ಅನಿಲ್ ಚಿಕ್ಕಮಾದುಗೆ 100 ಕೋಟಿಯ ಡೀಲ್ ಕೊಟ್ಟರೆ ಸಿಪಿ ಯೋಗೀಶ್ವರ್?
ಮೈಸೂರು, ಸೆಪ್ಟೆಂಬರ್ 16 : "ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸಿಪಿ ಯೋಗೀಶ್ವರ್ ನನ್ನನ್ನು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದರೆ 100 ಕೋಟಿ ಜೊತೆಗೆ ಇನ್ನಿತರ ಸವಲತ್ತು ಒದಗಿಸುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ನಿಂತರೆ ಚುನಾವಣಾ ವೆಚ್ಚವನ್ನು ತಾವೇ ಭರಿಸುವುದಾಗಿ ದೂರವಾಣಿ ಕರೆಯಲ್ಲಿ ತಿಳಿಸಿದ್ದು, ಯೋಗೇಶ್ವರ್ ದೂರವಾಣಿಯಲ್ಲಿ ಮಾತನಾಡಿದ ಆಡಿಯೋ ರೆಕಾರ್ಡ್ ತಮ್ಮ ಬಳಿ ಇದೆ" ಎಂದು ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
'ಕೈ' ಶಾಸಕರಿಗೆ ಹಣದ ಆಮಿಷವೊಡ್ಡಿದ ಬಿಜೆಪಿ ನಾಯಕರ ಪಟ್ಟಿ
ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನಿಲ್ ಚಿಕ್ಕಮಾದು ಬಿಜೆಪಿಗೆ ಸೇರುತ್ತಾರೆ ಎಂಬುದು ಸುಳ್ಳು. ಈ ಬಗ್ಗೆ ಮಾಧ್ಯಮಗಳಲ್ಲಿ ಕೇಳಿದ್ದೇನೆ. ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ.
ನಾನು ಕಷ್ಟದಲ್ಲಿದ್ದಾಗ ನನಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಅನಿಲ್ ಸ್ಪಷ್ಟಪಡಿಸಿದರು.
ಸಂಸದ ಧ್ರುವ ನಾರಾಯಣ್ ಮಾತನಾಡಿ, ಆಪರೇಷನ್ ಕಮಲ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುವ ಯತ್ನ ಮಾಡಿದೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕಿದೆ. ಈ ಕೃತ್ಯವನ್ನು ಬಿಜೆಪಿ ನಾಯಕರು ಕೈ ಬಿಡಬೇಕಿದೆ.
ಆಪರೇಷನ್ ಕಮಲ : ಆರ್ಎಸ್ಎಸ್ನಿಂದ ಅಮಿತ್ ಶಾಗೆ ವರದಿ!
ಯೋಗೇಶ್ವರ್ ಅವರು ದಕ್ಷಿಣ ಕರ್ನಾಟಕದಲ್ಲಿ ಆಪರೇಷನ್ ಕಮಲದಡಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್ ಕುಮಾರ್ ಮತ್ತಿತರರು ಭಾಗಿಯಾಗಿದ್ದರು.