಬಿಡುಗಡೆ ಮಾಡಿರುವ ಖರ್ಚು ವೆಚ್ಚ ಸಾರ್ವಜನಿಕ ಆಕ್ಷೇಪಕ್ಕೆ ಕಾರಣವಾಗಿದೆ.
ಮೈಸೂರು ದಸರಾ-2020ರ ವೆಚ್ಚದ ಲೆಕ್ಕ ಕೊಟ್ಟ ಸಚಿವ ಎಸ್.ಟಿ ಸೋಮಶೇಖರ್
ಚಾಮುಂಡೇಶ್ವರಿ ಬೆಟ್ಟ ಹಾಗೂ ಅರಮನೆಯ ಆವರಣಕ್ಕೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳಿಗೆ 2.05 ರೂ.ಕೋಟಿ ರುಪಾಯಿ ಖರ್ಚಿನ ಲೆಕ್ಕವನ್ನು ಮೈಸೂರು ಜಿಲ್ಲಾಡಳಿತ ತೋರಿಸಿದೆ. ಹತ್ತು ದಿನಗಳ ಸರಳ ಕಾರ್ಯಕ್ರಮಕ್ಕೆ ಇಷ್ಟು ಹಣ ಬೇಕಾಗಿತ್ತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸರಳ ದಸರಾವಾಗಿದ್ದರಿಂದ ಈ ಬಾರಿ ಇಲಾಖೆಯ ಅಭಿಮನ್ಯು, ಗೋಪಿ, ವಿಕ್ರಮ, ಕಾವೇರಿ, ವಿಜಯ ಎಂಬ ಐದು ಆನೆಗಳನ್ನು ಮಾತ್ರ ಅರಮನೆಗೆ ಕರೆ ತರಲಾಗಿತ್ತು. ಆರಂಭದ ದಿನಗಳಲ್ಲಿ ಅರಮನೆಯಲ್ಲಿ ಆನೆಗಳಿಗೆ ಆಹಾರ ಪೂರೈಕೆಗೆ ಟೆಂಡರ್ ದಾರರು ಬಾರದೇ ಇದ್ದ ಕಾರಣ, ಮೃಗಾಲಯದಿಂದ ಆಹಾರ ತರಿಸಿ ನೀಡಲಾಗುತ್ತಿತ್ತು.
ಆದರೆ, 25 ದಿನಗಳಿಗೆ ಐದು ಆನೆಗಳ ಖರ್ಚು ಎಂದು 35 ಲಕ್ಷ ರೂ. ಬಿಲ್ ತೋರಿಸಲಾಗಿದೆ. ಅಂದರೆ ಒಂದು ಆನೆಗೆ 7 ಲಕ್ಷ ರುಪಾಯಿ ವೆಚ್ಚ ತೋರಿಸಲಾಗಿದ್ದು, ದಿನವೊಂದಕ್ಕೆ ಸುಮಾರು 28 ಸಾವಿರ ರೂ. ವೆಚ್ಚ ಆಗಿದೆ. ಆನೆಗಳ ನಿರ್ವಹಣೆಗೆ ಇಷ್ಟೊಂದು ಹಣ ಬೇಕೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಅಲ್ಲದೆ, ಕೊರೊನಾ ವಾರಿಯರ್ಸ್ಗೆ ನೀಡಲಾಗುವ ಪ್ರಮಾಣ ಪತ್ರ ಮುದ್ರಣಕ್ಕೆ 8,496 ರೂ. ವೆಚ್ಚ ತೋರಿಸಲಾಗಿದೆ. ರಾಜವಂಶಸ್ಥರಿಗೆ ಗೌರವಧನ 40 ಲಕ್ಷ ರೂ.ನೀಡಲಾಗಿದ್ದು, ಕಳೆದ ವರ್ಷ 25 ಲಕ್ಷ ರೂ. ನೀಡಲಾಗಿತ್ತು. ಸರಳ ದಸರಾ ಆಗಿದ್ದರಿಂದ ಗೌರವಧನ ಕಡಿಮೆ ಮಾಡಬಹುದಿತ್ತು ಎಂದು ಸಾರ್ವಜನಿಕರು ಹೇಳುತಿದ್ದಾರೆ.
ಸ್ವಾಗತ ಸಮಿತಿಗೆ 1,80,500 ರೂ. ವೆಚ್ಚ ಮಾಡಲಾಗಿದೆ. ಹೀಗಾಗಿ ಸರಳ ದಸರಾ ಎಂದು ಹೇಳಿಕೊಂಡರೂ ದುಂದು ವ್ಯಯ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.