ಸುಳ್ವಾಡಿ ವಿಷಪ್ರಸಾದ ದುರಂತ; ಇನ್ನೂ ಪಾವತಿಯಾಗಿಲ್ಲ ಆಸ್ಪತ್ರೆ ಬಿಲ್
ಮೈಸೂರು, ಜೂನ್ 6: ಕಳೆದ ವರ್ಷ ಡಿಸೆಂಬರ್ ನಲ್ಲಿ ಚಾಮರಾಜನಗರದ ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಇನ್ನೂ ಸರಿಯಾಗಿ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮತ್ತೊಂದು ದುರಂತ: ವಿಷ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಘಟನೆಯಲ್ಲಿ ನೂರಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದರು. ಅಲ್ಲದೇ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಮಂದಿ ಸ್ಥಿತಿಯ ಗಂಭೀರವಾಗಿತ್ತು. ಆ ಸಮಯದಲ್ಲಿ ಸಮರೋಪಾದಿಯಲ್ಲಿ ಜಿಲ್ಲಾಡಳಿತ ಚಿಕಿತ್ಸೆಗೆ ವ್ಯವಸ್ಥೆಯನ್ನು ನಡೆಸಿತ್ತು. ಮೈಸೂರಿನ ಜೆಎಸ್ ಎಸ್, ಅಪೋಲೊ, ಕೊಲಂಬಿಯಾ ಏಷಿಯಾ ಸೇರಿದಂತೆ ಇನ್ನಿತರ ಖಾಸಗಿ ಆಸ್ಪತ್ರೆಗಳು ತೀರಾ ಗಂಭೀರಾವಸ್ಥೆಗೆ ತಲುಪಿದ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿದ್ದವು. ಆದರೆ, ಘಟನೆ ನಡೆದು 5 ತಿಂಗಳು ಕಳೆಯುತ್ತಾ ಬಂದರೂ ಚಿಕಿತ್ಸಾ ವೆಚ್ಚ ಮಾತ್ರ ಇನ್ನೂ ಆಸ್ಪತ್ರೆಗಳಿಗೆ ತಲುಪಿಲ್ಲ.
ಮೈಸೂರಿನ 12 ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ರೋಗಿಗಳಿಗೆ ನೀಡಲಾದ ಚಿಕಿತ್ಸೆಯ ಒಟ್ಟು ಮೊತ್ತ 1.27 ಕೋಟಿ ರೂಪಾಯಿ. ಆದರೆ, ಪ್ರಕರಣ ನಡೆದು ಐದು ತಿಂಗಳು ಕಳೆದರೂ ಇನ್ನೂ ಆಸ್ಪತ್ರೆಗಳಿಗೆ ಬಿಲ್ ಪಾವತಿಯಾಗಿಲ್ಲ. ಆಸ್ಪತ್ರೆಯ ಆಡಳಿತ ಮಂಡಳಿ ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಕಳುಹಿಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಈ ಕುರಿತು ಪರಿಶೀಲಿಸಲಾಗುವುದು. ಚಿಕಿತ್ಸಾ ವೆಚ್ಚ ಪಾವತಿಯ ಕಡತ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.