ಬಾಲ್ಯವಿವಾಹ ತಡೆಗೆ ವಾಟ್ಸಪ್ ಗ್ರೂಪ್: ಮೈಸೂರು ಡಿಸಿ
ಮೈಸೂರು , ಜನವರಿ 11 : ಬಾಲ್ಯವಿವಾಹದ ಬಗ್ಗೆ ವಿವಾಹ ನಡೆಯುವ 2 ಅಥವಾ 3 ಗಂಟೆಗಳಿರುವಾಗ ಸ್ವಯಂ ಸೇವಾ ಸಂಸ್ಥೆ ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಯುತ್ತದೆ. ಸ್ಥಳಕ್ಕೆ ತಲುಪುವುದರ ಒಳಗಾಗಿ ಬಾಲ್ಯವಿವಾಹ ನಡೆದೆ ಬಿಟ್ಟಿರುತ್ತದೆ. ಹೀಗಾಗಿ ಹೋಬಳಿ, ತಾಲ್ಲೂಕು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಸೆರಿ ವಾಟ್ಸಪ್ ಗ್ರೂಪ್ ರಚಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ಮಾತನಾಡಿದ ಜಿಲ್ಲಾದಿಕಾರಿ ಡಿ.ರಂದೀಪ್ ಬಾಲ್ಯವಿವಾಹವನ್ನು ತಡೆಗಟ್ಟಲು ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳನ್ನು ಗುರುತಿಸಿ ಅವರ ಮೊಬೈಲ್ ಸಂಖ್ಯೆ ಪಡೆದು ವಾಟ್ಸಪ್ ಗುಂಪು ರಚಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರಾಧ ಅವರಿಗೆ ತಿಳಿಸಿದರು.[ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ]
ವಾಟ್ಸಪ್ ಗುಂಪಿನಲ್ಲಿ ನೀವು ಮಾಹಿತಿಯನ್ನು ಶೀಘ್ರವಾಗಿ ರವಾನಿಸಬಹುದು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಬಹುದು. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಬಾಲ್ಯವಿವಾಹ ತಡೆಗಟ್ಟಿದ ಸಂದರ್ಭದಲ್ಲಿ ಪೋಷಕರಿಂದ ಮುಚ್ಚಳಿಕೆ ಪತ್ರ ಪಡೆಯಲಾಗುವುದು. ಮುಚ್ಚಳಿಕೆ ಪತ್ರ ಬರೆದುಕೊಟ್ಟ ನಂತರವು ಬಾಲ್ಯ ವಿವಾಹ ಮಾಡಿದ ಪ್ರಕರಣಗಳ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.[ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆಯಿತು ಬಾಲ್ಯವಿವಾಹ]
ಆರ್.ಎಲ್.ಹೆಚ್.ಪಿ ಸಂಸ್ಥೆಯ ಸರಸ್ವತಿ ಮಾತನಾಡಿ ಮಕ್ಕಳ ಸಹಾಯವಾಣಿ 1098 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಸಹಾಯವಾಣಿಯ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸಹಾಯವಾಣಿ ಸಂಖ್ಯೆಯ ಫಲಕವನ್ನು ಅಳವಡಿಸಬೇಕು ಎಂದರು.
ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ 610 ಕರೆಗಳನ್ನು ಸ್ವೀಕರಿಸಿದ್ದು, 464 ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಬಾಲ್ಯವಿವಾಹ ಕುರಿತು 51, ಕಾಣೆಯಾದ ಮಕ್ಕಳ ಬಗ್ಗೆ 18, ಬಾಲಕಾರ್ಮಿಕ ಪದ್ಧತಿಯ ಬಗ್ಗೆ- 67, ಶಾಲೆ ಬಿಟ್ಟ ಮಕ್ಕಳ ಬಗ್ಗೆ 86 ದೂರುಗಳನ್ನು ಸ್ವೀಕರಿಸಲಾಗಿದೆ ಎಂದರು.