ಕೇಂದ್ರೀಕೃತ ಪ್ರವಾಸೋದ್ಯಮ ತಾಣವಾಗಿ ಮೈಸೂರು ಜಿಲ್ಲೆ!
ಬೆಂಗಳೂರು, ಫೆ. 05: ಮೈಸೂರು ಜಿಲ್ಲೆಯಲ್ಲಿ ಮೈಸೂರು ನಗರ, ಬೈಲುಕುಪ್ಪೆ, ನಂಜನಗೂಡು ಮತ್ತು ಸೋಮನಾಥಪುರವನ್ನು ಕೇಂದ್ರೀಕೃತ ಪ್ರವಾಸೋದ್ಯಮ ತಾಣಗಳಾಗಿ ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಸ್. ಎ. ರಾಮದಾಸ್ ಪರವಾಗಿ ಶಾಸಕ ಬಿ.ಸಿ. ನಾಗೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು. 2020-25ನೇ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಕೇಂದ್ರೀಕೃತ ಪ್ರವಾಸೋದ್ಯಮ ತಾಣಗಳಾಗಿ ಗುರುತಿಸಿರುವುದಾಗಿ ಸದನಕ್ಕೆ ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ತಾಣಗಳಲ್ಲಿ ಯಾತ್ರಿನಿವಾಸ, ಶೌಚಾಲಯ, ಕುಡಿಯುವ ನೀರು ಹಾಗೂ ಸಂಪರ್ಕ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಟೂರಿಸಂ ವಿಷನ್ ಗ್ರೂಪ್ ನಡಿ ಒಟ್ಟು 65 ಕಾಮಗಾರಿಗಳನ್ನು ಮೈಸೂರು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ. 7,122.50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದು3776.75 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಮೈಸೂರು ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಹೆರಿಟೇಜ್, ಸ್ವಾಸ್ತ್ಯ, ಶಿಕ್ಷಣ ಹಾಗೂ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ದಿಮೆದಾರರಿಗೆ ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದ್ದು, ತೆರಿಗೆ ವಿನಾಯಿತಿ ಸಹ ನೀಡಲಾಗುವುದು ಎಂದು ಸಚಿವ ಯೋಗೇಶ್ವರ ಸದನಕ್ಕೆ ಭರವಸೆ ನೀಡಿದರು.